ಸಿನಿಮಾ ಒಂದು ಪ್ರಭಾವಶಾಲಿ ಮಾಧ್ಯಮ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌

By Govindaraj SFirst Published Sep 23, 2022, 10:53 PM IST
Highlights

ಸಿನಿಮಾ ಒಂದು ಪ್ರಭಾವಶಾಲಿ ಮಾಧ್ಯಮವಾಗಿದ್ದು, ಇದರಲ್ಲಿ ಯಶಸ್ಸು ಪಡೆಯಲು ಬಯಸುವವರು ಶ್ರಮ ಪಡಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ತಿಳಿಸಿದರು. 

ಮೈಸೂರು (ಸೆ.23): ಸಿನಿಮಾ ಒಂದು ಪ್ರಭಾವಶಾಲಿ ಮಾಧ್ಯಮವಾಗಿದ್ದು, ಇದರಲ್ಲಿ ಯಶಸ್ಸು ಪಡೆಯಲು ಬಯಸುವವರು ಶ್ರಮ ಪಡಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ತಿಳಿಸಿದರು. ಮೈಸೂರು ವಿವಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ದಸರಾ ಚಲನಚಿತ್ರೋತ್ಸವ ಉಪ ಸಮಿತಿಯು ಆಯೋಜಿಸಿರುವ ಮೂರು ದಿನಗಳ ಚಿತ್ರ ನಿರ್ಮಾಣ ಪೂರ್ವ ತಯಾರಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಿನಿಮಾ ಎಂಬುದು ಇಂದು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಸಾವಿರಾರು ವರ್ಷಗಳಿಂದ ಬಂದಿದ್ದ ಸಂಗೀತ, ಸಾಹಿತ್ಯ, ನಾಟಕಗಳನ್ನು ಮುಸುಕುಗೊಳಿಸಿ ಅದರ ಮೇಲೆ ನಿಂತು ವಿಜೃಂಭಿಸುತ್ತಿರುವ ಒಂದು ಪ್ರಭಾವಶಾಲಿ ಮಾಧ್ಯಮವಾಗಿದೆ. 

ಅದರ ಭಾಗಗವಾಗಿ ವೆಬ್‌ ಸಿರೀಸ್‌, ಡ್ಯಾಕುಮೆಂಟರಿ, ಕಿರುಚಿತ್ರಗಳಿವೆ. ಇವುಗಳಲ್ಲಿ ನೀವು ತೊಡಗಿಸಿಕೊಳ್ಳಲು ಹಾಗೂ ಬೆಳೆಯಲು ಸಾಕಷ್ಟುಅವಕಾಶಗಳಿವೆ, ಅಷ್ಟೇ ಕಠಿಣವಾದ ಸ್ಪರ್ಧೆ ಇದೆ ಎಂದು ಅವರು ಕಿವಿಮಾತು ಹೇಳಿದರು. ಸಿನಿಮಾಕ್ಕೆ ಅದರದ್ದೆ ಆದ ವ್ಯಾಕರಣ ಹಾಗೂ ಮಾನದಂಡಗಳಿವೆ. ಇಂತಹ ಕಡೆಗೆ ತರುಣ ವಿದ್ಯಾರ್ಥಿಗಳು, ಆಸಕ್ತರು ಗಮನ ಹರಿಸಬೇಕು. ಸಿನಿಮಾ ಎಂಬುದು ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆ ಹಾಗೂ ಚಿತ್ರಕಲೆಗಳಿಗಿಂತ ತುಂಬಾ ಭಿನ್ನವಾದದ್ದು. ಇದೊಂದು ಬಹು ಪ್ರತಿಭೆಗಳನ್ನು ಬೆಳಕಿಗೆ ತರುವ ಮಾಧ್ಯಮವಾಗಿದೆ ಎಂದರು. 

