ಕೈ ಮಾಡಿದ ತಕ್ಷಣ ಎಲ್ಲೆಂದ್ರಲ್ಲಿ ಬಸ್ ನಿಲ್ಸಿದ್ರೆ ದಂಡ

By divya perlaFirst Published Jul 13, 2019, 2:25 PM IST
Highlights

ಜನ ಕೈ ತೋರಿಸಿದ ತಕ್ಷಣ ಎಲ್ಲೆಂದರಲ್ಲಿ ಬಸ್ ನಿಲ್ಲಿಸಿದರೆ ದಂಡ ತೆರಲಾಗುತ್ತದೆ ಎಂದು ಚಿತ್ರದುರ್ಗ ಡಿವೈಎಸ್ಪಿ ಸಂತೋಷ್ ಎಚ್ಚರಿಕೆ ನೀಡಿದರು. ಚಾಲಕರು, ಏಜೆಂಟರು ನಿಯಮಾವಳಿಗಳ ಪಾಲನೆ ಮಾಡದಿದ್ದಲ್ಲಿ ಮೋಟಾರ್ ವಾಹನ ಕಾಯ್ದೆಯಡಿ ದಂಡ ವಿಧಿಸಿ ಚಾಲನಾ ಪರವಾನಗಿ ರದ್ದುಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಚಿತ್ರದುರ್ಗ(ಜು.13): ಯಾರಾದ್ರೂ ಪ್ಯಾಸೆಂಜರ್ ಕೈ ಮಾಡಿದ ತಕ್ಷಣ ಎಲ್ಲೆಂದರಲ್ಲಿ ಬಸ್ ನಿಲ್ಲಿಸೋದು, ಜನ ನೋಡಿದ ತಕ್ಷಣ ವಿಷಲ್ ಹಾಕಿ ಹತ್ತಿಸಿಕೊಂಡು ಹೋಗೋದು ಕಂಡ್ರೆ ಇನ್ನು ಮುಂದೆ ಮುಲಾಜಿಲ್ಲದೆ ದಂಡ ವಿಧಿಸುವುದಾಗಿ ಡಿವೈಎಸ್ಪಿ ಸಂತೋಷ್ ಎಚ್ಚರಿಕೆ ನೀಡಿದರು.

ಚಿತ್ರದುರ್ಗದ ಎಪಿಎಂಸಿ ದಲಾಲರ ಭವನದಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಆಶ್ರಯದಲ್ಲಿ ಪೊಲೀಸ್ ಇಲಾಖೆ ಶುಕ್ರವಾರ ಆಯೋಜಿಸಿದ್ದ ಖಾಸಗಿ ಬಸ್ ಚಾಲಕರು, ಏಜೆಂಟರು ಹಾಗೂ ನಿರ್ವಾಹಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಸಿಸಿ ಕ್ಯಾಮೆರಾ ಅಳವಡಿಕೆ:

ನಗರದ ವಿವಿಧೆಡೆ ಈಗಾಗಲೇ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಎಲ್ಲ ದೃಶ್ಯಗಳು ಅದರಲ್ಲಿ ದಾಖಲಾಗುತ್ತವೆ. ಎಲ್ಲೆಂದರಲ್ಲಿ ಬಸ್ ನಿಲ್ಲಿಸಿದರೆ ತಕ್ಷಣವೇ ಒಂದು ಸಾವಿರ ದಂಡ ವಿಧಿಸಿ ತಿಂಗಳುಗಟ್ಟಲೆ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಹಾಕುವ ದಂಡದ ಮೊತ್ತದಲ್ಲಿ ಭಾರಿ ಏರಿಕೆಯಾಗಿದೆ. ಸಂಚಾರ ನಿಮಯ ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಸಂತೋಷ್ ಮನವರಿಕೆ ಮಾಡಿಕೊಟ್ಟರು.

ಖಾಸಗಿ ಬಸ್‌ಗಳ ಮಾಲೀಕರ ಸಂಘದ ಅಧ್ಯಕ್ಷ, ಬಿ.ಎ.ಲಿಂಗಾರೆಡ್ಡಿ, ಕೋಟೆ ಸಿಪಿಐ ಪ್ರಕಾಶ್ ಪಾಟೀಲ್, ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಮಾಳಿಗೆ ಜಿ.ಬಿ.ಶೇಖರ್,
ಎಸ್‌ಎಂಎಲ್ ತಿಪ್ಪೇಸ್ವಾಮಿ, ನಾಗರಾಜ್, ಚಾಲಕರ ಸಂಘದ ಅಧ್ಯಕ್ಷ ನಾಗರಾಜ್, ಸಂಚಾರಿ ಠಾಣೆ ಪಿಎಸ್‌ಐ ರೇವತಿ, ಬಡಾವಣೆ ಠಾಣೆ ಪಿಎಸ್‌ಐ ಪರಮೇಶ್ ಹಾಜರಿದ್ದರು.

click me!