Davanagere: ತ್ವರಿತವಾಗಿ ಕಾಮಗಾರಿಗಳ ಪೂರ್ಣಗೊಳಿಸಿ: ಸಂಸದ ಸಿದ್ದೇಶ್ವರ

By Kannadaprabha NewsFirst Published Nov 5, 2022, 11:05 PM IST
Highlights

ನಗರದ ವಿವಿಧ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದ ಡಾ.ಜಿ.ಎಂ ಸಿದ್ದೇಶ್ವರ ಬಡಾವಣೆಯ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿ, ಸ್ಥಳೀಯ ವಾಸಿಗಳ ಕುಂದು ಕೊರತೆಗಳನ್ನು ಆಲಿಸಿದರು. 

ದಾವಣಗೆರೆ (ನ.05): ನಗರದ ವಿವಿಧ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದ ಡಾ.ಜಿ.ಎಂ ಸಿದ್ದೇಶ್ವರ ಬಡಾವಣೆಯ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿ, ಸ್ಥಳೀಯ ವಾಸಿಗಳ ಕುಂದು ಕೊರತೆಗಳನ್ನು ಆಲಿಸಿದರು. ಶನಿವಾರ ದಾವಣಗೆರೆ ನಗರದ ಭಾರತ್‌ ಕಾಲನಿಯ 7 ನೇ ಕ್ರಾಸ್‌, ಅಣ್ಣಾನಗರ, ಕಬ್ಬೂರ ಬಸಪ್ಪ ನಗರದಲ್ಲಿರುವ ಉದ್ಯಾನವನ, ಒಳಚರಂಡಿ, ಕುಡಿಯುವ ನೀರಿನ ಸೌಕರ್ಯಗಳನ್ನು ವೀಕ್ಷಿಸಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ಎಚ್‌ಕೆಆರ್‌ ನಗರದಲ್ಲಿ ನಿರ್ಮಿಸುತ್ತಿರುವ 972 ಮನೆಗಳ ಕಾಮಗಾರಿಗಳ ಪ್ರಗತಿಯ ವೀಕ್ಷಿಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತ ಕಾಮಗಾರಿಗೆ ಸೂಚನೆ ನೀಡಿದರು.

ಶುದ್ಧ ನೀರಿಗೆ ಮನವಿ: ಬಡಾವಣೆಗಳಲ್ಲಿ ಸಂಚಾರದ ಸಂದರ್ಭದಲ್ಲಿ ಸ್ಥಳೀಯ ವಾಸಿಗಳು ಕುಡಿಯುವ ನೀರಿನ ಅಶುದ್ಧತೆ ಕುರಿತಂತೆ ಸಂಸದರ ಗಮನಸೆಳೆದರು. ಪೈಪ್‌ಲೈನ್‌ ದುರಸ್ತಿಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುವುದಿಲ್ಲ. ಪೂರೈಕೆಯಾಗುತ್ತಿರುವ ನೀರು ಕಲುಷಿತದಿಂದ ಆರೋಗ್ಯದ ಮೇಲೆ ತೀವ್ರ ತೊಂದರೆಯಾಗುತ್ತಿದ್ದು, ತ್ವರಿತವಾಗಿ ದುರಸ್ತಿಗೊಳಿಸಿ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮವಹಿಸುವಂತೆ ಮನವಿ ಮಾಡಿದರು.

Davanagere: ಸೋಷಿಯಲ್‌ ಮೀಡಿಯಾ ಕೀಚಕರಿಗೆ ಎಚ್ಚರಿಕೆಯ ಗಂಟೆ

ನೀರು ಪೂರೈಕೆಗೆ ಕ್ರಮ ವಹಿಸಿ: ಸ್ಥಳದಲ್ಲೇ ಅಧಿಕಾರಿಗಳಿಗೆ ತಾಕೀತು ಮಾಡಿದ ಸಂಸದರು, ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿ. ಪೈಪ್‌ಲೈನ್‌ಗಳನ್ನು ದುರಸ್ತಿಗೊಳಿಸಬೇಕು. ಸಂಸದರ ಅನುದಾನದಲ್ಲಿ ಕೊರೆಸಲಾದ ಬೋರವೆಲ್‌ಗಳನ್ನು ಪುನಶ್ಚೇತನಗೊಳಿಸಿ ನಿವಾಸಿಗಳಿಗೆ ನೀರು ಪೂರೈಸಲು ಕ್ರಮವಹಿಸುವಂತೆ ಸೂಚನೆ ನೀಡಿದರು. ಗುತ್ತಿಗೆದಾರರು ಸ್ಲಂಬೋರ್ಡ್‌ ಮನೆಗಳಿಗೆ ಮೀಟರ್‌ ಅಳವಡಿಸಲು ಹಾಗೂ ಹೆಚ್ಚುವರಿ ಉಪಕರಣ ಅಳವಡಿಸಲು ಸರ್ಕಾರದಿಂದ ಫಲಾನುಭವಿಗಳಿಗೆ ಬಿಡುಗಡೆಯಾದ ಅನುದಾನದ ಬಿಲ್‌ ವಿಳಂಬ ಮಾಡುತ್ತಿರುವ ಬಗ್ಗೆ ಸಂಸದರಿಗೆ ದೂರು ಸಲ್ಲಿಸಿದರು.

ತೀವ್ರ ತರಾಟೆ: ಸಾರ್ವಜನಿಕ ದೂರು ಆಲಿಸಿದ ಸಂಸದರು, ನಿರ್ದಿಷ್ಟವಾದ ದೂರುಗಳಿದ್ದಲ್ಲಿ ಲಿಖಿತವಾಗಿ ಜಿಲ್ಲಾಧಿಕಾರಿಗೆ ಸಲ್ಲಿಸಿದರೆ ಈ ಕುರಿತಂತೆ ಪ್ರತ್ಯೇಕ ಸಭೆ ನಡೆಸಿ ಲೋಪಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಇಂಜಿನಿಯರ್‌ ಹಾಗೂ ಗುತ್ತಿಗೆದಾರರಿಗೆ ತೀವ್ರ ತರಾಟೆ ತೆಗೆದುಕೊಂಡ ಸಂಸದರು ಸಾರ್ವಜನಿಕರಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಪ್ಲಾನ್‌ ಅನುಗುಣವಾಗಿ ಮನೆಗಳ ನಿರ್ಮಿಸಬೇಕು. ಬಡವರಿಗೆ ಯಾವುದೇ ರೀತಿ ತೊಂದರೆ, ಅನ್ಯಾಯವಾಗಬಾರದು ಎಂದು ಅಭಿಯಂತರರಿಗೆ ಎಚ್ಚರಿಕೆ ನೀಡಿದರು.

ಬಡವರ ಪಾಲಿನ ವೈದ್ಯ ದೇವತೆ, ದಾವಣಗೆರೆ ವೈದ್ಯ‌ನಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ದೂಡಾ ಅಧ್ಯಕ್ಷ ಕೆ.ಎಂ.ಸುರೇಶ, ಮಾಜಿ ಅಧ್ಯಕ್ಷ ಯಶವಂತ್‌ ರಾವ್‌ ಜಾಧವ್‌, ಮಾಜಿ ಮಹಾಪೌರ ಎಸ್‌.ಟಿ.ವೀರೇಶ, ಪಾಲಿಕೆ ಸದಸ್ಯರಾದ ಮೀನಾಕ್ಷಿ ಜಗದೀಶ, ಸ್ಮಾರ್ಚ್‌ ಸಿಟಿ ಇಂಜಿನಿಯರ್‌ ಮಂಜುನಾಥ್‌ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

click me!