'ಬಿಜೆಪಿ ಸರ್ಕಾರ ಲೂಟಿ ಮಾಡಿದ್ದು ಬಿಟ್ರೆ ಬೇರೆ ಏನೂ ಸಾಧನೆ ಮಾಡಿಲ್ಲ'

By Kannadaprabha NewsFirst Published Sep 24, 2021, 3:38 PM IST
Highlights

*  ಬಿಜೆಪಿ ಆಡಳಿತದಿಂದ ಜನತೆಗೆ ಭ್ರಮನಿರಸನ
*  ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಜನಪರ ಯೋಜನೆ ಜಾರಿಗೊಳಿಸಲು ಸಾಧ್ಯ  
*  ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು
 

ಭಟ್ಕಳ(ಸೆ.24): ರಾಜ್ಯದಲ್ಲಿ ಕೋವಿಡ್‌(Covid19), ಬೆಲೆ ಏರಿಕೆ ಮತ್ತಿತರ ಕಾರಣದಿಂದ ಜನರು ತತ್ತರಿಸಿದ್ದರೂ ಸರ್ಕಾರ ಜನಪರ ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದ್ದು, ಜನತೆ ಬಿಜೆಪಿ(BJP) ಸರ್ಕಾರದ ಬಗ್ಗೆ ಭ್ರಮನಿರಸನ ಹೊಂದಿದ್ದಾರೆ ಎಂದು ಕೆಪಿಸಿಸಿ ಸಂಯೋಜಕಿ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ವೆರೋನಿಕಾ ಹೇಳಿದ್ದಾರೆ.  

ಇಲ್ಲಿನ ಅರ್ಬನ್‌ ಬ್ಯಾಂಕ್‌ ಸಭಾಂಗಣದಲ್ಲಿ ಗುರುವಾರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ವಿವಿಧ ವಿಭಾಗಗಳ ಪದಾಧಿಕಾರಿಗಳ ಪದಗ್ರಹಣ ಮತ್ತು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ರಾಜ್ಯದ ಜನತೆ ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೇಸತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಗಗನಕ್ಕೇರುತ್ತಿರುವ ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯಲು ವಿಫಲವಾಗಿದೆ.

ಕಾಂಗ್ರೆಸ್‌(Congress)ಸರ್ಕಾರದಿಂದ ಮಾತ್ರ ಜನಪರ ಯೋಜನೆ ಜಾರಿಗೊಳಿಸಲು ಸಾಧ್ಯವಿದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷ ಬಲಿಷ್ಠಗೊಳಿಸಲು ಪ್ರತಿ ಬೂತ್‌ ಮಟ್ಟದಲ್ಲೂ ಸರ್ಕಾರದ ವೈಫಲ್ಯಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಹಳಿಯಾಳ ವಿಧಾನಸಭಾ ಎಲೆಕ್ಷನ್ ಟಿಕೆಟ್: ಆರ್.ವಿ.ದೇಶಪಾಂಡೆಗೆ ಸೆಡ್ಡು ಹೊಡೆದ ಶಿಷ್ಯ

ಮಾಜಿ ಶಾಸಕ ಜೆ.ಡಿ. ನಾಯ್ಕ ಮಾತನಾಡಿ, ಮುಖಂಡರು, ಕಾರ್ಯಕರ್ತರು ಪಕ್ಷ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಸರ್ಕಾರದ ದುರಾಡಳಿತ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು. ಕೋವಿಡ್‌ನಿಂದ ತೀವ್ರ ತೊಂದರೆಪಟ್ಟಿರುವ ಜನತೆ ಸಮರ್ಪಕ ಉದ್ಯೋಗ(Job), ದುಡಿಮೆ ಇಲ್ಲದೆ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಬೆಲೆ ಏರಿಕೆ ಬಿಸಿಯಿಂದ ಜನರು ತತ್ತರಿಸಿದ್ದು, ಬಿಜೆಪಿ ಸರ್ಕಾರದ ಬಗ್ಗೆ ಜನರು ಭ್ರಮನಿರಸನ ಹೊಂದಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್‌ ಮಜೀದ್‌ಶೇಖ ಮಾತನಾಡಿ, ಭಟ್ಕಳ(Bhatkal) ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಮಂಕಾಳ ವೈದ್ಯರು ಮಾಡಿದಷ್ಟು ಅಭಿವೃದ್ಧಿ ಕಾರ್ಯ ಯಾರೂ ಮಾಡಿಲ್ಲ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ಕೆ. ಭಾಗವತ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿದರು. ಮಾಜಿ ಶಾಸಕ ಮಂಕಾಳ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಕಾಂಗ್ರೆಸ್‌ ಸದಸ್ಯ ಅಬ್ಬಾಸ್‌ ಥೋನ್ಸೆ, ಭಟ್ಕಳ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಇಮ್ತಿಯಾಜ್‌ ಜುಬಾಪು, ಜಯಲಕ್ಷ್ಮೀ ಗೊಂಡ, ಅಲ್ಬರ್ಟ್‌ಡಿ ಕೋಸ್ತ, ಸಿಂಧು ನಾಯ್ಕ, ಈಶ್ವರ ನಾಯ್ಕ ಮುಂತಾದವರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ದೇವಡಿಗ ನಿರೂಪಿಸಿದರು. ತಾಲೂಕು ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಷ್ಣು ದೇವಡಿಗ ವಂದಿಸಿದರು. ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ವಿಭಾಗಗಳ ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು. ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕಿ ವೆರೋನಿಕಾ ಮಾತನಾಡಿದರು.

ಲೂಟಿ ಬಿಟ್ಟರೆ ಬಿಜೆಪಿ ಸಾಧನೆ ಬೇರೆನಿಲ್ಲ

ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಲೂಟಿ ಮಾಡಿದ್ದು ಬಿಟ್ಟರೆ ಬೇರೆ ಏನೂ ಸಾಧನೆ ಮಾಡಿಲ್ಲ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಆರೋಪಿಸಿದರು. ಇಲ್ಲಿನ ಅರ್ಬನ್‌ ಬ್ಯಾಂಕ್‌ ಸಭಾಂಗಣದಲ್ಲಿ ಕಾಂಗ್ರೆಸ್‌ ವಿವಿಧ ವಿಭಾಗಗಳ ಪದಗ್ರಹಣ ಸಮಾರಂಭ ಮತ್ತು ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿಯವರ ಸಾಧನೆ ಏನೂ ಇಲ್ಲ. ಅಧಿಕಾರ, ಕುರ್ಚಿಗಾಗಿ ನಿರಂತರ ಕಾದಾಟ ನಡೆಯುತ್ತಿದೆ. ಜನರ ಹಿತಕ್ಕಿಂತ ಅವರಿಗೆ ಲೂಟಿಯೇ ಮುಖ್ಯವಾಗಿದೆ. ಸುಳ್ಳು ಹೇಳಿ ಎಷ್ಟು ದಿನ ಜನರನ್ನು ನಂಬಿಸಬಹುದು ಎಂದು ಪ್ರಶ್ನಿಸಿದ ಅವರು, ಸರ್ಕಾರದ, ಜನಪ್ರತಿನಿಧಿಗಳ ಆಡಳಿತದ ವೈಫಲ್ಯದ ಬಗ್ಗೆ ಹೇಳಿಕೆ ನೀಡಿದರೆ ಜೋಕ್‌ಎಂದು ಕರೆಯುವ ಬಿಜೆಪಿಗರಿಗೆ ಜನಪರವಾದ ಕಾಳಜಿಯಿಲ್ಲ ಎಂದರು.
 

click me!