ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುತ್ತಲೇ ಒಲಿಯಿತಾ ಅದೃಷ್ಟ : ಶುರುವಾಗಿದೆ ಸಿಎಂ ಮಾಡುವ ಚರ್ಚೆ

By Kannadaprabha NewsFirst Published Mar 14, 2020, 12:15 PM IST
Highlights

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಆಯ್ಕೆಯಾಗುತ್ತಿದ್ದಂತೆ ಅವರನ್ನು ಸಿಎಂ ಪಟ್ಟಕ್ಕೆ ಏರಿಸುವ ಚರ್ಚೆ ಶುರುವಾಗಿದೆ. 

ಮಾಗಡಿ [ಮಾ.14]:  ಒಬ್ಬ ಸಕ್ರಿಯ ಕಾಂಗ್ರೆಸ್‌ ಹೋರಾಟಗಾರ, ಕಾರ್ಯಕರ್ತನಾಗಿ ದುಡಿದು ಉನ್ನತ ಮಟ್ಟಕ್ಕೆ ಬಂದಂತಹ, ಕಾರ್ಯಕರ್ತರಿಗೆ ಸ್ಪಂದಿಸುವಂತಹ ಹಾಗೂ ಕಾಂಗ್ರೆಸ್‌ ಸಿದ್ಧಾಂತವನ್ನು ಮೈಗೊಡಿಸಿಕೊಂಡಿರುವ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಕೆಪಿ​ಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿರುವುದು ಸಮಯೋಚಿತವಾಗಿದೆ ಎಂದು ವಿಧಾನ ಪರಿ​ಷತ್‌ ಸದಸ್ಯ ಎಚ್‌ .ಎಂ.​ ರೇ​ವಣ್ಣ ಹೇಳಿ​ದರು.

ತಾಲೂಕಿನ ಹಿಪ್ಪೆಮರದಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಾಲಾಜಿ ಫುಡ್‌  ಕೋರ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷ ಕಟ್ಟುವುದರಲ್ಲಿ ಯಾವುದೇ ಜವಾಬ್ದಾರಿ ವಹಿಸಲಿ, ಅದಕ್ಕೆ ಯಾವುದೇ ಮೂಲೆಯಲ್ಲಿದ್ದರೂ ಆತ ನಿರ್ವಹಿಸಿರುವ ಅನೇಕ ನಿದರ್ಶನಗಳಿವೆ ಎಂದರು.

ಸ್ವಾಗತಾರ್ಹ:  ಅಧಿಕಾರಕ್ಕೆ ಮತ್ತೆ ಬರಬೇಕಾದರೆ ಹೋರಾಟ ಸಂಘಟನೆ ಮತ್ತು ಎಲ್ಲರನ್ನೂ ಒಳಗೂಡಿ ಕೆಲಸ ಮಾಡುವ ಗುಣಗಳನ್ನು ಹೊಂದಿರುವ ಶಿವಕುಮಾರ್‌ ಅಧ್ಯಕ್ಷರಾಗಿರುವುದು ಸ್ವಾಗತಾರ್ಹ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಒಳಿತಾಗುತ್ತದೆ. ಕಾಂಗ್ರೆಸ್‌ ಸಿದ್ಧಾಂತವನ್ನು ಅಪ್ಪಿ, ಒಪ್ಪಿ ವಿದ್ಯಾರ್ಥಿ ನಾಯಕನಾಗಿ ಇಲ್ಲಿ ತನಕ ಬೆಳೆದಿರುವ ವ್ಯಕ್ತಿ. ಈ ದಿಸೆಯಲ್ಲಿ ದೇವರಾಜ ಆರಸರ ತತ್ವ ಸಿದ್ಧಾಂತಗಳನ್ನು ಡಿ.ಕೆ. ಶಿವಕುಮಾರ್‌ ಮೈಗೊಡಿಸಿಕೊಂಡಿದ್ದಾರೆ ಎಂದು ಎಚ್‌.ಎಂ.ರೇವಣ್ಣ ತಿಳಿಸಿದರು.

ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ.

ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಮಾತನಾಡಿ, ಬಹಳ ವರ್ಷಗಳ ನಂತರ ನಮ್ಮ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಡಿ.ಕೆ.ಶಿವಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ. ಪರಮೇಶ್‌ ಹಾಗೂ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿ ಎಂದು ಹಾರೈಸುತ್ತೇನೆ.

ಡಿ.ಕೆ. ಶಿವಕುಮಾರ್‌ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿ ಎಂಬುದು ಜನಗಳ ಬಯಕೆ, ಅದು ಈಡೇರಬೇಕು. ತಾವು ಸೋತಿದ್ದರೂ ಸಹ ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸುತ್ತಿದ್ದು, ವಿಎಸ್‌ಎಸ್‌ಎನ್‌ ಸೇರಿದಂತೆ ಎಲ್ಲಾ ಸಹಕಾರಿ ಸಂಘಗಳ ಚುನಾವಣೆಯಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದು, ಕಾರ್ಯಕರ್ತರು ಉತ್ಸಾಹಭರಿತರಾಗಿ ಕೆಲಸ ಮಾಡುತ್ತಿದ್ದು, ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ಕೆಪಿಸಿಸಿಗೆ ನಮ್ಮವರೇ ಅಧ್ಯಕ್ಷರಾಗಿರುವುದರಿಂದ ಇನ್ನೂ ಹೆಚ್ಚಿನ ಹುಮ್ಮಸ್ಸು ಬಂದಿದೆ, ರಾಮನಗರ ಜಿಲ್ಲೆ ಜೊತೆಗೆ ಮಾಗಡಿ ಕ್ಷೇತ್ರ ಅಭಿವೃದ್ಧಿಯಾಗಬೇಕು. ಅದಕ್ಕೆ ನಮ್ಮವರು ಮುಖ್ಯಮಂತ್ರಿಯಾಗಬೇಕು. ನಮ್ಮ ಹಿತಾಸಕ್ತಿಗಿಂತ ಕ್ಷೇತ್ರದ ಹಿತಾಸಕ್ತಿ ಮುಖ್ಯವಾಗಿದ್ದು, ಎಲ್ಲಾ ಮುಖಂಡರು ಕುಳಿತುಕೊಂಡು ಚರ್ಚಿಸುತ್ತೇವೆ ಎಂದರು.

ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಬೇಸಿಗೆ ಬರುತ್ತಿರುವುದರಿಂದ ಕುಡಿಯುವ ನೀರಿನ ಜವಾಬ್ದಾರಿಯನ್ನು ಶಾಸಕರು ತೆಗೆದುಕೊಳ್ಳಬೇಕು. ಶಾಸಕರ ನಿಧಿ .2 ಕೋಟಿ ಮಂಜೂರಾಗುತ್ತಿದೆ. ಅದರಲ್ಲಿ ಕೊಳವೆ ಬಾವಿಗಳನ್ನು ಕೊರೆಸಬೇಕು. ತಗ್ಗೀಕುಪ್ಪೆ ಹಾಗೂ ಸುಮಾರು ಕಡೆಯಿಂದ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರು ಫೋನ್‌ ಮಾಡಿದ್ದರು, ಶಾಸಕರು ಕುಡಿಯುವ ನೀರಿನ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಬಾಲಕೃಷ್ಣ ಹೇಳಿದರು. 

click me!