ಲಾಕ್‌ಡೌನ್ ವೇಳೆ ಹೊನ್ನಾಳಿ ಶಾಸಕರಿಂದ ಜನರಿಗೆ ತಪ್ಪು ಸಂದೇಶ; ಕಾಂಗ್ರೆಸ್ ಆರೋಪ

By Kannadaprabha NewsFirst Published Jun 10, 2020, 11:33 AM IST
Highlights

ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಲಾಕ್‌ ಡೌನ್‌ ಜಾರಿಯಲ್ಲಿದ್ದರೂ ಶಾಸಕ ರೇಣುಕಾಚಾರ್ಯ ಮಾತ್ರ ಯಾವುದೇ ರೀತಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕ್ಷೇತ್ರಾದ್ಯಂತ ತಮ್ಮ ಬೆಂಬಲಿಗರೊಂದಿಗೆ ಅಲೆದಾಡುತ್ತಿದ್ದಾರೆ ಎನ್ನುವ ಆರೋಪ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದಾವಣಗೆರೆ(ಜೂ.10): ಸರ್ಕಾರ ನೀಡಿದ್ದ ಆಹಾರ ಕಿಟ್‌ಗಳಿಗೆ ತಮ್ಮ ಹೆಸರನ್ನು ಹಾಕಿ ಹಂಚಿರುವ ಬಿಜೆಪಿ ಕೆಲಸ ರಾಜ್ಯಕ್ಕೆ ತಿಳಿದಿದೆ. ಲಾಕ್‌ ಡೌನ್‌ನಲ್ಲೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಾಂಗ್ರೆಸ್‌ ನಾಯಕರನ್ನು ವಿನಾಕಾರಣ ಟೀಕಿಸುತ್ತ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ ಕೆಂಗಲಹಳ್ಳಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಅವರು, ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಲಾಕ್‌ ಡೌನ್‌ ಜಾರಿಯಲ್ಲಿದ್ದರೂ ಶಾಸಕ ರೇಣುಕಾಚಾರ್ಯ ಮಾತ್ರ ಯಾವುದೇ ರೀತಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕ್ಷೇತ್ರಾದ್ಯಂತ ತಮ್ಮ ಬೆಂಬಲಿಗರೊಂದಿಗೆ ಅಲೆದಾಡಿದರು ಎಂದರು.

ಹೊನ್ನಾಳಿ ಕ್ಷೇತ್ರದ ಗ್ರಾಮಗಳಲ್ಲಿ ಶಾಸಕರು ಬಂದಿದ್ದಾರೆ. ಎಲ್ಲರೂ ಗ್ರಾಮದ ದೇವಸ್ಥಾನ ಬಳಿ ಬನ್ನಿ ಎಂಬುದಾಗಿ ಹೇಳಿ, ಜನರ ಗುಂಪು ಸೇರಿಸಿ, ಸಾಮಾನ್ಯ ಜ್ಞಾನವೇ ಇಲ್ಲದವರಂತೆ ವರ್ತಿಸುತ್ತಿರುವುದು ಬಿಜೆಪಿಯವರು. ಕೊರೋನಾ ಜಾಗೃತಿ ಮೂಡಿಸುವ ಬದಲಿಗೆ ಸಂಕಷ್ಟದ ಪರಿಸ್ಥಿತಿಯಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು. ಲಾಕ್‌ಡೌನ್‌ ವೇಳೆ ಜನರಿಗೆ ತೊಂದರೆ ಆಗಬಾರದೆಂದು ಸರ್ಕಾರ ಆಹಾರ ಕಿಟ್‌ ನೀಡಿದ್ದರೆ, ಅದರ ಮೇಲೆ ತಮ್ಮ ಹೆಸರನ್ನು, ಚಿತ್ರಗಳನ್ನು ಹಾಕಿಸಿಕೊಂಡು ಹಂಚಿದವರು ಇದೇ ಬಿಜೆಪಿಯವರು. ಆಡಳಿತ ಪಕ್ಷದ ನಾಯಕರ ಕೆಲಸವು ಇಡೀ ರಾಜ್ಯದ ಜನರಿಗೆ ತಿಳಿದಿದ್ದು, ಕೇವಲ ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಬಂಡಾಯ, ಅಸಮಾಧಾನ ನಮ್ಮಲ್ಲಿಲ್ಲ: ಭೈರತಿ ಬಸವರಾಜ್

ಜನರಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಸೇವೆಗೆ ಮುಂದಾದರೆ ಅದನ್ನು ಟೀಕಿಸುವ ಮನೋಭಾವವನ್ನು ಬಿಜೆಪಿ ನಾಯಕರು ಮಾಡಿದರು. ಅಷ್ಟೇ ಅಲ್ಲ, ವೈಯಕ್ತಿಕ ತೇಜೋವಧೆಗೂ ಮುಂದಾದರು. ಆಡಳಿತ ಪಕ್ಷದ ಕಾರ್ಯಕರ್ತರಿಗೆ ವೈಯಕ್ತಿಕವಾಗಿ ಟೀಕೆ ಮಾಡುವುದೇ ಹವ್ಯಾಸವಾಗದೆ ಎಂದು ಲೇವಡಿ ಮಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಗ್ಗೆ ಹಗುರವಾಗ ಮಾತನಾಡುವುದು ಖಂಡನೀಯ. ದಾನಿಗಳು, ಸಂಘ-ಸಂಸ್ಥೆಗಳು ನೀಡಿದ ಕಿಟ್‌ಗಳ ಮೇಲೆ ಬಿಜೆಪಿಯವರು ಕಮಲದ ಚಿಹ್ನೆ ಹಾಕಿಕೊಂಡು, ತಾವೇ ನೀಡಿದ್ದು ಎಂದು ಜನರ ದಾರಿ ತಪ್ಪಿಸುವ ಕೆಲಸವನ್ನು ಇನ್ನಾದರೂ ನಿಲ್ಲಿಸಲಿ ಎಂದು ತಾಕೀತು ಮಾಡಿದರು. ಪಾಲಿಕೆ ಸದಸ್ಯರಾದ ಮಂಜುನಾಥ ಗಡಿಗುಡಾಳ್‌, ವಿನಾಯಕ ಪೈಲ್ವಾನ್‌, ಯುವ ಮುಖಂಡರಾದ ಕೆ.ಎಲ್‌.ಹರೀಶ ಬಸಾಪುರ ಇತರರು ಇದ್ದರು.
 

click me!