ಮಾರಮ್ಮ ದೇವಸ್ಥಾನಕ್ಕೆ ಪೂಜಾರಿ ನೇಮಿಸಿದ ಚಿಕ್ಕರಸಿನಕೆರೆ ಬಸವ!

By Kannadaprabha NewsFirst Published Dec 12, 2019, 10:41 AM IST
Highlights

ಮಾರಮ್ಮ ದೇವಸ್ಥಾನಕ್ಕೆ ಪೂಜಾರಿ ನೇಮಿಸಿದ ಚಿಕ್ಕರಸಿನಕೆರೆ ಬಸಪ್ಪ!| ಸೂಚಿಸಿದ ವ್ಯಕ್ತಿ ಹೆದರಿ ಓಡಿದರೂ ಬೆನ್ನು ಬಿಡದ ಬಸವ

ಮಂಡ್ಯ[ಡಿ.12]: ನಗರದ ಹೊಸಹಳ್ಳಿ ಗ್ರಾಮದ ತಂಪಿನ ಮಾರಮ್ಮ ದೇವಿಗೆ ಚಿಕ್ಕರಸಿನಕೆರೆ ಕಾಲಭೈರವೇಶ್ವರನ ಬಸವ ಅಚ್ಚರಿಯ ವ್ಯಕ್ತಿಯೊಬ್ಬರನ್ನು ಪೂಜಾರಿಯಾಗಿ ಗುರುತಿಸಿದ ಘಟನೆ ಬುಧವಾರ ನಡೆದಿದೆ.

ಮಾರಮ್ಮನ ಹಳೇ ಗುಡಿ ಇದ್ದ ಜಾಗದಲ್ಲಿ ಹೊಸ ದೇಗುಲ ನಿರ್ಮಾಣ ಮಾಡಲಾಗಿದೆ. ಸೋಮವಾರ, ಮಂಗಳವಾರ ದೇಗುಲ ಲೋಕಾರ್ಪಣೆ ಕಾರ್ಯಕ್ರಮವೂ ಇತ್ತು. ನಿತ್ಯ ಪೂಜೆ ಪುನಸ್ಕಾರ ಮಾಡಲು ಗುಡ್ಡಪ್ಪ(ಪೂಜಾರಿ)ನನ್ನು ನೇಮಿಸಲು ಬಸವನನ್ನು ಕರೆಸಲಾಗಿತ್ತು. ಬಸವನಿಗೆ ಪೂಜೆ ಸಲ್ಲಿಸಿ ಗುಡ್ಡಪ್ಪನನ್ನು ನೇಮಿಸುವಂತೆ ಭಕ್ತರು ಮನವಿ ಮಾಡಿದರು.

ನೂರಾರು ಜನರ ಮಧ್ಯೆ ವ್ಯಕ್ತಿಯೊಬ್ಬನನ್ನು ಬಸವ ಸೂಚಿಸಿತು. ಆತ ಬಸವನ ಕಾಲು ಹಿಡಿದು ತನ್ನಿಂದ ಈ ಕೆಲಸವಾಗುವುದಿಲ್ಲ. ಬೇರೆಯವರನ್ನು ನೇಮಿಸುವಂತೆ ಕೋರಿದರು. ಜನರು ಎಷ್ಟೇ ಬಲವಂತ ಮಾಡಿದರೂ ಆ ವ್ಯಕ್ತಿ ನಿರಾಕರಣೆ ಮಾಡಿದನು. ಆಗ ಮತ್ತೊಮ್ಮೆ ಪೂಜೆ ಸಲ್ಲಿಸಿ ಸಮಸ್ಯೆಗೆ ಪರಿಹರಿಸುವಂತೆ ಬಸವನಿಗೆ ಗ್ರಾಮಸ್ಥರು ಮನವಿ ಮಾಡಿದರು.

"

ಕೆಲವೊತ್ತು ಸುಮ್ಮನಿದ್ದ ಬಸವ ಬಳಿಕ ಜಗದೀಶ್‌ ಎಂಬುವರ ಬಳಿ ತೆರಳಿತು. ಆತ ಹೆದರಿ ಅಲ್ಲಿಂದ ಹೋಗಲು ಪ್ರಯತ್ನಿಸಿದರು. ಬಿಡದ ಬಸವ ಮಂಡ್ಯದ ಹೊರವಲಯದಲ್ಲಿರುವ ಹಳ್ಳದವರೆಗೂ ಅಟ್ಟಾಡಿಸಿಕೊಂಡು ಹೋಗಿ ಜಗದೀಶ್‌ ಅವರನ್ನು ನೀರಿಗೆ ತಳ್ಳಿತು. ಅಂತಿಮವಾಗಿ ಜಗದೀಶ್‌ ಗುಡ್ಡಪ್ಪನಾಗಲು ಒಪ್ಪಿದನು. ಕೊನೆಗೆ ಬಸವನಿಗೆ ಪೂಜೆ ಸಲ್ಲಿಸಲಾಯಿತು. ಈ ಹಿಂದೆಯೂ ಕೆಲವು ದೇವಾಲಯಗಳಲ್ಲಿ ಪೂಜಾರಿ ನೇಮಕ ಮಾಡಲು ಚಿಕ್ಕರಸಿನಕೆರೆ ಬಸವನ ನೆರವು ಪಡೆಯಲಾಗಿದೆ.

click me!