'ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ'

By Kannadaprabha NewsFirst Published Oct 25, 2020, 1:25 PM IST
Highlights

ವಿದೇಶದಲ್ಲಿರುವ ಕಪ್ಪು ಹಣದಿಂದ ಬಡವರ ಖಾತೆಗೆ ತಲಾ 15 ಲಕ್ಷ ಹಾಕುತ್ತೇನೆಂದು ಹೇಳಿದ್ದ ಮೋದಿ| ಇಂದಿಗೂ ಬಡವರ ಖಾತೆಗೆ ಒಂದು ದಂಬಡಿ ಹಣ ಹಾಕಲಿಲ್ಲ| ರೈತರ ಆದಾಯ ದ್ವಿಗುಣಗೊಳಿಸುವುದು ಸೇರಿದಂತೆ ಬರೀ ಭರವಸೆಗಳ ಸರಮಾಲೆಯನ್ನೇ ಹೆಣೆಯುವ ಮೂಲಕ ಜನರನ್ನು ಆಕ್ರೋಶಗೊಳ್ಳುವಂತೆ ಮಾಡಿದ ಪ್ರಧಾನಿ ಮೋದಿ| 

ಹೂವಿನಹಡಗಲಿ(ಅ.25): ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಲು ಮಿತಿಯೇ ಇಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಇಲ್ಲ. ಕೈಬಿಟ್ಟು ಹೋಗುತ್ತಿರುವ ಉದ್ಯೋಗ ತಡೆಯುವಲ್ಲಿ ಆಸಕ್ತಿಯೂ ಇಲ್ಲ. ಹಾಗಾಗಿ ಮೋದಿಯೊಬ್ಬ ಸುಳ್ಳಿನ ಸರದಾರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ಪಾಟೀಲ್‌ ಕಿಡಿಕಾರಿದ್ದಾರೆ. 

ಇಲ್ಲಿನ ದಾಕ್ಷಾಯಣಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಈಶಾನ್ಯ ಕರ್ನಾಟಕ ಶಿಕ್ಷಕರ ಮತ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ​ರು. ವಿದೇಶದಲ್ಲಿರುವ ಕಪ್ಪು ಹಣದಿಂದ ಬಡವರ ಖಾತೆಗೆ ತಲಾ 15 ಲಕ್ಷ ಹಾಕುತ್ತೇನೆಂದು ಹೇಳಿದ್ದರು. ಆದರೆ, ಇಂದಿಗೂ ಬಡವರ ಖಾತೆಗೆ ಒಂದು ದಂಬಡಿ ಹಣ ಹಾಕಲಿಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಸೇರಿದಂತೆ ಬರೀ ಭರವಸೆಗಳ ಸರಮಾಲೆಯನ್ನೇ ಹೆಣೆಯುವ ಮೂಲಕ ಜನರನ್ನು ಆಕ್ರೋಶಗೊಳ್ಳುವಂತೆ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಮೋದಿ ಸರ್ಕಾರ ಆಸ್ತಿತ್ವಕ್ಕೆ ಬಂದ ನಂತರದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಶಕ್ತಿ ಹೀನವಾಗಿದೆ. ರಾಜಕಾರಣ ಅಸ್ತವ್ಯಸ್ತಗೊಂಡಿದ್ದು, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಶಿಕ್ಷಕರು ಸ್ವಯಂ ಆತ್ಮವಿಮರ್ಶೆ ಮಾಡಿಕೊಂಡು ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಪಾಟೀಲ್‌ ಕರೆ ನೀಡಿದರು.

ಹೊಸಪೇಟೆ: ಝೂಲಾಜಿಕಲ್‌ ಪಾರ್ಕ್‌ನಲ್ಲಿ ಕೋಟಿ ವೆಚ್ಚದ ಪಶು ಆಸ್ಪತ್ರೆ

ಈಶಾನ್ಯ ಶಿಕ್ಷಕರ ಮತ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಶರಣಪ್ಪ ಮಟ್ಟೂರು, ಕಲ್ಯಾಣ ಕರ್ನಾಟಕದ 371(ಜೆ) ಮೀಸಲಾತಿಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದರಿಂದ ರಾಜ್ಯದ 35 ಸಾವಿರ ಗ್ರಾಪಂ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಲು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹವರು ಸದನದಲ್ಲಿ ಇರಬೇಕೆಂದು ಹೇಳಿದರು.

ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ. ಪರಮೇಶ್ವರಪ್ಪ, ಮುಖಂಡರಾದ ಜ್ಯೋತಿ ಮಲ್ಲಣ್ಣ, ವಾರದಗೌಸ್‌ ಮೊಹಿದ್ದೀನ್‌, ಅಟವಾಳಿಗಿ ಕೊಟ್ರೇಶ, ಬಿ. ಹನುಮಂತಪ್ಪ, ಎಸ್‌. ಹಾಲೇಶ ಸೇರಿದಂತೆ ಇತರರಿದ್ದರು.
 

click me!