
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.29): ಹೊಸ ವರ್ಷದ ಸಂಭ್ರಮಾಚರಣೆಗೆ ಕಾಫಿನಾಡಿನ ರೆಸಾರ್ಟ್ ಹಾಗೂ ಹೋಂ ಸ್ಟೇಗಳು ನವ ವಧುವಿನಂತೆ ಸಿಂಗಾರಗೊಂಡು ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿವೆ. ಆದರೆ, ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಪ್ರವಾಸಿಗರಿಗೆ ಶಾಕ್ ನೀಡಿದ್ದು, ಜಿಲ್ಲೆಯ ಪ್ರಸಿದ್ಧ 22 ಪ್ರವಾಸಿ ತಾಣಗಳಿಗೆ ತಾತ್ಕಾಲಿಕವಾಗಿ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರ ಮನವಿಯ ಮೇರೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಈ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ. ಹೊಸ ವರ್ಷದ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸಂಚಾರ ದಟ್ಟಣೆ ಮತ್ತು ಅಹಿತಕರ ಘಟನೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾಡಳಿತದ ಆದೇಶದನ್ವಯ ಪ್ರಮುಖವಾಗಿ ಕೆಳಕಂಡ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ:
ಗಿರಿ ಶ್ರೇಣಿಗಳು: ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್ ಗಿರಿ, ಗಾಳಿಕೆರೆ, ಕೆಮ್ಮಣ್ಣುಗುಂಡಿ, ಕ್ಯಾತನಮಕ್ಕಿ, ರುದ್ರಪಾದ.
ಜಲಪಾತಗಳು: ಮಾಣಿಕ್ಯಧಾರಾ, ಝರಿ ಫಾಲ್ಸ್, ಹೆಬ್ಬೆ ಜಲಪಾತ, ಡೈಮಂಡ್ ಫಾಲ್ಸ್, ಬಂಡಾಜೆ ಫಾಲ್ಸ್, ಕೂಡಿಗೆ ಫಾಲ್ಸ್, ಅಬ್ಬುಗುಡಿಗೆ ಫಾಲ್ಸ್.
ಕೆರೆ ಮತ್ತು ಗುಡ್ಡಗಳು: ಹಿರೇಕೊಳಲೆ ಕೆರೆ, ಅಯ್ಯನಕೆರೆ, ಮದಗದಕೆರೆ, ಎತ್ತಿನಭುಜ, ದೇವರಮನೆ, ರಾಣಿಝರಿ, ಬಳ್ಳಾಳರಾಯನ ದುರ್ಗ ಹಾಗೂ ಹೊನ್ನಮ್ಮನಹಳ್ಳ.
ಪ್ರವಾಸಿಗರು ಕುಡಿದ ಮತ್ತಿನಲ್ಲಿ ಹೊಸ ವರ್ಷದ ಆಚರಣೆ ವೇಳೆ ಅಪಾಯಕಾರಿ ಸ್ಥಳಗಳಲ್ಲಿ ಸಂಚರಿಸಿ ಅನಾಹುತ ಮಾಡಿಕೊಳ್ಳಬಾರದು ಎಂಬುದು ಜಿಲ್ಲಾಡಳಿತದ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಜಾವರೈನ್ ಚೆಕ್ ಪೋಸ್ಟ್ನಿಂದ ಗಿರಿಯ ಮೇಲ್ಭಾಗಕ್ಕೆ ತೆರಳುವ ಪ್ರವಾಸಿಗರನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಸೂಚನೆ: ಈಗಾಗಲೇ ಆನ್ಲೈನ್ ಮೂಲಕ ಹೋಂ ಸ್ಟೇ ಅಥವಾ ರೆಸಾರ್ಟ್ಗಳನ್ನು ಕಾಯ್ದಿರಿಸಿದ (Booking) ಪ್ರವಾಸಿಗರಿಗೆ ಮಾತ್ರ ಆಯಾ ಸ್ಥಳಗಳಿಗೆ ಹೋಗಲು ಅವಕಾಶ ನೀಡಲಾಗುತ್ತದೆ. ಉಳಿದಂತೆ ಪ್ರವಾಸಿ ಕೇಂದ್ರಗಳಿಗೆ ಸಾರ್ವಜನಿಕ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.