ರಕ್ಷಿಸಬೇಕಾದ ಎಪಿಎಂಸಿಗಳಲ್ಲಿಯೇ ರೈತರಿಗೆ ಅನ್ಯಾಯ: ಸಿ.ಟಿ.ರವಿ ಎಚ್ಚರಿಕೆ

Published : May 25, 2026, 05:24 PM IST
CT Ravi

ಸಾರಾಂಶ

ರೈತರನ್ನು ರಕ್ಷಿಸಬೇಕಾದ ಎಪಿಎಂಸಿಯಲ್ಲೇ ರೈತರಿಗೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ನಿರ್ದೇಶಿಸಬೇಕು ಇಲ್ಲವಾದರೆ, ಹೋರಾಟ ಅನಿವಾರ್ಯವಾಗಲಿದೆ ಎಂದು ಸಿ.ಟಿ.ರವಿ ಎಚ್ಚರಿಸಿದ್ದಾರೆ.

ಚಿಕ್ಕಮಗಳೂರು (ಮೇ.25): ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ರಕ್ಷಿಸಬೇಕಾದ ಎಪಿಎಂಸಿಯಲ್ಲೇ ರೈತರಿಗೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ನಿರ್ದೇಶಿಸಬೇಕು ಇಲ್ಲವಾದರೆ, ಹೋರಾಟ ಅನಿವಾರ್ಯವಾಗಲಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಎಚ್ಚರಿಸಿದ್ದಾರೆ.

ಚಿಕ್ಕಮಗಳೂರಿನ ಎಪಿಎಂಸಿ ಗೇಟ್‌ಗೆ ಬೀಗ ಹಾಕಿ ರೈತರ ಪ್ರತಿಭಟನೆ ಕುರಿತು ಪ್ರಕ್ರಿಯಿಸಿರುವ ಅವರು, ಇಂದು ಮೈಸೂರಿನ ಎಪಿಎಂಸಿಯಲ್ಲಿ ಪ್ರತಿ ಕೆಜಿ ಬೀನ್ಸ್‌ ಬೆಲೆ ₹85 ನಿಂದ ₹90 ಇದೆ. ಆದರೆ, ಚಿಕ್ಕಮಗಳೂರಿನಲ್ಲಿ ಕೇವಲ ₹35 ನಿಂದ ₹40 ದರ ಇದೆ. ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ರಕ್ಷಿಸಬೇಕಾದ ಎಪಿಎಂಸಿಯಲ್ಲೇ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.

ರೈತರನ್ನು ದೊಡ್ಡ ವ್ಯಾಪಾರಿಗಳ ಏಕಸ್ವಾಮ್ಯದಿಂದ, ಮಧ್ಯವರ್ತಿಗಳ ಹಾವಳಿಯಿಂದ ರಕ್ಷಿಸಲು ಎಪಿಎಂಸಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಇಂತಹ ವ್ಯವಸ್ಥೆಯಲ್ಲೂ ರೈತರಿಗೆ ಅನ್ಯಾಯವಾದರೆ, ಅಮಾಯಕ ರೈತರು ಎಲ್ಲಿಗೆ ಹೋಗಬೇಕು?, ಯಾರಲ್ಲಿ ನ್ಯಾಯ ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬೀನ್ಸ್ ಬೆಳೆದು, ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ ಇದೆ ಎಂದು ಸಂಭ್ರಮದಿಂದ ಎಪಿಎಂಸಿಗೆ ಬಂದ ರೈತರು ಕಣ್ಣೀರಿಡುವ ಪರಿಸ್ಥಿತಿ ತರಲಾಗಿದೆ. ಇದಕ್ಕೆ ಹೊಣೆ ಯಾರು?. ಸಾಮಾನ್ಯ ಗ್ರಾಹಕರಿಗೆ ಪ್ರತಿ ಕೆಜಿ ಬಿನ್ಸ್‌ ಬೆಲೆ ₹150 ಗೂ ಅಧಿಕ ಬೆಲೆಗೆ ಬೀನ್ಸ್ ಮಾರಾಟವಾಗುತ್ತಿದೆ. ಆದರೆ, ಚಿಕ್ಕಮಗಳೂರಿನ ರೈತರಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ.

ಯಾವುದೇ ಕ್ರಮ ಕೈಗೊಂಡಿಲ್ಲ

ಮಳೆ ವ್ಯತ್ಯಯದ ನಡುವೆ ರೈತರು ಕಷ್ಟಪಟ್ಟು ಕೃಷಿ ಮಾಡಿ ಬೀನ್ಸ್ ಬೆಳೆದಿದ್ದಾರೆ. ಆದರೆ, ಮಧ್ಯವರ್ತಿಗಳು ನೇರವಾಗಿಯೇ ಅನ್ಯಾಯ ಎಸಗುತ್ತಿದ್ದರೂ ಅಧಿಕಾರಿಗಳೇಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಅಧಿಕಾರಿಗಳ ಕೈ ಕಟ್ಟಿಹಾಕಿರುವುದು ಯಾರು?, ಕುರ್ಚಿ ಕಿತ್ತಾಟ, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಕುರಿತು ಸ್ವಲ್ಪವೂ ಕಾಳಜಿಯಿಲ್ಲ ವಾಗಿದೆ ಎಂದು ಕಿಡಿಕಾರಿದ್ದಾರೆ.

ತರಕಾರಿ ಬೆಳೆಗಾರರು ಬೀದಿಗಿಳಿಯುವ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರ ತಂದಿದೆ. ರೈತರನ್ನು ಬೀದಿಗೆ ತಂದ, ರೈತರ ಆಕ್ರೋಶಕ್ಕೆ ಕಾರಣವಾದ ಯಾವ ಸರ್ಕಾರವೂ ಉಳಿದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯಲ್ಲ ಎಂದು ಹೇಳಿದ್ದಾರೆ.

ಎಲ್ಲ ಎಪಿಎಂಸಿಗಳಲ್ಲೂ ಸಮಾನ ಸ್ವರೂಪದ ಬೆಲೆಗೆ ತರಕಾರಿ ಖರೀದಿಯಾಗುವಂತೆ ಸರ್ಕಾರ ಸೂಚನೆ ನೀಡಬೇಕು. ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಮಧ್ಯವರ್ತಿಗಳು ಮನಬಂದಂತೆ ಬೆಲೆ ನಿಗದಿಪಡಿಸುತ್ತಿದ್ದಾರೆ ಎಂದರೆ ಅಧಿಕಾರಿಗಳು ಅತ್ತ ಗಮನ ಹರಿಸುವಂತೆ ತಕ್ಷಣವೇ ಸೂಚನೆ ನೀಡಬೇಕು. ಈ ಸಮಸ್ಯೆಗೆ ತಕ್ಷಣವೇ ಪರಿಹಾರ ಒದಗಿಸಲು ಸಾಧ್ಯವಾಗದಿದ್ದರೆ, ನಾವು ರೈತರ ಜೊತೆಗೂಡಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

ಗದಗದಲ್ಲಿ ಇಂಧನಕ್ಕೆ ಹಾಹಾಕಾರ, ಬಂಕ್‌ಗಳೇ ಖಾಲಿ, ರೈತರು ಮತ್ತು ಸವಾರರ ಕಿಲೋಮೀಟರ್ ಉದ್ದದ ಕ್ಯೂ!
ಭಟ್ಕಳದಲ್ಲಿ ಮತ್ತೆ ಉದ್ವಿಗ್ನತೆ: ಮೂರಿನ ಕಟ್ಟೆ ವಿವಾದ ತೀವ್ರ, ಮೂರು ದಿನ ನಿಷೇಧಾಜ್ಞೆ, ಮುಂದೇನು?