ಮೌಢ್ಯಕ್ಕೆ ಸೆಡ್ಡು ಹೊಡೆದು ಕಿತ್ತೂರು ಉತ್ಸವಕ್ಕೆ ಚಾಲನೆ: ಅಧಿಕಾರ ಹೋಗೋದಿದ್ರೆ ಹೋಗಲಿ, ಸಿಎಂ

By Kannadaprabha NewsFirst Published Oct 24, 2021, 8:07 AM IST
Highlights

*  ಇಲ್ಲಿ ಬಂದದ್ದಕ್ಕೆ ಅಧಿಕಾರ ಹೋಗುವುದಿದ್ದರೆ ಹೋಗಲಿ-ಸಿಎಂ
*  ಮೀಸಲಾತಿ-ಪರಿಶೀಲಿಸಿ ಸೂಕ್ತ ಕ್ರಮ
*  ಝಾನ್ಸಿ ರಾಣಿಗಿಂತ 40 ವರ್ಷಗಳ ಮೊದಲೇ ಸ್ವಾತಂತ್ರ್ಯಕ್ಕಾಗಿ ಕತ್ತಿ ಝಳಪಿಸಿದ್ದ ಕಿತ್ತೂರು ಚನ್ನಮ್ಮ

ಬೆಳಗಾವಿ(ಅ.24):  ಕಿತ್ತೂರು ಉತ್ಸವ(Kittur Utsava) ಉದ್ಘಾಟನೆ ಮಾಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆನ್ನುವ ಮೂಢನಂಬಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತೆರೆ ಎಳೆದಿದ್ದಾರೆ.

ಶನಿವಾರ ಹಾನಗಲ್‌ ವಿಧಾನಸಭಾ ಉಪಚುನಾವಣೆ(Bylection) ಪ್ರಚಾರದಿಂದ ನೇರವಾಗಿ ಕಿತ್ತೂರಿಗೆ ಆಗಮಿಸಿದ ಅವರು 25ನೇ ವರ್ಷದ ಚನ್ನಮ್ಮನ ಕಿತ್ತೂರು ಉತ್ಸವ-2021ಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಮೌಢ್ಯದ ಕುರಿತು ಮಾತನಾಡಿದ ಅವರು, ಈ ಉತ್ಸವದಲ್ಲಿ ಪಾಲ್ಗೊಂಡಿದ್ದಕ್ಕೆ ಅಧಿಕಾರ ಹೋಗುವುದೇ ಇದ್ದರೆ ಕಿತ್ತೂರು ರಾಣಿ ಚನ್ನಮ್ಮನ(Kittur Rani Chennamma) ಸಲುವಾಗಿ ಹೋಗಲಿ, ಸಂತೋಷ ಎಂದರು.

ಚಾಮರಾಜನಗರಕ್ಕೆ(Chamarajnagar) ಹೋಗಬೇಡಿ ಅಂತಿದ್ದರು. ಅಲ್ಲಿಗೆ ಹೋಗಿದ್ದೇನೆ. ಕಿತ್ತೂರಿಗೆ ಬರಬೇಡಿ ಅಂತ ಹೇಳಿದ್ದರು, ಇಲ್ಲಿಗೂ ಬಂದಿದ್ದೇನೆ. ಇಲ್ಲಿ ಕಾಕತಾಳಿಯ, ಆಕಸ್ಮಿಕವಾಗಿ ಕೆಲವು ಘಟನೆಗಳು ನಡೆದಿರಬಹುದು. ಆದರೆ ಇಲ್ಲಿಗೆ ಬರದೇ ಇದ್ದರೂ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಅಧಿಕಾರ ಶಾಶ್ವತವಲ್ಲ ಎಂಬ ಕಾಲಾತೀತ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಚರ್ಚೆಗೆ ಬರಲು ಸಿಎಂಗೆ ಧೈರ್ಯ ಇಲ್ಲ: ಸಿದ್ದರಾಮಯ್ಯ

