ಜೈಲಿನಿಂದ ಹೊರ ಬಂದು ವಿನಯ್‌ ಕುಲಕರ್ಣಿ ಸಿಎಂ ಆಗ್ತಾರೆ..!

By Kannadaprabha NewsFirst Published Nov 8, 2020, 9:46 AM IST
Highlights

ಧಾರವಾಡದ ಮುರುಘಾಮಠದಲ್ಲಿ ವಿನಯ ಕುಲಕರ್ಣಿ ಜನ್ಮದಿನದ ನಿಮಿತ್ತ ಸರ್ವ ಸಮಾಜಗಳ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ ಸಮಾರಂಭ| ವಿನಯ ಕುಲಕರ್ಣಿ ಆರೋಪ ಮುಕ್ತರಾಗಿ ಬಂದು ಉತ್ತರ ಕರ್ನಾಟಕದ ಪ್ರಬಲ ನಾಯಕರಾಗಿ ಬೆಳೆಯುತ್ತಾರೆ:ಜಕ್ಕಪ್ಪನವರ| 

ಧಾರವಾಡ(ನ.08): ಜವಾಹರಲಾಲ್‌ ನೆಹರು ಒಂಭತ್ತು ಬಾರಿ ಜೈಲಿಗೆ ಹೋಗಿ ಬಂದು ದೇಶದ ಪ್ರಧಾನಿಯಾದರು. ಅದೇ ರೀತಿಯಲ್ಲಿ ವಿನಯ್‌ ಕುಲಕರ್ಣಿ ಜೈಲಿನಿಂದ ಹೊರ ಬಂದು ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆಂದು ಕಾಂಗ್ರೆಸ್‌ ಮುಖಂಡ ಎಫ್‌.ಎಚ್‌. ಜಕ್ಕಪ್ಪನವರ ಹೇಳಿದ್ದಾರೆ.

ಇಲ್ಲಿಯ ಮುರುಘಾಮಠದಲ್ಲಿ ವಿನಯ ಕುಲಕರ್ಣಿ ಜನ್ಮದಿನದ ನಿಮಿತ್ತ ಸರ್ವ ಸಮಾಜಗಳ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ವಿನಯ ಕುಲಕರ್ಣಿ ಆರೋಪ ಮುಕ್ತರಾಗಿ ಬಂದು ಉತ್ತರ ಕರ್ನಾಟಕದ ಪ್ರಬಲ ನಾಯಕರಾಗಿ ಬೆಳೆಯುತ್ತಾರೆ. ಈ ಭಾಗದಲ್ಲಿ ಕಾಂಗ್ರೆಸ್ಸಿನ 45 ಸೀಟು ಗೆಲ್ಲಿಸಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಹುಲಿಯನ್ನು ಆಗಾಗ ಬೇಟಿ ಆಡುತ್ತಾರೆ, ಆದರೆ, ಇಲಿಯನ್ನು ಬೇಟೆಯಾಡುತ್ತಾರಾ ಎಂದು ಪ್ರಶ್ನಿಸಿದ ಅವರು, ಬಿ.ಎಸ್‌. ಯಡಿಯೂರಪ್ಪ, ಅಮಿತ್‌ ಶಾ ಈ ಹುಲಿಯನ್ನು ಬೇಟೆಯಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿನಯ್‌ ಬಂಧನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇರ ಕೈವಾಡವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಹ್ಲಾದ ಜೋಶಿ ವಿರುದ್ಧ ವಿನಯ್‌ ಸ್ಪರ್ಧಿಸಿದ್ದರು. ಅದಕ್ಕಾಗಿ ಈ ರೀತಿ ಮಾಡಿದ್ದು, ಮಿಸ್ಟರ್‌ ಜೋಶಿ, ಶರಣ ಸಂಸ್ಕೃತಿ ಒಡೆಯುತ್ತಿರಾ? ಹುಲಿಯನ್ನು ಎಷ್ಟುದಿನ ಜೈಲಿನಲ್ಲಿ ಇಡೀತ್ತೀರಿ? ಎಂದು ಜಕ್ಕಪ್ಪನವರ. ಖಾರವಾಗಿ ಪ್ರಶ್ನಿಸಿದ್ದಾರೆ. 

ಬಿಜೆಪಿ ಮುಖಂಡ ಹತ್ಯೆ: ಸಿಬಿಐ ತನಿಖೆಯಲ್ಲೂ ಸಾಬೀತಾಯ್ತು ಸುವರ್ಣ ನ್ಯೂಸ್ ಕೊಟ್ಟ ಸಾಕ್ಷ್ಯಿಗಳು

ಪರೋಕ್ಷವಾಗಿ ಬಿಜೆಪಿ ವಿರುದ್ಧ ಮಾತನಾಡಿದ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಯೋಜನೆ ರೂಪಿಸಿ ವಿನಯ ಕುಲಕರ್ಣಿ ಅವರನ್ನು ಬಂಧಿಸಲಾಗಿದ್ದು ಈ ಮೂಲಕ ಯುವ ನಾಯಕರನ್ನು ಹತ್ತಿರುವ ಕೆಲಸ ಮಾಡಲಾಗುತ್ತಿದೆ. ಅವರ ಬಂಧನವನ್ನು ನಾವೆಲ್ಲ ಒಗ್ಗಟ್ಟಾಗಿ ಖಂಡಿಸೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕಹಿ ವಾತಾವರಣದಲ್ಲಿ ವಿನಯ್‌ ಕುಲಕರ್ಣಿಯವರನ್ನು ಬಂಧಿಸಿದ್ದಾರೆ. ಮತ್ತೆ ಸಿಹಿ ವಾತಾವರಣದಲ್ಲಿ ಭಗವಂತ ಅವರನ್ನು ಕರೆ ತರುತ್ತಾನೆ ಎಂದರು. ಈ ವೇಳೆ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ವಿಪ ಸದಸ್ಯ ಶ್ರೀನಿವಾಸ ಮಾನೆ, ಪಿ.ಎಚ್‌. ನೀರಲಕೇರಿ ಹಾಗೂ ಲಿಂಗಾಯತ ಸಮಾಜದ ಮುಖಂಡರು ಇದ್ದರು.

ರಾಜಕೀಯ ಭಾಷಣ ಬೇಡ

ಸಿಬಿಐ ವಿಚಾರಣೆಯಲ್ಲಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಜನ್ಮದಿನವನ್ನು ಮುರುಘಾಮಠದಲ್ಲಿ ಆಯೋಜಿಸಿದ್ದೇಕೆ ಎಂಬ ಪ್ರಶ್ನೆ ಎದ್ದಿದ್ದು, ಸಮಾರಂಭದ ವೇದಿಕೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಕಾಂಗ್ರೆಸ್‌ ಮುಖಂಡರು ತಮ್ಮ ಭಾಷಣದಲ್ಲಿ ಕೇಂದ್ರ, ರಾಜ್ಯ ಬಿಜೆಪಿ ಮುಖಂಡರ ಬಗ್ಗೆ ಟೀಕಿ ಮಾಡಿದರು. ಆಗ, ಮಠದ ಮಲ್ಲಿಕಾರ್ಜುನ ಸ್ವಾಮೀಜಿ ರಾಜಕೀಯ ಭಾಷಣ ಮಾಡದಂತೆ ಸೂಚನೆ ನೀಡಿದರು.
 

click me!