ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿ ಕೊಡಿ: ಅನ್ನದಾತರ ಮನವಿ

By Gowthami KFirst Published Aug 11, 2022, 6:51 PM IST
Highlights

ಜಿಲ್ಲೆಯಾದ್ಯಂತ ಕಳೆದೊಂದು ತಿಂಗಳಿಂದಲೂ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಅಕ್ಷರಶಃ ಅನ್ನದಾತರು ಕಂಗಾಲಾಗಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಜಿಲ್ಲೆ  ಚಿತ್ರದುರ್ಗಕ್ಕೆ ತಲೆ ಹಾಕದ ಬಿ.ಸಿ ಪಾಟೀಲ್ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಆ.11) : ಜಿಲ್ಲೆಯಾದ್ಯಂತ ಕಳೆದೊಂದು ತಿಂಗಳಿಂದಲೂ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಅಕ್ಷರಶಃ ಅನ್ನದಾತರು ಕಂಗಾಲಾಗಿ ಹೋಗಿದ್ದಾರೆ. ಸಾಲ  ಸೂಲ‌ ಮಾಡಿ ಜಮೀನುಗಳಲ್ಲಿ ಹಾಕಿದ್ದ ಬೆಳೆ ಕೈಗೆಟಕದೇ ಮಳೆಗೆ ತುತ್ತಾಗಿ ಹಾನಿ ಆಗಿರುವುದಕ್ಕೆ ರೈತರು ಕಣ್ಣೀರು ಹಾಕ್ತಿದ್ದಾರೆ. ಈ ಪರಿಸ್ಥಿತಿ ರಾಜ್ಯಾದ್ಯಂತ ಇರೋದ್ರಿಂದ, ಎಲ್ಲಾ ಸಚಿವರು ಆಯಾ ಉಸ್ತುವಾರಿ ಜಿಲ್ಲೆಯಲ್ಲಿ ಇರಬೇಕು ಎಂದು ಸಿಎಂ ಸೂಚಿಸಿದ್ರು ಈ ಜಿಲ್ಲೆಗೆ ಉಸ್ತುವಾರಿ ಸಚಿವರು ಮಾತ್ರ ತಲೆ ಹಾಕಿಲ್ಲ. ನಮ್ಮ ಸಚಿವರು ಕಾಣೆಯಾಗಿದ್ದಾರೆ ದಯವಿಟ್ಟು ಹುಡುಕಿ ಕೊಡಿ ಎಂದು ರೈತರು ಆಗ್ರಹಿಸಿದ್ದಾರೆ. ಕಳೆದೊಂದು ತಿಂಗಳಿಂದ ರಾಜ್ಯಾದ್ಯಂತ ಎಡೆಬಿಡದೇ ಮಳೆರಾಯ ಆರ್ಭಟಿಸ್ತಿದ್ದಾನೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಜೋರು ಮಳೆ  ಇಲ್ಲವಾದ್ರು, ಜಿಟಿ ಜಿಟಿ ಮಳೆಯ ಅಬ್ಬರವೇನು ಕಡಿಮೆ ಆಗಿಲ್ಲ. ಆದ್ರೆ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ತಗ್ಗಿದ್ದು ರೈತರು ತುಸು ನೆಮ್ಮದಿಯಿಂದ ಜಮೀನುಗಳಿಗೆ ತೆರಳುತ್ತಿದ್ದಾರೆ‌. ಆದ್ರೆ ಮಳೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಮಾನವಹಾನಿ ಸಂಭವಿಸಿಲ್ಲ. ಹೊಳಲ್ಕೆರೆ ತಾಲ್ಲೂಕಿನನಲ್ಲಿ 4 ಮೇಕೆಗಳು ಸತ್ತಿದ್ದು, 444 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಒಟ್ಟು 35568.41 ಹೆಕ್ಟೇರ್ ಕೃಷಿ ಭೂಮಿ, 1843.13 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಉಂಟಾಗಿದೆ.

ಇಷ್ಟೆಲ್ಲಾ ಮಳೆಯಿಂದ ಅವಾಂತರ ಸೃಷ್ಟಿ ಆಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ರು, ನಮ್ಮ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಮಾತ್ರ ಇತ್ತ ತಿರುಗಿ ಕೂಡ ನೋಡದೇ ಇರುವುದು ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಉಸ್ತುವಾರಿ ಸಚಿವರಿಗೆ ನಮ್ಮ ಜಿಲ್ಲೆ ಕೇವಲ ಗೆಸ್ಟ್ ಹೌಸ್ ಆಗಿದ್ರು ಮೊದಲು ಬದಲಾಯಿಸಿಕೊಳ್ಳಲಿ.‌ ಮುಂದಿನ ದಿನಗಳಲ್ಲಿ ರೈತರು ನಿಮಗೆ ತಕ್ಕ ಪಾಠ ಕಲಿಸ್ತಾರೆ. ಈಗಾಗಲೇ ಜಿಲ್ಲೆಯ ಅನ್ನದಾತರು ಮಳೆಯಿಂದ ಬೆಳೆ ಹಾನಿಯಾಗಿ, ಕಣ್ಣೀರು ಹಾಕ್ತಿದ್ದಾರೆ. ಆದ್ರೆ ಉಸ್ತುವಾರಿ ಸಚಿವರು ಇದನ್ನ ಗಮನಕ್ಕೆ ಪಡೆಯದ ಕಾರಣ, ನಮ್ಮ ಉಸ್ತುವಾರಿ ಸಚಿವರು ನಾಪತ್ತೆ ಆಗಿದ್ದಾರೆ ದಯಮಾಡಿ ಅವರನ್ನು ಹುಡುಕಿ ಕೊಡಿ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

