ಸಿಎಂ ಬಿರುಸಿನ ರಾಜಕೀಯ ಚಟುವಟಿಕೆ, ಚುನಾವಣಾ ತಂತ್ರಗಾರಿಕೆ

By Kannadaprabha NewsFirst Published Mar 26, 2024, 10:20 AM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಕಬಿನಿ ಬಳಿಯ ಆರೆಂಜ್ ಕೌಂಟಿ ರೆಸಾರ್ಟ್ ನಲ್ಲಿ ಮೂರು ದಿನ ವಿಶ್ರಾಂತಿಗೆ ತೆರಳಿದ್ದಾರೆ.

  ಮೈಸೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಕಬಿನಿ ಬಳಿಯ ಆರೆಂಜ್ ಕೌಂಟಿ ರೆಸಾರ್ಟ್ ನಲ್ಲಿ ಮೂರು ದಿನ ವಿಶ್ರಾಂತಿಗೆ ತೆರಳಿದ್ದಾರೆ.

ಆದರೆ, ವಿಶ್ರಾಂತಿಯ ನಡುವೆಯೂ ಮೈಸೂರು- ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಚುನಾವಣೆ ಗೆಲುವಿನ ಸಂಬಂಧ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸುವ ಮೂಲಕ ಬಿರುಸಿನ ರಾಜಕೀಯ ಚಟುವಟಿಕೆ ಮೂಲಕ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ.

ಭಾನುವಾರ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ನಾಯಕರು, ಮುಖಂಡರ ಸಭೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದ್ದರು. ಬಳಿಕ ಆರೆಂಜ್ ಕೌಂಟಿ ರೆಸಾರ್ಟ್ ಗೆ ತೆರಳಿದ ಅವರು, ತಡರಾತ್ರಿವರೆಗೂ ಸಭೆ ನಡೆಸಿ, ಲೋಕಸಭಾ ಚುನಾವಣೆಯ ಸಾಧಕಬಾಧಕಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ರಣತಂತ್ರ ರೂಪಿಸುತ್ತಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಬಗೆಗಿನ ಚುನಾವಣೆ ಸೂಕ್ಷ್ಮತೆಗಳ ಬಗ್ಗೆ ಪಕ್ಷದ ನಾಯಕರು, ಮುಖಂಡರಿಗೆ ತಿಳಿ ಹೇಳಿರುವ ಸಿದ್ದರಾಮಯ್ಯ ಅವರು, ಬೂತ್ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಚುನಾವಣೆ ನಡೆಸಲು ಸೂಚಿಸಿದ್ದಾರೆ.

ಸಭೆಯಲ್ಲಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ಎಚ್.ಎಂ. ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು, ಮಾಜಿ ಶಾಸಕರು, ಮುಖಂಡರು ಪಾಲ್ಗೊಂಡಿದ್ದಾರೆ.

ಇನ್ನೂ ಎರಡು ದಿನಗಳ ಕಾಲ ರೆಸಾರ್ಟ್‌ನಲ್ಲೇ ತಂಗಲಿರುವ ಸಿದ್ದರಾಮಯ್ಯ ಅವರು, ವಿಶ್ರಾಂತಿಯ ನೆಪದಲ್ಲಿ ಲೋಕಸಭೆ ಚುನಾವಣಾ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.

click me!