ನಕಲಿ ಬೀಜ ಸಂಗ್ರಹ, ಕ್ರಮಕ್ಕೆ ಕೃಷಿ ಸಚಿವರ ಹಿಂದೇಟು: ತಂಗಡಗಿ

By Kannadaprabha NewsFirst Published Jul 1, 2021, 12:05 PM IST
Highlights

* ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣಕ್ಕೆ ಶಿವರಾಜ ತಂಗಡಗಿ ಆಗ್ರಹ
* ಬರುಗುರ ಗ್ರಾಮದಲ್ಲಿ ಮರ್ಯಾದೆ ಹತ್ಯೆಯಾಗಿದ್ದರೂ ತನಿಖೆ ನಡೆಯುತ್ತಿಲ್ಲ
* ನಿರ್ಲಕ್ಷ್ಯ ವಹಿಸಿದರೆ ಕಾಂಗ್ರೆಸ್‌ನಿಂದ ಪ್ರತಿಭಟನೆ 
 

ಗಂಗಾವತಿ(ಜು.01):  ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ಬಿತ್ತನೆ , ರಸಗೊಬ್ಬರ ಮಾರಾಟ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಕ್ರಮ ಕೈಗೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅರೋಪಿಸಿದ್ದಾರೆ. 

ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಂಗಾವತಿ ಮತ್ತು ಕನಕಗಿರಿ ತಾಲೂಕುಗಳಲ್ಲಿ ಕೆಲವರು ನಕಲಿ ಬೀಜಗಳನ್ನು ಸಂಗ್ರಹಿಸಿದ್ದು, ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದಕ್ಕೆ ಅನುಮಾನ ವ್ಯಕ್ತವಾಗಿದೆ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ತವರು ಕ್ಷೇತ್ರದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿದ್ದು, ರೈತರಿಗೆ ನಿರಂತರವಾಗಿ ವಂಚಿಸುತ್ತಿದ್ದು, ಸಚಿವರು ಏಕೆ ಮೌನವಹಿಸಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದರು.

ಕೇಂದ್ರ ಸರ್ಕಾರದಿಂದ ದೇಶ ಲೂಟಿ: ಶಿವರಾಜ್‌ ತಂಗಡಗಿ

ಬರುಗುರ ಗ್ರಾಮದಲ್ಲಿ ಮರ್ಯಾದೆ ಹತ್ಯೆಯಾಗಿದ್ದರೂ ತನಿಖೆ ನಡೆಯುತ್ತಿಲ್ಲ. ಹತ್ಯೆಗಿರುವ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ದೂರಿದ ಅವರು, ಜಿಲ್ಲಾಧಿಕಾರಿ ಭೇಟಿ ನೀಡಿ ತನಿಖೆ ಕೈಗೊಳ್ಳಬೇಕು ಮತ್ತು ಪರಿಹಾರ ನೀಡಬೇಕು. ಕಾನೂನುಬಾಹಿರ ಚಟುವಟಿಕೆ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ನಿರ್ಲಕ್ಷ್ಯ ವಹಿಸಿದರೆ ಕಾಂಗ್ರೆಸ್‌ ಕಾರ್ಯಕರ್ತೆಯರೊಂದಿಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಕಾಲುವೆಗೆ ಯಾವಾಗ ನೀರು ಬಿಡ ಬೇಕೆನ್ನುವ ಮಾಹಿತಿ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಅವರಿಗೆ ಗೊತ್ತಿಲ್ಲ. ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ನಾಪತ್ತೆಯಾಗಿದ್ದಾರೆ ಎಂದು ದೂರಿದರು. ಕನಕಗಿರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ, ಕಾಂಗ್ರೆಸ್‌ ಮುಖಂಡರಾದ ಶರಣಬಸವರಾಜ್‌ ಬರಗುರ, ಬಸವರಾಜ ಪಗಡದಿನ್ನಿ, ವೀರೇಶ ಕಾರಟಗಿ ಇದ್ದರು.
 

click me!