ನಾಯಿ ಕಚ್ಚಿದರೆ ಪರಿಹಾರ ಕೊಡ್ತಾರೆ ಗೊತ್ತಾ..?!

Published : Jun 02, 2022, 04:46 AM IST
ನಾಯಿ ಕಚ್ಚಿದರೆ ಪರಿಹಾರ ಕೊಡ್ತಾರೆ ಗೊತ್ತಾ..?!

ಸಾರಾಂಶ

*  ನಾಯಿಗಳ ದಾಳಿ ಹೆಚ್ಚಿದ ಹಿನ್ನೆಲೆಯಲ್ಲಿ ಪರಿಹಾರ ನೀಡಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ *  ಈವರೆಗೆ 32 ಸಾವಿರ ಮಂದಿ ಮೇಲೆ ಬೀದಿ ನಾಯಿಗಳ ದಾಳಿ *  ಮಾಹಿತಿ ಇಲ್ಲದೆ ಪರಿಹಾರ ಪಡೆದವರು ಕೇವಲ 25 ಮಂದಿ  

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜೂ.02): ನಾಯಿ ಕಡಿತಕ್ಕೆ ಬಿಬಿಎಂಪಿ ಪರಿಹಾರ ನೀಡುವ ವಿಷಯವೇ ಅನೇಕ ಮಂದಿಗೆ ಗೊತ್ತಿಲ್ಲ. ಹೀಗಾಗಿ, ಕಳೆದ ಏಳು ವರ್ಷದಲ್ಲಿ 32 ಸಾವಿರಕ್ಕೂ ಅಧಿಕ ಮಂದಿಗೆ ನಾಯಿ ಕಡಿತಕ್ಕೆ ಒಳಗಾದರೂ 25 ಮಂದಿ ಮಾತ್ರ ಪರಿಹಾರ ಪಡೆದಿದ್ದಾರೆ.

ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕಳೆದ ಎಂಟು ವರ್ಷದಿಂದ ಬೀದಿ ನಾಯಿ ಕಡಿತಕ್ಕೆ ಬಿಬಿಎಂಪಿಯಿಂದ ಪರಿಹಾರ ನೀಡಲಾಗುತ್ತಿದೆ. ಬೀದಿ ನಾಯಿ ಕಡಿತಕ್ಕೆ ಪರಿಹಾರ ವಿತರಣೆಗೆ ಪಾಲಿಕೆ ಕಾನೂನು ಕೋಶದ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಮಾನದಂಡ ರೂಪಿಸಿ ಪರಿಹಾರ ಮೊತ್ತ ನಿಗದಿ ಪಡಿಸಲಾಗಿದೆ.

ಬೆಂಗ್ಳೂರಿನ ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿಗೆ ಕೋರ್ಟ್‌ ಚಾಟಿ

ನಾಯಿ ಕಡಿತದಿಂದ ತರಚಿದ ಗಾಯವಾದರೆ ಪ್ರತಿ ಗಾಯಕ್ಕೆ .2 ಸಾವಿರ, ಆಳವಾದ ಗಾಯವಾದ ಗಾಯಕ್ಕೆ .3 ಸಾವಿರ, ಗಾಯಗಳ ಸಂಖ್ಯೆ ಹೆಚ್ಚಾಗಿದ್ದರೆ .10 ಸಾವಿರ ಪರಿಹಾರ ಹಾಗೂ ಬಿಬಿಎಂಪಿಯೇ ಚಿಕಿತ್ಸಾ ವೆಚ್ಚ ಭರಿಸುವುದು. ಒಂದು ವೇಳೆ ನಾಯಿ ಕಚ್ಚಿ ಮಕ್ಕಳು ಅಸುನೀಗಿದರೆ .50 ಸಾವಿರ ಹಾಗೂ ವ್ಯಕ್ತಿ ಸಾವನಪ್ಪಿದರೆ .1 ಲಕ್ಷ ಪರಿಹಾರ ನೀಡುವ ಬಗ್ಗೆ ಮಾರ್ಗಸೂಚಿ ರಚನೆ ಮಾಡಲಾಗಿದೆ.

ಮಾನದಂಡ ಹಾಗೂ ಪರಿಹಾರ ಮೊತ್ತ ನಿಗದಿಯಾದ ಬಳಿಕ 2016ರಿಂದ 2023ರ ಏಪ್ರಿಲ್‌ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿ ದಾಳಿಗೆ ಒಟ್ಟು 32,161 ಮಂದಿ ತುತ್ತಾಗಿದ್ದಾರೆ. ಅವರಲ್ಲಿ ಕೇವಲ 25 ಮಂದಿಗೆ ಈವರೆಗೆ ಪಾಲಿಕೆಯಿಂದ ಪರಿಹಾರ ದೊರೆತಿದೆ.

