ಚಿಂತಾಮಣಿ : ಒಂದೇ ತಾಲೂಕಿನ ಮೂವರಿಗೆ ಯುಪಿಎಸ್‌ಸಿ ರ‍್ಯಾಂಕ್

By Kannadaprabha NewsFirst Published Sep 27, 2021, 10:24 AM IST
Highlights
  • ದೇಶದ ಅತ್ಯಂತ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಾದ ಯುಪಿಎಸ್‌ಸಿ ಪರೀಕ್ಷೆ
  • ಯುಪಿಎಸ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೂವರಿಗೆ ವಿವಿಧ ರ‍್ಯಾಂಕ್

ಚಿಕ್ಕಬಳ್ಳಾಪುರ (ಸೆ.27): ದೇಶದ ಅತ್ಯಂತ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಾದ ಯುಪಿಎಸ್‌ಸಿ (UPSC) ಪರೀಕ್ಷೆಯಲ್ಲಿ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೂವರು ವಿವಿಧ ರ‍್ಯಾಂಕ್ (Rank) ಪಡೆದಿದ್ದಾರೆ.

ಅರ್ಜುನಗೆ 452ನೇ ರ‍್ಯಾಂಕ್

ಚಿಂತಾಮಣಿ ತಾಲೂಕಿನ ಗಡಿಗವಾರಹಳ್ಳಿ ಗ್ರಾಮದ ರೈತ ಕುಟುಂಬದ ಜಿ.ಎಸ್‌.ಅರ್ಜುನಗೆ 452ನೇ ರ‍್ಯಾಂಕ್ ಗಳಿಸಿ ಗಮನ ಸೆಳೆದಿದ್ದಾರೆ. ನಿವೃತ್ತ ಕೃಷಿ ಅಧಿಕಾರಿಯಾದ ಜಿ.ವಿ.ಸುಬ್ಬಾರೆಡ್ಡಿ ಹಾಗೂ ಶಾರಮ್ಮ ರವರ ಏಕೈಕ ಪುತ್ರನಾಗಿದ್ದಾರೆ. ಈಗಾಗಲೇ ಅರ್ಜುನ ಮುಂಬೈನಲ್ಲಿ (Mumbai) ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

UPSC Results 2020: ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

ಅಭಿಷೇಕ್‌ಗೆ 708ನೇ ರ‍್ಯಾಂಕ್

ಚಿಂತಾಮಣಿಯ ಕೈವಾರ ಹೋಬಳಿ ಬನಹಳ್ಳಿ ಬಿ.ಎಂ.ನಾರಾಯಣಸ್ವಾಮಿ (ನಿವೃತ್ತ ಅಡಿಷನಲ್‌ ಎಸ್ಪಿ) ಅವರ ಪುತ್ರ ಬಿ.ಎನ್.ಅಭಿಷೇಕ್‌ ಯುಪಿಎಸ್‌ ಸಿ ಪರೀಕ್ಷೆಯಲ್ಲಿ 708 ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ

ಮಾಲಾಶ್ರೀಗೆ 504ನೇ ರ‍್ಯಾಂಕ್

ಚಿಂತಾಮಣಿ ತಾಲೂಕಿನ ಮುಂಗಾನಹಳ್ಳಿ ಹೋಬಳಿಯ ಮಿಂಡಿಗಲ್‌ ಗ್ರಾಮದ ವೆಂಕಟೇಶ್‌ ಹಾಗೂ ರಾಮಲಕ್ಷ್ಮಮ್ಮ ಪುತ್ರಿಯಾದ ಎಂ.ವಿ.ಮಾಲಾಶ್ರೀ 504ನೇ ರ‍್ಯಾಂಕ್ ಪಡೆಯುವ ಮೂಲಕ ಉನ್ನತ ಹುದ್ದೆ ಅಲಂಕರಿಸುವ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು ನಾಲ್ಕನೇ ಬಾರಿ ಯಶಸ್ಸು ಕಂಡಿದ್ದಾರೆ.

ರಾಜ್ಯದ 16 ಮಂದಿ ಸಾಧನೆ

ಕೇಂದ್ರ ನಾಗರೀಕ ಸೇವೆಗಳ 2020ನೇ (UPSC) ಸಾಲಿನ ಮುಖ್ಯ ಪರೀಕ್ಷೆಯ ಫಲಿತಾಂಶ (Result) ಶುಕ್ರವಾರ ಹೊರಬಿದ್ದಿದ್ದು, ದೇಶದಲ್ಲಿ ಉತ್ತೀರ್ಣರಾದ ಒಟ್ಟು 761 ಅಭ್ಯರ್ಥಿಗಳ ಪೈಕಿ ರಾಜ್ಯದ 16 ಮಂದಿ ಸೇರಿದ್ದಾರೆ.

ಕನ್ನಡ (Kannada) ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಮಂಡ್ಯ (mandya) ಮೂಲದ ಬೆಂಗಳೂರಿನ ನಿವಾಸಿ ಕೆ.ಜೆ.ಅಕ್ಷಯ್‌ ಸಿಂಹ ರಾಜ್ಯಕ್ಕೆ ಮೊದಲ ಸ್ಥಾನ ಮತ್ತು ದೇಶದಲ್ಲಿ 77ನೇ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. ಕನ್ನಡ ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಂಡು 77ನೇ  ರ‍್ಯಾಂಕ್ (Rank) ಪಡೆದಿರುವುದು ವಿಶೇಷ.

ರಾಜ್ಯದಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಐಎಎಸ್‌  (IAS) ಪರೀಕ್ಷೆಗೆ ಹಾಜರಾಗಿದ್ದರು. ಅವರುಗಳಲ್ಲಿ 50ಕ್ಕೂ ಹೆಚ್ಚು ಮಂದಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 16 ಮಂದಿ ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಸೇರಿದಂತೆ ವಿವಿಧ ಸೇವೆಗಳಿಗೆ ಆಯ್ಕೆಗೊಂಡಿದ್ದಾರೆ.

ರ‍್ಯಾಂಕ್ ಪಡೆದ ಕರ್ನಾಟಕದ ಅಭ್ಯರ್ಥಿಗಳು

ಕೆ.ಜೆ.ಅಕ್ಷಯ್‌ಸಿಂಹ-77, ಎಂ.ನಿಶ್ಚಯ್‌ ಪ್ರಸಾದ್‌-130, ಸಿರಿವೆನ್ನೆಲ-204, ಎಂ.ಪಿ.ಶ್ರೀನಿವಾಸ್‌ ಹುಬ್ಬಳ್ಳಿ-235, ಅನಿರುದ್‌ ಆರ್‌. ಗಂಗಾವರಂಟಿ-252, ಡಿ.ಸೂರಜ್‌ -255, ನೇತ್ರಾ ಮೇಟಿ-326, ಮೇಘಾ ಜೈನ್‌-354, ಪ್ರಜ್ವಲ್‌-367, ಸಾಗರ್‌ ಎ.ವಾಡಿ- 385, ನಾಗರಗೊಜೆ ಶುಭಂ-453, ಆರ್‌.ಎನ್‌. ಬಿಂದುಮಣಿ -468, ಶಕೀರ್‌ ಅಹ್ಮದ್‌ ತೊಂಡಿಖಾನ್‌-583, ಎಚ್‌.ಆರ್‌. ಪ್ರಮೋದ್‌ ಆರಾಧ್ಯ- 601, ಕೆ.ಸೌರಭ್‌-725, ವೈಶಾಖ್‌ ಬಗೀ-744, ಎಚ್‌.ಸಂತೋಷ್‌-751.

click me!