
ಚಿಕ್ಕಮಗಳೂರು: ನಗರದ ವಿಜಯಪುರ ಬಡಾವಣೆಯಲ್ಲಿನ ಕಲ್ಲು ತೂರಾಟ ಸಂಬಂಧ ನಡೆದ ಕೋಮು ಘರ್ಷಣೆ ನಡೆದಿತ್ತು. ಈ ಘಟನೆಯಲ್ಲಿ ಹಿಂದೂ ಸಂಘಟನೆಗಳಿಂದ ಹಲ್ಲೆಗೊಳಗಾದ ಅನ್ಯಕೋಮಿನ ಇಬ್ಬರು ಅಪ್ರಾಪ್ತರು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಪ್ರಾಪ್ತರ ಪೋಷಕರು, ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಜನರ ವಿರುದ್ಧ ಎಫ್ಐಆರ್ ದಾಖಲಾಗಬೇಕು. ನಮ್ಮ ಮಕ್ಕಳಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಂಜೆ ಪಾನಿಪುರಿ ತಿನ್ನೋಕೆ ಹೋದವರನ್ನು ಹಿಡಿದು ಹೊಡೆದಿದ್ದಾರೆ. ಆನಂತರ ಪೊಲೀಸರು ಬಂದು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಇಬ್ಬರು ಅಪ್ರಾಪ್ತರ ಪೈಕಿ ಓರ್ವನ ತಾಯಿಯಾಗಿರುವ ಶಾಹಿನ್, ನನ್ನ ಮಗ ತಪ್ಪು ಮಾಡಿಲ್ಲ. ಕಲ್ಲು ಯಾರು ಹೊಡೆದಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಮನೆಯಲ್ಲಿ ಸೊಪ್ಪು ಸಾರು ಮಾಡಿದ್ದೆ , ತಿನ್ನಲ್ಲ ಅಂತ ಪಾನಿಪುರಿ ತಿನ್ನಲು ವಿಜಯಪುರ ರಸ್ತೆಗೆ ಹೋಗಿದ್ದಾರೆ. ಆಗ ಯಾರೋ ಹುಚ್ಚರು ರಸ್ತೆ ಕಲ್ಲು ತೂರಾಟ ನಡೆಸಿದ್ದಾರೆ. ಆಗ ಪಾಪದ ಮಕ್ಕಳನ್ನು ಹಿಡಿದು ಬಜರಂಗದಳದವರು ಹಲ್ಲೆ ನಡೆಸಿದ್ದಾರೆ. ಸಿಸಿಟಿವಿ ಚೆಕ್ ಮಾಡಲಿ ಯಾರು ಕಲ್ಲು ಹೊಡೆದಿದ್ದಾರೆ ಅವರಿಗೆ ಶಿಕ್ಷೆ ಕೊಡಲಿ , ಇವರು ಯಾರು ಶಿಕ್ಷೆ ಕೊಡಲಿಕ್ಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೋರ್ವ ಅಪ್ರಾಪ್ತನ ತಾಯಿ ರಿಯಾನಾ ಬೇಗಂ ಮಾತನಾಡಿ, ನನ್ನ ಮಗ ತಪ್ಪು ಮಾಡಿಲ್ಲ, ರಾತ್ರಿ ಪಾನಿಪುರಿ ತಿನ್ನಲು ವಿಜಯಪುರ ರಸ್ತೆಗೆ ಹೋಗಿದ್ದರು. ಪಾನಿಪುರಿ ತಿಂದು ಬರುತ್ತಿರುವಾಗ ಕೆಲವರು ಬಂದು ಹೆಸರು ಕೇಳಿದ್ದಾರೆ. ಹೆಸರು ಹೇಳುತ್ತಿದ್ದಂತೆ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಜರಂಗದಳದ ಕಾರ್ಯಕರ್ತರು ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳ್ತಿದ್ದಾರೆ. ನನ್ನ ಮಕ್ಕಳು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಪೊಲೀಸರು ಶಿಕ್ಷೆ ಕೊಡಲಿ, ಇವರು ಯಾರು ಶಿಕ್ಷೆ ಕೊಡಲಿಕ್ಕೆ. ನನ್ನ ಮಕ್ಕಳು ತಪ್ಪು ಮಾಡಿದ್ದರೆ ಸಿಸಿಟಿವಿ ಚೆಕ್ ಮಾಡಿ ಹೇಳಲಿ. ನನ್ನ ಮಕ್ಕಳು ಇಂತಹ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ನಾವು ಕಲ್ಲು ತೂರಾಟ ನಡೆಸಿಲ್ಲ, ನಾವು ಪಾನಿಪುರಿ ತಿನ್ನಲು ವಿಜಯಪುರ ರಸ್ತೆಗೆ ಹೋಗಿದ್ದೀವಿ. ಆಗ ಅಲ್ಲಿಯೇ ಇದ್ದ ಶ್ಯಾಮ್ , ಸಂತೋಷ್ ನಮ್ಮ ಮೇಲೆ ಹಲ್ಲೆ ನಡೆಸಿದರು. ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆಯಲ್ಲಿ ಹೆಸರು ಕೇಳಿ ಹಲ್ಲೆ ನಡೆಸಿದರು. ಪಾನಿಪುರಿ ತಿಂದು ಮನೆಗೆ ಹೋಗುವ ವೇಳೆಯಲ್ಲಿ ಹಲ್ಲೆ ನಡೆಸಿದರ. ಅವರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಅಪ್ರಾಪ್ತ ಬಾಲಕರು ಆಗ್ರಹಿಸಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಎಸ್ಡಿಪಿಐ ಮುಖಂಡ ಮುನೀರ್, ಹಲ್ಲೆ ನಡೆಸಿರುವ ಬಜರಂಗದಳದ ಮುಖಂಡ ಶ್ಯಾಮ್ ,ಬಿಜೆಪಿ ಮುಖಂಡ ಸಂತೋಷ್ ವಿರುದ್ದ ಕಿಡಿಕಾರಿದರು. ಈ ಇಬ್ಬರನ್ನು ಜಿಲ್ಲೆಯಿಂದ ಕೊಡಲೇ ಗಡಿಪಾರು ಮಾಡಬೇಕು. ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಮುಂದಾಗುತ್ತಿದ್ದಾರೆ. ನೈತಿಕ ಪೊಲೀಸ್ ಗಿರಿ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕೋಮು ಘರ್ಷಣೆ; ಇಡೀ ನಗರ ಬೂದಿ ಮುಚ್ಚಿದ ಕೆಂಡ: ರಾತ್ರೋರಾತ್ರಿ ನಡೆದಿದ್ದೇನು?
ಯಾರು ನಿಜವಾಗಿಯೂ ಕಲ್ಲು ತೂರಾಟ ನಡೆಸಿದ್ದಾರೆಯೋ ಅವರಿಗೆ ಶಿಕ್ಷೆ ಆಗಲಿ. ಅದನ್ನು ಬಿಟ್ಟು ಅಮಾಯಕರನ್ನು ಹಿಡಿದು ಹಲ್ಲೆ ನಡೆಸಲಾಗಿದೆ. ಇದನ್ನು ಎಸ್ಡಿಪಿಐ ತೀವ್ರವಾಗಿ ಖಂಡಿಸುತ್ತದೆ. ಈ ಪ್ರಕರಣ ಸಂಬಂಧ ಎಸ್ಪಿ ಅವರಿಗೆ ದೂರು ಕೊಡುತ್ತೇವೆ. ಇದು ಹಿಂದೂ, ಮುಸಲ್ಮಾನರ ಗಲಾಟೆ ಅಲ್ಲ. ಬಿಜೆಪಿ ಈ ಕ್ಷೇತ್ರದಲ್ಲಿ ಸೋತಿದೆ ಹಾಗಾಗಿ ಮತ್ತೆ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಹುನ್ನಾರ, ಗಲಾಟೆಯನ್ನು ನಡೆಸುತ್ತಿದೆ. ಮುಂದಿನ ಚುನಾವಣೆಯ ಪೂರ್ವ ತಯಾರಿಯನ್ನು ಬಿಜೆಪಿ ನಡೆಸುತ್ತಿದೆ ಎಂದು ಮುನೀರ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ತಟ್ಟೆ ಬಿದ್ದು ಅನ್ನ ಚೆಲ್ಲಿದ್ದಕ್ಕೆ ಬೈದ ಅಮ್ಮಾ, ದುರಂತ ಅಂತ್ಯಕಂಡ 7ನೇ ತರಗತಿ ವಿದ್ಯಾರ್ಥಿನಿ