Vijyapura;   ಅತಿವೃಷ್ಟಿಯಿಂದಾದ ಹಾನಿ ಪ್ರದೇಶಕ್ಕೆ ಉಮೇಶ್ ಕತ್ತಿ ಭೇಟಿ

ಇನ್ನೂ ನಿನ್ನೆ ತಾನೇ ಮಳೆ ಹಾನಿ ಪ್ರದೇಶಗಳಿಗೆ ಹಾಗೂ ಬೆಳೆ ಹಾನಿ ಜಮೀನುಗಳಿಗೆ ಭೇಟಿ ನೀಡಲು ಜಿಲ್ಲೆಗೆ ಆರ್ ಅಶೋಕ್ ಆಗಮಿಸಿದ್ದರು. ಈ ವೇಳೆಯೂ ಅನೇಕ ರೈತರು ನಮ್ಮ ಕೃಷಿ ಸಚಿವರು ಹಾಗೂ ನಮ್ಮ ಉಸ್ತುವಾರಿಗಳು ಕಾಣೆಯಾಗಿದ್ದಾರೆ ಎಂದು ಕೇಳಿದ್ರು. ಈ ವೇಳೆ ಕಂದಾಯ ಸಚಿವ ಆರ್ ಅಶೋಕ್ ಅವರು, ಸಿರಿಗೆರೆ ಸಮೀಪದ ರೈತ ಮಂಜುನಾಥ್ ಜಮೀನಿನಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡುವಾಗ, ಉಸ್ತುವಾರಿ ಸಚಿವರು ನಾಪತ್ತೆ ಆಗಿದ್ದಾರೆ ಒಂದು ತಿಂಗಳಿಂದ ಜಿಲ್ಲೆಗೆ ಆಗಮಿಸಿಲ್ಲ. ನಮ್ಮ ಜಿಲ್ಲೆಯ ರೈತರು ಮಳೆಯಿಂದ ಬೆಳೆ ಹಾನಿ ಆಗಿದ್ರು ಯಾರೂ ಕೇಳೋರಿಲ್ಲ ಎಂದು ಆರೋಪಿಸಿದ್ದಾರೆ ಎಂದು ಕೇಳಿದ್ರೆ, ಸದ್ಯ ನಾನು ಬಂದಿದ್ದೀನಿ, ಸರ್ಕಾರ ಅಂದ್ರೆ ಎಲ್ಲರೂ ಒಂದೆ. ಅವರ ಯಾವುದೋ ತರಬೇತಿಗಾಗಿ ಹೋಗಿದ್ದಾರೆ ಬರ್ತಾರೆ ನಾನು ಅವರ ಜೊತೆ ಮಾತನಾಡ್ತೀನಿ ಎಂದು ಸಮರ್ಥನೆ ಮಾಡಿಕೊಂಡಿದ್ದು ದುರಂತವೇ ಸರಿ.

ಮಳೆಹಾನಿ ಸಮೀಕ್ಷೆ ವಾರದೊಳಗೆ ಮುಗಿಸಿ: ಅಧಿಕಾರಿಗಳಿಗೆ ಡೆಡ್‌ಲೈನ್‌ ಕೊಟ್ಟ ಸಚಿವ ಕತ್ತಿ
 
ಒಟ್ಟಾರೆಯಾಗಿ ಪ್ರತೀ ಜಿಲ್ಲೆಗೆ ಉಸ್ತುವಾರಿ ಮಂತ್ರಿಗಳನ್ನಾಗಿ ಸರ್ಕಾರ ನೇಮಕ ಮಾಡೋದು, ಆಯಾ ಜಿಲ್ಲೆಯ ರೈತರು ಹಾಗು ಸಾರ್ವಜನಿಕರ ಕಷ್ಟಕ್ಕೆ ಬೇಗ ಸ್ಪಂದಿಸಲಿ ಎಂದು ಮಾಡ್ತಾರೆ. ಆದ್ರೆ ಕೋಟೆನಾಡು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್ ಫಿಲ್ಮಿ ಸ್ಟೈಲ್ ನಲ್ಲಿ ಡೈಲಾಡ್ ಹೇಳಿಕೊಂಡು ಉಸ್ತುವಾರಿ ಜಿಲ್ಲೆಯನ್ನೇ ಮರೆತರೆ ಹೇಗೆ ಸ್ವಾಮಿ. ಇನ್ನಾದ್ರು ಜಿಲ್ಲೆಗೆ ಭೇಟಿ ನೀಡಿ ರೈತರಿಗೆ ಆಗಿರೋ ಕಷ್ಟಕ್ಕೆ ಸ್ಪಂದಿಸಬೇಕಿದೆ.

click me!