ಭಾರತ್‌ ಜೋಡೋ ಪಾದಯಾತ್ರೆಯನ್ನು ಯಶಸ್ವಿಗೊಳಿಸಿಸೋಣ: ಮೊಹಮ್ಮದ್‌ ನಲಪಾಡ್‌

ಸಿನಿಮಾ ತಯಾರಿ ಕಲಿಕೆಗಳಿಗಾಗಿಯೇ ಬೆಂಗಳೂರಿನಲ್ಲಿ ಒಂದು ಪುಟ್ಟಸಿನಿಮಾ ಶಾಲೆಯನ್ನು ನಡೆಸುತ್ತಿದ್ದೇನೆ. ಇದರ ಕಷ್ಟ ನಷ್ಟಗಳ ಬಗ್ಗೆ ನನಗೆ ಅರಿವಿದೆ. ನಿಶಂಶಯವಾಗಿ ಕಲಿಕೆಯನ್ನು 3 ದಿನಗಳಲ್ಲಿ ಕಲಿಯಲು ಸಾಧ್ಯವಿಲ್ಲ. ದಸರಾ ವಿಶೇಷವಾಗಿ ಹಲವಾರು ವೇದಿಕೆಗಳು ಸಿದ್ಧಗೊಳ್ಳುತ್ತದೆ. ಅಂತಹ ವೇದಿಕೆಗಳನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ದಸರಾ ಚಲನಚಿತ್ರೋತ್ಸವದ ವಿಶೇಷಾಧಿಕಾರಿ ಆರ್‌. ಶೇಷ, ಕಾರ್ಯದರ್ಶಿ ಟಿ.ಕೆ. ಹರೀಶ್‌, ಚಲನಚಿತ್ರ ನಿರ್ದೇಶಕರಾದ ಮಂಸೋರೆ, ಪ್ರವೀಣ್‌ ಕೃಪಾಕರ್‌ ಮೊದಲಾದವರು ಇದ್ದರು.

ಸೆ.26ರಿಂದ ಅ.3 ರವರೆಗೆ ದಸರಾ ಚಲನಚಿತ್ರೋತ್ಸವ: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಚಲನಚಿತ್ರೋತ್ಸವ ಸೆ.26 ರಿಂದ ಅ.3 ರವರೆಗೆ 7 ದಿನಗಳ ಕಾಲ ನಡೆಯಲಿದ್ದು, ದೇಶ ವಿದೇಶದ 112 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಚಲನಚಿತ್ರೋತ್ಸವ ಸಮಿತಿ ವಿಶೇಷಾಧಿಕಾರಿ ಆರ್‌. ಶೇಷು ತಿಳಿಸಿದರು. ನಗರದ ವಾರ್ತಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಚಲನಚಿತ್ರೋತ್ಸವವನ್ನು ಸೆ.26ರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಡಾ. ಶಿವರಾಜ್‌ ಕುಮಾರ್‌ ಉದ್ಘಾಟಿಸುವರು. 

ಸೆ.27 ರಿಂದ ಅ.3 ರವರೆಗೆ 56 ಕನ್ನಡ, 28 ಪನೋರಮಾ, 28 ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಸೇರಿದಂತೆ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು. ಐನಾಕ್ಸ್‌ನಲ್ಲಿ 3 ಮತ್ತು ಡಿಆರ್‌ಸಿಯ 1 ಸ್ಕ್ರೀನ್‌ನಲ್ಲಿ ಚಿತ್ರ ಪ್ರದರ್ಶನವಿರಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ, ನಟಿಯರಾದ ಅಮೃತ ಅಯ್ಯಂಗಾರ್‌, ಕಾವ್ಯಶೆಟ್ಟಿ, ಸುಧಾರಾಣಿ, ಅನು ಪ್ರಭಾಕರ್‌ ಸೇರಿದಂತೆ ಅನೇಕ ತಾರೆಯರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

Tumakuru: ವಿದ್ಯುತ್‌ ಉತ್ಪಾದನೆಯಲ್ಲಿ ಸುಧಾರಣೆಯಾಗಬೇಕು: ಡಾ.ಜಿ.ಪರಮೇಶ್ವರ್‌

ಪ್ರತಿಭೆಯು ವ್ಯಕ್ತಿಗತವಾದದ್ದು, ಇದನ್ನು ಯಾರು ಹೇಳಿಕೊಡಲು ಸಾಧ್ಯವಿಲ್ಲ. ಹೀಗಾಗಿ, ಪ್ರತಿಭೆಯನ್ನು ಆಸಕ್ತಿಯಿಂದ ಕಲಿಯಬೇಕು ಹಾಗೂ ಸಮಾಜದ ಜೊತೆ ಒಡನಾಟ ಇರಿಸಿಕೊಳ್ಳುವುದರಿಂದ ಪ್ರತಿಭೆಯನ್ನು ಮೊನಚುಗೊಳಿಸಿಕೊಳ್ಳಬೇಕು.
- ನಾಗತಿಹಳ್ಳಿ ಚಂದ್ರಶೇಖರ್‌, ಚಲನಚಿತ್ರ ನಿರ್ದೇಶಕ

click me!