ನನಗೂ ಕಿತ್ತೂರಿಗೂ ಅನ್ಯೋನ್ಯ ಸಂಬಂಧವನ್ನು ಭಗವಂತ(God) ಸೃಷ್ಟಿಸಿದ್ದಾನೆ ಅನಿಸುತ್ತೆ. ಇಲ್ಲಿಗೆ ಬಂದಾಗ ಸ್ಪೂರ್ತಿ ತೆಗೆದುಕೊಂಡು ಹೋಗುತ್ತೇನೆ. ಕಿತ್ತೂರನ್ನು ರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಅಭಿಲಾಷೆ ಇದೆ. ಭಗವಂತ ಅವಕಾಶ ಕೊಟ್ಟರೆ ಅದನ್ನು ಮಾಡುತ್ತೇನೆ. ರಾಷ್ಟ್ರೀಯ ಸ್ಮಾರಕ ಮಾಡಬೇಕೆಂದರೆ ಅದಕ್ಕೆ ಆರ್ಕಿಯಲಾಜಿಕಲ್‌ ಅನುಮತಿ ಪಡೆದು ಈ ಕೆಲಸ ಮಾಡುತ್ತೇವೆ ಎಂದರು.

ಇದಕ್ಕೂ ಮುನ್ನ ಕಿತ್ತೂರು ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಿತ್ತೂರು ಜ್ಯೋತಿಯು ಬೆಳಗಾವಿ(Belagavi) ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ(Karnataka) ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿ ರಾಜ್ಯದಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಆದೇಶ ನೀಡಿದರು.

ಕಿತ್ತೂರು ಚನ್ನಮ್ಮ ಝಾನ್ಸಿ ರಾಣಿಗಿಂತ 40 ವರ್ಷಗಳ ಮೊದಲೇ ಸ್ವಾತಂತ್ರ್ಯಕ್ಕಾಗಿ(Freedom) ಕತ್ತಿ ಝಳಪಿಸಿದವರು. ಈ ಐತಿಹಾಸಿಕ ಸಾಧನೆಯನ್ನು ಜಗತ್ತಿಗೆ ಸಾರುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲ ಮಹಿಳೆ ಎಂಬುದನ್ನು ಸಾರಬೇಕಿದೆ. ಬ್ರಿಟಿಷರ(British) ವಿರುದ್ಧ ಹೋರಾಟಕ್ಕೆ ಧುಮುಕಿದ ಕಿತ್ತೂರು ರಾಣಿ ಚನ್ನಮ್ಮ ಇಂದಿನ ಯುವ ಸಮುದಾಯ ಹಾಗೂ ಮಹಿಳೆಯರಿಗೆ ಪ್ರೇರಣೆ ಎಂದರು.

ಕಾಂಗ್ರೆಸ್‌ನವರೇ ಡಿಕೆಶಿ ಕಲೆಕ್ಷನ್‌ ಗಿರಾಕಿ ಅಂದ ಮೇಲೆ ನಮ್ಮ ವಿಶ್ಲೇಷಣೇ ಏನಿದೆ?: ಸಚಿವ ಅಶ್ವತ್ಥ್‌

ಮೀಸಲಾತಿ-ಪರಿಶೀಲಿಸಿ ಸೂಕ್ತ ಕ್ರಮ: 

ಮೀಸಲಾತಿ(Reservation) ಒದಗಿಸಲು ಹಾಗೂ ಪ್ರಮಾಣ ಹೆಚ್ಚಿಸಲು ಬೇಡಿಕೆಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿ ಅನೇಕ ಕಾನೂನು ತೊಡಕುಗಳು ಇರುವುದರಿಂದ ಅವುಗಳನ್ನು ಗಮನದಲ್ಲಿಟ್ಟುಕೊಂಡು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರ್ಕಾರ(Government)  ಪರಿಶೀಲಿಸುತ್ತಿದೆ. ಕಾನೂನು ಇತಿಮಿತಿಗಳನ್ನು ಸಂಪೂರ್ಣವಾಗಿ ಅಧ್ಯಯನ ಕೈಗೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ವೇದಿಕೆಯ ಮೇಲಿದ್ದ ಪಂಚಮಸಾಲಿ ಸೇರಿದಂತೆ ವಿವಿಧ ಶ್ರೀಗಳಿಗೆ ಭರವಸೆ ನೀಡಿದರು.

ಕೇಂದ್ರ ಸಂಸದೀಯ ವ್ಯವಹಾರ ಪ್ರಹ್ಲಾದ್‌ ಜೋಶಿ, ಕಿತ್ತೂರಿನ ರಾಜಗುರು ಸಂಸ್ಥಾನಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ಹರಕ್ಷೇತ್ರದ ಪಂಚಮಸಾಲಿ ವಚನಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
 

click me!