'ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲು ಪಾಲ್ಗೊಂಡಿದ್ದೇ ಮುಸ್ಲಿಮರು'

By Kannadaprabha NewsFirst Published Jan 30, 2020, 8:39 AM IST
Highlights

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಇಬ್ರಾಹಿಂ ಭಾಷಣ| ರಾಮ ಮಂದಿರ, ತ್ರಿವಳಿ ತಲಾಕ್‌ ವಿಷಯಗಳು ಮುಗಿದಿದ್ದು ಯಾವ ವಿಷಯಗಳು ಬಿಜೆಪಿಗೆ ಇದೀಗ ಇಲ್ಲ| ಹೀಗಾಗಿ ಬಿಜೆಪಿ ಸಿಎಎ ಕಾನೂನು ಜಾರಿಗೊಳಿಸಲು ಮುಂದಾಗಿದೆ|

ರಟ್ಟೀಹಳ್ಳಿ(ಜ.30): ಪ್ರಗತಿಯತ್ತ ಮುಖ ಮಾಡಿದ್ದ ಭಾರತ ಇಂದು ವಿವಿಧ ರೀತಿಯ ಹೋರಾಟ, ಒಂದು ವರ್ಗವನ್ನು ತುಳಿಯುವದರ ವಿರುದ್ಧ ಹೋರಾಟ ನಡೆಯಲು ಕೇಂದ್ರ ಸರ್ಕಾರ ಕಾರಣವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. 

ಪಟ್ಟಣದಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದು ಯಾವುದೇ ಒಂದು ಜಾತಿ, ಧರ್ಮದ ಹೋರಾಟವಲ್ಲ. ಈಗ ಶುರುವಾಗಿರುವುದು 12ನೇ ಶತಮಾನದ ಹೋರಾಟ. ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲು ಪಾಲ್ಗೊಂಡಿದ್ದು ಮುಸ್ಲಿಂರು. ಈ ದೇಶದಲ್ಲಿ ಶೇ. 20ರಷ್ಟು ಮುಸ್ಲಿಂರು ಇದ್ದರೆ ಶೇ. 80ರಷ್ಟು ಇತರೆ ಜನಾಂಗದವರು ಇದ್ದಾರೆ. 70 ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಹದೆಗೆಟ್ಟಿರಲಿಲ್ಲ. ದೇಶದಲ್ಲಿ 6 ಕೋಟಿ ಯುವಕರು ನಿರುದ್ಯೋಗಿಯಾಗಿದ್ದಾರೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ವಿಫಲವಾಗಿದ್ದು ಇದನ್ನು ವಿರೋಧಿಸಿದವರಿಗೆ ದೇಶದ್ರೋಹ ಪಟ್ಟಕಟ್ಟಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಮ ಮಂದಿರ, ತ್ರಿವಳಿ ತಲಾಕ್‌ ವಿಷಯಗಳು ಮುಗಿದಿದ್ದು ಯಾವ ವಿಷಯಗಳು ಬಿಜೆಪಿಗೆ ಇದೀಗ ಇಲ್ಲ. ಹೀಗಾಗಿ ಅವರು ಸಿಎಎ ಕಾನೂನು ಜಾರಿಗೊಳಿಸಲು ಮುಂದಾಗಿದ್ದಾರೆ. ಪ್ರಧಾನಿ ಮೋದಿಗೆ ತಮ್ಮ ಹೆಂಡತಿ ಬಗ್ಗೆ ಯೋಚಿಸದೆ ನಮ್ಮ ಹೆಂಡತಿಯ ಬಗ್ಗೆ ಯೋಚಿಸಲು ಹೊರಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ ಮಾತನಾಡಿ, ಬಿಜೆಪಿ ಸರ್ಕಾರ ಸಂವಿಧಾನಕ್ಕೆ ಅವಮಾನ ಮಾಡಲು ಹೊರಟಿದೆ. ಸಿಎಎ ಜಾರಿಯಿಂದ ಜಾರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರೂ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಆದರಿಂದ ಸಿಎಎ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ಯುವಕರು ಉದ್ಯೋಗ ಸಿಗದೆ ಅತಂತ್ರಕೊಂಡಿದ್ದಾರೆ. ಇತ್ತ ರೈತರು ಬೆಳೆದ ಬೆಳೆದ ಸೂಕ್ತ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಸಮಾವೇಶದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ಅಂಜುಮನ್‌ ಅಧ್ಯಕ್ಷ ರಿಯಾಜ್‌ ತಡಕನಹಳ್ಳಿ, ಮುಖಂಡರಾದ ಸಫರ್‍ರಾಜ ಮಾಸೂರು, ಎಪಿಎಂಸಿ ಅಧ್ಯಕ್ಷ ವಸಂತ ದ್ಯಾವಕ್ಕಳವರ, ತಾಪಂ ಸದಸ್ಯ ಮಹಬೂಬಸಾಬ್‌ ಮುಲ್ಲಾ, ಜಿಪಂ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ, ವಕೀಲ ದಿಗ್ವಿಜಯ ಹತ್ತಿ, ಮುಸ್ತಾಕ್‌, ರಮೇಶ ಮಡಿವಾಳರ, ಶೇಖಣ್ಣ ಉಕ್ಕುಂದ ಉಪಸ್ಥಿತರಿದ್ದರು. 

ಬಳಿಕ ಸಿ.ಎಂ. ಹಿಬ್ರಾಹಿಂ ಸೇರಿದಂತೆ ಹಲವರು ಸಿಎಎ ಕಾನೂನು ಹಿಂಪಡೆಯಬೇಕು ಎಂದು ಉಪತಹಸೀಲ್ದಾರ್‌ ಎನ್‌.ಆರ್‌. ಬೆನ್ನೂರುಮಠ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
 

click me!