25 ಮಂದಿಗೆ 15 ಲಕ್ಷ ಪರಿಹಾರ

ಬಿಬಿಎಂಪಿ ನಾಯಿ ಕಡಿತಕ್ಕೆ ಮಾನದಂಡ ರೂಪಿಸಿದ ಬಳಿಕ 2016-17ರಲ್ಲಿ ಒಬ್ಬ ವ್ಯಕ್ತಿಗೆ ನಾಯಿ ಕಡಿತಕ್ಕೆ ಪರಿಹಾರ ಮೊತ್ತ ಹಾಗೂ ಚಿಕಿತ್ಸಾ ವೆಚ್ಚ ಸೇರಿ ಒಟ್ಟು .70,430 ನೀಡಿದೆ. 2017-18ರಲ್ಲಿ ಮೂರು ಮಂದಿಗೆ .60,645, 2018-19ರಲ್ಲಿ ವಿಭೂತಿಪುರದಲ್ಲಿ ಪ್ರವೀಣ್‌ ಎಂಬ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿಯಿಂದ ಸಾವನಪ್ಪಿದ್ದ. ಆ ಕುಟುಂಬಕ್ಕೆ ಪರಿಹಾರ ಮೊತ್ತ ಹಾಗೂ ಆಸ್ಪತ್ರೆಯ ವೆಚ್ಚ ಸೇರಿ .8,42,963, 2019-20ರ ಪ್ರಸಕ್ತ ಸಾಲಿನಲ್ಲಿ ಒಟ್ಟು 9 ಮಂದಿಗೆ .2,07,292, 2020-21ನೇ ಸಾಲಿನಲ್ಲಿ ಏಳು ಮಂದಿಗೆ .2,22,540, 2021-22ನೇ ಸಾಲಿನಲ್ಲಿ ನಾಲ್ವರಿಗೆ .85,431 ಹಾಗೂ ಪ್ರಸಕ್ತ 2022-23ನೇ ಸಾಲಿನಲ್ಲಿ ಒಬ್ಬರಿಗೆ .26,100 ಸೇರಿದಂತೆ ಈವರೆಗೆ ಬಿಬಿಎಂಪಿ .15.15 ಲಕ್ಷ ಪರಿಹಾರ ಹಾಗೂ ಚಿಕಿತ್ಸಾ ವೆಚ್ಚವನ್ನು ಪಾಲಿಕೆ ಭರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಹಾರದ ಮಾಹಿತಿ ಕೊರತೆ

ಸಾರ್ವಜನಿಕರಿಗೆ ನಾಯಿ ಕಡಿತಕ್ಕೆ ಬಿಬಿಎಂಪಿ ಪರಿಹಾರ ನೀಡಲಿದೆ ಎಂಬ ಮಾಹಿತಿಯೇ ಇಲ್ಲ. ಹಾಗಾಗಿ, ಹೆಚ್ಚಿನ ನಾಯಿ ಕಡಿತ ಪ್ರಕರಣ ದಾಖಲಾದರೂ ಪರಿಹಾರ ಪಡೆದವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಪಾಲಿಕೆ ಅಧಿಕಾರಿಗಳು ನಾಯಿ ಕಡಿತಕ್ಕೆ ಪರಿಹಾರ ನೀಡಲಿದೆ ಎಂಬುದರ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಆದರೆ, ಆ ಕಾರ್ಯವನ್ನು ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಲೋಕಾಯುಕ್ತ ಪತ್ರ ನೋಡಿ ಬೆಚ್ಚಿಬಿದ್ದ ಬಿಬಿಎಂಪಿ ಅಧಿಕಾರಿಗಳು: ಲೆಟರ್‌ನಲ್ಲಿ ಅಂಥಾದ್ದೇನಿದೆ?

ಪರಿಹಾರ ಹೀಗೆ ಪಡೆಯಿರಿ

ಬೀದಿ ನಾಯಿ ದಾಳಿಗೆ ಒಳಗಾದ ಸಂತ್ರಸ್ತರಿಗೆ ಮಾತ್ರ ಬಿಬಿಎಂಪಿ ಪರಿಹಾರ ನೀಡಲಿದೆ. ನಿರ್ದಿಷ್ಟಅರ್ಜಿ ನಮೂನೆಯನ್ನು ಭರ್ತಿ ಮಾಡಿ ಬಿಬಿಎಂಪಿ ಪಶುಪಾಲನಾ ವಿಭಾಗಕ್ಕೆ ಸಲ್ಲಿಸಬೇಕು. ಅರ್ಜಿಯಲ್ಲಿ ಹೆಸರು, ವಯಸ್ಸು, ಫೋಟೋ, ವಿಳಾಸ, ನಾಯಿ ದಾಳಿ ನಡೆದ ಸ್ಥಳ, ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ದಾಖಲೆಗಳ ವಿವರವನ್ನು ನಿಗದಿತ ಅವಧಿಯಲ್ಲಿ ನೀಡಬೇಕು. ಬಳಿಕ ಪಶುಪಾಲನಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ. ಅರ್ಜಿ ನಮೂನೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಕಡಿತ ವಿವರ

ವರ್ಷ ನಾಯಿ ಕಡಿತ ಸಂಖ್ಯೆ

2016 7,905
2017 7,564
2018 5,988
2019 5,785
2020 2,233
2021 1,526
2022 660
ಒಟ್ಟು 32,161

ಪಾಲಿಕೆಯಿಂದ ನಾಯಿ ಕಡಿತಕ್ಕೆ ಪರಿಹಾರ ಪಡೆದ ವಿವರ
ವರ್ಷ ಪರಿಹಾರ ಪಡೆದ ಸಂಖ್ಯೆ ಪರಿಹಾರ ಮೊತ್ತ

2016-17 01 70,430
2017-18 03 60,645
2018-19 01 8,42,963
2019-20 09 2,07,292
2020-21 07 2,22,540
2021-22 04 85,431
2022-23 01 26,100(ಮಾ)
ಒಟ್ಟು 25 15,15,401
 

PREV
Read more Articles on
click me!

Recommended Stories

Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!
ಸಂಕ್ರಾಂತಿ ಹಬ್ಬದ ಸಂಭ್ರಮ, ಕಾಡು ಮೊಲಕ್ಕೆ ಕಿವಿ ಚುಚ್ಚಿ ಚಿನ್ನದ ಓಲೆ ಹಾಕಿ, ಪೂಜಿಸಿ ಮತ್ತೆ ಕಾಡಿಗೆ ಬಿಟ್ಟ ಜನ!