ಹುಸಿ ಭರವಸೆಗಳೇ ಬಿಜೆಪಿಯ ಸಾಧನೆ: ಶ್ರೀನಿವಾಸ್‌ ಮಾನೆ

By Kannadaprabha NewsFirst Published Sep 20, 2021, 12:06 PM IST
Highlights

*  ಬಿಜೆಪಿ ನಾಯಕರ ಮಾತಿಗೆ ಈಗ ಜನ ಮರಳಾಗೋದಿಲ್ಲ
*  ಹುಸಿ ಭರವಸೆ ನೀಡುವುದನ್ನು ನಿಲ್ಲಿಸಿ ಜನಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಲಿ 
*  ಬಿಜೆಪಿ ಅಧಿಕಾರದಲ್ಲಿ ಮುಂದುವರೆಯಬೇಕೇ ಅನ್ನೋದನ್ನ ಜನರೇ ನಿರ್ಧರಿಸಲಿದ್ದಾರೆ

ಹಾನಗಲ್ಲ(ಸೆ.20): ಹುಸಿ ಭರವಸೆಗಳೇ ಬಿಜೆಪಿಯ ಸಾಧನೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 7 ವರ್ಷಗಳು ಗತಿಸಿದರೂ ಜನಸಾಮಾನ್ಯರ ಕಣ್ಣೀರು ಒರೆಸುವುದು ಸಾಧ್ಯವಾಗಿಲ್ಲ. ಇಂಥ ಬಿಜೆಪಿ ಅಧಿಕಾರದಲ್ಲಿ ಮುಂದುವರೆಯಬೇಕೇ ಎನ್ನುವುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಹರಿಹಾಯ್ದರು. 

ಶುಕ್ರವಾರ ಹಾನಗಲ್ಲ ತಾಲೂಕಿನ ಕಲಕೇರಿ ತಾಂಡಾದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಆಗಿರುವ ಉದ್ಯೋಗ ನಷ್ಟವೇ ಇದಕ್ಕೆ ಸಾಕ್ಷಿ. ಯುವಕರು ದುಡಿಮೆ ಇಲ್ಲದೇ ಕಂಗಾಲಾಗಿದ್ದು, ಭವಿಷ್ಯದ ಚಿಂತನೆಯಲ್ಲಿದ್ದಾರೆ. ಜನಮಾನ್ಯರ ಜೀವನ ಬೀದಿಗೆ ಬಂದು ನಿಂತಿದ್ದರೂ ಬಿಜೆಪಿ ನಾಯಕರು ಮಾತ್ರ ಇಂದಿಗೂ ಭರವಸೆಗಳಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಹೊಸ ಹೊಸ ಭರವಸೆ ನೀಡುವಲ್ಲಿಯೇ ಕಾಲ ಕಳೆದರೆ ಈ ಹಿಂದೆ ನೀಡಿರುವ ಭರವಸೆಗಳ ಗತಿಯೇನು? ಎಂದು ಪ್ರಶ್ನಿಸಿದ ಅವರು ಇನ್ನಾದರೂ ಬಿಜೆಪಿ ನಾಯಕರು ಸುಳ್ಳು ಹೇಳುವುದು, ಹುಸಿ ಭರವಸೆ ನೀಡುವುದನ್ನು ನಿಲ್ಲಿಸಿ ಜನಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಲಿ ಎಂದು ಆಗ್ರಹಿಸಿದರು.

ಹೊಸ ಮಾರ್ಗಸೂಚಿ: 'ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ನೈಟ್‌ ಕರ್ಫ್ಯೂ'

ಅಧ್ಯಕ್ಷತೆ ವಹಿಸಿದ್ದ ಅಕ್ಕಿಆಲೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುಟ್ಟಪ್ಪ ನರೇಗಲ್‌ ಮಾತನಾಡಿ, ಬಿಜೆಪಿ ನಾಯಕರ ಮಾತಿಗೆ ಈಗ ಜನ ಮರಳಾಗುವುದಿಲ್ಲ. ಅಧಿಕಾರಕ್ಕೆ ಬಂದು ಬಿಜೆಪಿ ಏನೂ ಮಾಡಿಲ್ಲ ಎನ್ನುವ ಅರಿವು ಜನಸಾಮಾನ್ಯರಿಗೆ ಆಗಿದೆ. ಬಿಜೆಪಿಯ ವೈಫಲ್ಯ ಹಾಗೂ ಜನವಿರೋಧಿ ನೀತಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುವುದು. ಕಾರ್ಯಕರ್ತರು ಈ ಬಗೆಗೆ ಜನಜಾಗೃತಿ ಮೂಡಿಸುವಂತೆ ಕರೆ ನೀಡಿದರು.

ಜಿಪಂ ಮಾಜಿ ಸದಸ್ಯರಾದ ಮಹದೇವಪ್ಪ ಬಾಗಸರ, ಟಾಕನಗೌಡ ಪಾಟೀಲ, ಮುಖಂಡರಾದ ಚೆನ್ನಪ್ಪ ಕರೆಕ್ಯಾತನಹಳ್ಳಿ, ಮಹೇಶ್‌ ಬಣಕಾರ, ಕರಿಯಪ್ಪ ಬಣಕಾರ, ಹಾಲಪ್ಪ ಕರೆಕ್ಯಾತನಹಳ್ಳಿ, ಪ್ರಕಾಶ್‌ ಬಣಕಾರ ಇದ್ದರು.
 

click me!