
ಚಿಕ್ಕಮಗಳೂರು: (ಮಾ27): ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಹಳೆಯ ದಾಖಲೆಗಳ ಹೆಸರಿನಲ್ಲಿ ನೀಡಲಾದ ಮಾನಸಿಕ ಹಿಂಸೆ ತಾಳಲಾರದೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹೆಚ್.ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದುರ್ದೈವಿ ಉಷಾ (45) ಸಾವು:
ಹೆಚ್.ಮಲ್ಲೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 2010ರಿಂದಲೂ ನಿಷ್ಠೆಯಿಂದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಉಷಾ (45) ಎಂಬುವವರೇ ಸಾವನ್ನಪ್ಪಿದ ದುರ್ದೈವಿ. ಸುಮಾರು 14 ವರ್ಷಗಳಿಂದ ಸಂಘದ ಏಳಿಗೆಗಾಗಿ ಶ್ರಮಿಸಿದ್ದ ಉಷಾ, ಈಗ ಡೆತ್ ನೋಟ್ ಹಾಗೂ ಸುದೀರ್ಘ ವಿಡಿಯೋ ರೆಕಾರ್ಡ್ ಮಾಡಿ ಸಾವಿಗೆ ಶರಣಾಗುವ ಮೂಲಕ ಇಡೀ ಗ್ರಾಮವನ್ನೇ ಸ್ಮಶಾನ ಮೌನವಾಗಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಉಷಾ ಅವರು ಸುಮಾರು 25 ನಿಮಿಷಗಳ ಕಾಲ ಸುದೀರ್ಘ ವಿಡಿಯೋ ಒಂದನ್ನು ಚಿತ್ರೀಕರಿಸಿದ್ದಾರೆ. ಇದರಲ್ಲಿ ತಾವು ಅನುಭವಿಸಿದ ನೋವು ಮತ್ತು ಕಿರುಕುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೆ, 3 ಪುಟಗಳ ಡೆತ್ ನೋಟ್ ಬರೆದಿಟ್ಟಿರುವ ಅವರು, ಅದರಲ್ಲಿ ‘ಬಸವಣ್ಣ ಕ್ಷಮಿಸಪ್ಪಾ’ ಎಂದು ಬರೆಯುವ ಮೂಲಕ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಉಷಾ ಅವರ ಸಾವಿಗೆ ಸಂಘದ ಹೊಸ ಕಮಿಟಿಯ ಸದಸ್ಯರೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಲು ಉತ್ಪಾದಕರ ಸಂಘಕ್ಕೆ ಹೊಸ ಕಮಿಟಿ ಬಂದ ಮೇಲೆ, ಅವರು ಉಷಾ ಅವರಿಗೆ ಹಳೆಯ ಲೆಕ್ಕಪತ್ರ ಹಾಗೂ ದಾಖಲೆಗಳ ಹೆಸರಿನಲ್ಲಿ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ. 2020ರಲ್ಲಿ ಮಾಡಿದ ಕೆಲಸಕ್ಕೆ ಈಗ ಬಿಲ್ ಕೇಳುತ್ತಿದ್ದಾರೆ, ಇಷ್ಟು ವರ್ಷಗಳ ಹಳೆಯ ದಾಖಲೆಗಳನ್ನು ಎಲ್ಲಿಂದ ತರಲಿ ಎಂದು ಉಷಾ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ. 'ಸಂಘದ ಹಣ ದುರುಪಯೋಗ ಮಾಡಿದ್ದೀರಾ ಎಂದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ದಂಡ ಕಟ್ಟಿ ಅಂದಿದ್ದರೆ ನಾನು ಕಟ್ಟುತ್ತಿದ್ದೆ. ಆದರೆ ಕೋರ್ಟು, ಪೊಲೀಸ್ ಅಂತ ಹೆದರಿಸಿದ್ದೀರಾ. ನೀವು ಒಂದು ಅವಕಾಶ ನೀಡಿದ್ದರೆ ನನ್ನ ಮಗಳು ಇಂದು ತಬ್ಬಲಿ ಆಗುತ್ತಿರಲಿಲ್ಲ' ಎಂದು ಉಷಾ ಕಣ್ಣೀರಿಟ್ಟಿದ್ದಾರೆ.
ಪತ್ರದಲ್ಲಿ ಉಷಾ ಅವರು ಕೇವಲ ಕಿರುಕುಳದ ಬಗ್ಗೆ ಮಾತ್ರವಲ್ಲದೆ, ತಮ್ಮ ಮಗಳ ಓದು, ಭವಿಷ್ಯ, ಮನೆಯ ಸಾಮಾನುಗಳು ಹಾಗೂ ಒಡವೆಗಳ ಬಗ್ಗೆಯೂ ಸುದೀರ್ಘವಾಗಿ ಬರೆದಿದ್ದಾರೆ. ಇಡೀ ಊರೇ ತನ್ನನ್ನು ಅವಮಾನಿಸುವಂತೆ ಮಾಡಲಾಗಿದೆ ಮತ್ತು ಊರಿನ ಕೆಲವು ಯುವಕರ ಚುಚ್ಚು ಮಾತುಗಳಿಂದ ಮನಸ್ಸಿಗೆ ತೀವ್ರವಾಗಿ ಘಾಸಿಯಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.
ಉಷಾ ಅವರ ಪತಿ ರಮೇಶ್ ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ 9 ಮಂದಿ ಆರೋಪಿಗಳು ಗ್ರಾಮ ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಇಂತಹ ಸ್ಥಿತಿಗೆ ಬಂದು ತಲುಪಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.