ಕಾಂಗ್ರೆಸ್‌ ನಿಜವಾದ ದಲಿತ ವಿರೋಧಿ - ಲಾಲ್‌ಸಿಂಗ್‌ ಆರ್ಯ

By Kannadaprabha NewsFirst Published Jan 7, 2023, 6:02 AM IST
Highlights

ಪ.ಜಾತಿ, ಪ.ಪಂಗಡಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ನೀಡಿರುವ ಅನುದಾನ, ಅಧಿಕಾರ ಸ್ಥಾನಮಾನ, ಯೋಜನೆಗಳನ್ನು ಗಮನಿಸಿದರೆ ಕಾಂಗ್ರೆಸ್‌ ನಿಜವಾದ ದಲಿತರ ವಿರೋಧಿ ಎಂಬುದು ಅರ್ಥವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್‌ಸಿಂಗ್‌ ಆರ್ಯ ಹೇಳಿದರು.

 ಮೈಸೂರು :  ಪ.ಜಾತಿ, ಪ.ಪಂಗಡಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ನೀಡಿರುವ ಅನುದಾನ, ಅಧಿಕಾರ ಸ್ಥಾನಮಾನ, ಯೋಜನೆಗಳನ್ನು ಗಮನಿಸಿದರೆ ಕಾಂಗ್ರೆಸ್‌ ನಿಜವಾದ ದಲಿತರ ವಿರೋಧಿ ಎಂಬುದು ಅರ್ಥವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್‌ಸಿಂಗ್‌ ಆರ್ಯ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರ ಸಮುದಾಯ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನ ನೀಡಿದೆ. ಈ ಸಮುದಾಯದವರಲ್ಲಿ ಆತ್ಮವಿಶ್ವಾಸ, ಭರವಸೆ ಮೂಡಿಸುತ್ತಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಕಾಂಗ್ರೆಸ್‌ ನಿಜವಾದ ದಲಿತ ವಿರೋಧಿ. ಕೇಂದ್ರ ಬಜೆಟ್‌ನಲ್ಲಿ ದಲಿತ ಸಮುದಾಯಕ್ಕೆ 11 ಸಾವಿರ ಕೋಟಿ ಮೀಸಲಿಡಲಾಗಿತ್ತು. ಆದರೆ ನರೇಂದ್ರ ಮೋದಿ ಅವರ ಸರ್ಕಾರ .59 ಸಾವಿರ ಕೋಟಿಗೆ ಹೆಚ್ಚಿಸಿದೆ. ದಲಿತ ಸಮುದಾಯಕ್ಕೆ ನೀಡುತ್ತಿರುವ ಅನುದಾನ ಏರಿಸಿದ್ದು, ಬಡವರ ಕಲ್ಯಾಣ ಯೋಜನೆಯಡಿ ಪ.ಜಾತಿಗೆ ಶೇ. 35ರಷ್ಟುಸೌಲಭ್ಯ ದೊರೆಯುವಂತೆ ಮಾಡಿದ್ದಾರೆ ಎಂದರು.

ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ನಾಲ್ವರು ದಲಿತರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಮೋದಿ ಅವರು ತಮ್ಮ ಸಂಪುಟದಲ್ಲಿ 12 ದಲಿತ ಸಂಸದರನ್ನು ಸೇರಿಸಿಕೊಂಡಿದ್ದು, ನಾಲ್ಕು ರಾಜ್ಯಕ್ಕೆ ದಲಿತ ಸಮುದಾಯದವರನ್ನೇ ರಾಜ್ಯಪಾಲರಾಗಿ ನೇಮಿಸಿದ್ದಾರೆ. ಇದನ್ನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕಾಣಲಾಗಿತ್ತೆ ಎಂದು ಅವರು ಪ್ರಶ್ನಿಸಿದರು.

ಕರ್ನಾಟಕದ ಹತ್ತು ಸ್ಥಳಗಳಿಗೆ ಡಾ.ಬಿ.ಆರ್‌. ಅಂಬೇಡ್ಕರ್‌ ಭೇಟಿ ನೀಡಿದ್ದು, ಅಲ್ಲಿ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ . 20 ಕೋಟಿ ನೀಡಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಯಾರೊಬ್ಬರಿಗೂ ಇಂತಹ ಆಲೋಚನೆ ಬರಲಿಲ್ಲ. ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ ಎಂದರು.

ದಲಿತ ಕೇರಿಗಳಿಗೆ ಭೇಟಿ

ಜಿಲ್ಲೆಯ 40 ದಲಿತ ಕೇರಿಗಳಿಗೆ ಎಸ್ಸಿ ಮೋರ್ಚಾ ಪದಾಧಿಕಾರಿಗಳ ತಂಡ ಭೇಟಿ ನೀಡಿತ್ತು. ಲಾಲ್‌ಸಿಂಗ್‌ ಆರ್ಯ ನೇತೃತ್ವದ ತಂಡವು ಅಶೋಕಪುರಂಗೆ ಭೇಟಿ ನೀಡಿ ಅವರ ನೋವುಗಳನ್ನು ಆಲಿಸಿದರು.

ಈ ವೇಳೆ ದಲಿತ ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ತಿಳಿಸಿಕೊಡಲಾಯಿತು. ಅಲ್ಲದೆ ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದೇವೆ. ಈ ಮಾತುಕತೆ ವೇಳೆ ದಲಿತರು ಕಾಂಗ್ರೆಸ್‌ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಮಾಡಿರುವುದು ಚುನಾವಣಾ ಗಿಮಿಕ್‌ ಅಲ್ಲ. ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಕಳೆದ ನವೆಂಬರ್‌ನಿಂದಲೇ ಅನುಷ್ಠಾನಕ್ಕೆ ಬಂದಿದೆ.

ಚುನಾವಣೆ ದೃಷ್ಟಿಯಿಂದ ಮೀಸಲಾತಿ ಹೆಚ್ಚಳ ಮಾಡಿಲ್ಲ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನವನ್ನು ತಡೆ ಹಿಡಿದಿಲ್ಲ. ಮೆರಿಟ್‌ ಆಧಾರದ ಮೇಲೆ ಸೀಟು ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗಿದೆ.

ಆದರೆ ಮೆರಿಟ್‌ ಮೇಲೆ ಸೀಟು ಸಿಗದೇ, ಹಣ ನೀಡಿ ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾಂುರ್‍ದರ್ಶಿ ಶಂಭುನಾಥ್‌ ತೂಂಡ್ಯ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಮಾಜಿ ಶಾಸಕ ನಂಜುಂಡಸ್ವಾಮಿ, ಕಾಂಪೋಸ್ವ್‌ ನಿಗಮದ ಅಧ್ಯಕ್ಷ ಮಹದೇವಯ್ಯ, ವಕ್ತಾರರಾದ ಮಹೇಶ್‌ ರಾಜೇ ಅರಸ್‌, ಕೇಬಲ್‌ ಮಹೇಶ್‌, ಕೆ. ವಸಂತಕುಮಾರ್‌ ಇದ್ದರು.

ಇಂದು ರಾಷ್ಟ್ರೀಯ ಕಾರ್ಯಕಾರಣಿ

ನಗರದ ಹೋಟೆಲ್‌ ಲಲಿತ ಮಹಲ್‌ ಪ್ಯಾಲೆಸ್‌ನಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿಯನ್ನು ಜ. 7 ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವುದಾಗಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್‌ಸಿಂಗ್‌ ಆರ್ಯ ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಂಸದ ವಿ. ಶ್ರೀನಿವಾಸಪ್ರಸಾದ್‌, ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚೌವ್ಹಾಣ್‌ ಮೊದಲಾದ ಪ್ರಮುಖರು ಪಾಲ್ಗೊಳ್ಳುವರು.

ಜ. 8 ರಂದು ಮಧ್ಯಾಹ್ನ 1ಕ್ಕೆ ಸಮಾರೋಪ ಸವಾರಂಭ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ…. ಸಂತೋಷ್‌ ಸಮಾರೋಪ ಭಾಷಣ ಮಾಡುವುದಾಗಿ ಅವರು ತಿಳಿಸಿದರು.

click me!