
ಉತ್ತರ ಕನ್ನಡ (ಮೇ.25): ಜಿಲ್ಲೆಯ ಭಟ್ಕಳ ಮತ್ತೆ ಹಿಂದು ಮುಸ್ಲಿಂ ಗದ್ದಲ ಗಲಾಟೆಗೆ ಸಾಕ್ಷಿ ಆಗಿದೆ. ಹಿಂದು ಧಾರ್ಮಿಕತೆಯ ಸಂಕೇತವಾದ ಮೂರಿನ ಕಟ್ಟೆ ಮರು ನಿರ್ಮಾಣ ಹಾಗೂ ಮುಸ್ಲಿಮರಿಂದ ಮೂರಿನಕಟ್ಟೆ ಧ್ವಂಸ ವಿಚಾರ ಈಗ ತಾರಕಕ್ಕೇರಿದೆ. ಹೌದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೂರಿನ ಕಟ್ಟೆ ಮರು ನಿರ್ಮಾಣ ವಿಚಾರ ಹಿಂದು ಮುಸ್ಲಿಂ ಸಂಘಟನೆಯ ಕೋಮು ಸಂಘರ್ಷಕ್ಕೆ ಕಾರಣವಾಗಿದೆ. ಕಳೆದ ನೂರಾರು ವರ್ಷದಿಂದ ಭಟ್ಕಳ ನಗರದ ಜಾಗಟೆ ಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೂರಿನ ಕಟ್ಟೆಯಿತ್ತು. ಶಿರಸಿ ಮಾರಿಕಾಂಬೆಗೆ ಭಕ್ತರು ನೀಡುವ ಹೊರೆಗಾಣಿಕೆಯನ್ನು ಆಯಾ ಗ್ರಾಮದ ಜನರು ಮುಂದಿನ ಗ್ರಾಮಕ್ಕೆ ಸಾಗಿಸುತ್ತಾರೆ.
ಯಾವ ಗ್ರಾಮದಲ್ಲಿ ಹೊರೆಕಾಣಿಕೆ ಇರಿಸುತ್ತಾರೋ ಆಸ್ಥಳಕ್ಕೆ ಮೂರಿನ ಕಟ್ಟೆ ಎನ್ನುತ್ತಾರೆ. ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಸಂದರ್ಭದಲ್ಲಿ ಭಟ್ಕಳದ ಮೂರಿನ ಕಟ್ಟೆಯನ್ನ ತೆರವು ಮಾಡಲಾಗಿತ್ತು, ಇದನ್ನ ಮರು ನಿರ್ಮಾಣ ಮಾಡಿಕೊಡುವ ಬಗ್ಗೆ NHAI ಕೂಡಾ ಹೇಳಿತ್ತು, ಇದೊಂದು ಹಿಂದು ಧಾರ್ಮಿಕ ಸಂಕೇತ ಆಗಿದ್ರಿಂದ ಕಟ್ಟೆಯನ್ನ ನಿರ್ಮಾಣ ಮಾಡಿಕೊಡುವ ಭರವಸೆ ಇತ್ತು, ಆದ್ರೆ ವರ್ಷ ಕಳೆದರು ಕಟ್ಟೆ ನಿರ್ಮಾಣ ಮಾಡದ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿಂದ ಕಟ್ಟೆ ಮರು ನಿರ್ಮಾಣ ವಿಚಾರ ಹಿಂದು ಮುಸ್ಲಿಂ ಸಂಘಟನೆಯ ಜಗಳಕ್ಕೆ ಕಾರಣವಾಯಿತು.
ಮೂರಿನ ಕಟ್ಟೆ ನಿರ್ಮಾಣಕ್ಕೆ ಉದ್ದೇಶಿತ ಸ್ಥಳದ ಅಕ್ಕ ಪಕ್ಕ ಮುಸ್ಲಿಮರ ಜಾಗ ಇದೆ ಎಂಬ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮೂರಿನ ಕಟ್ಟೆ ನಿರ್ಮಾಣ ಮಾಡಬಾರದೆಂದು ಮಾಡಲು ಮುಸ್ಲಿಂ ಸಂಘಟನೆಯವರು ವಿರೋಧ ಮಾಡಿದ್ದಾರೆ. ನಿನ್ನೆ ವಿರೋಧದ ನಡುವೆಯೂ ಮೂರಿನ ಕಟ್ಟೆಯನ್ನ ಹಿಂದೂ ಪರ ಸಂಘಟನೆಯವರು ನಿರ್ಮಾಣ ಮಾಡಿದ್ದರು, ಬೆಳಿಗ್ಗೆ ನಿರ್ಮಾಣವಾದ ಮೂರಿನಕಟ್ಟೆಯನ್ನು ಸಂಜೆಯೊಳಗೆ ಮುಸ್ಲಿಂ ಸಂಘಟನೆಯವರು ಒಡೆದು ಹಾಕಿದ್ದು ಗದ್ದಲ ಗಲಾಟೆಗೆ ಇನ್ನಷ್ಟು ಪುಷ್ಟಿ ಸಿಕ್ಕಿತು. ಇನ್ನು ಮೂರಿನ ಕಟ್ಟೆ ಒಡೆದ ವಿಚಾರದಲ್ಲಿ ಹಿಂದು ಪರ ಸಂಘಟನೆಯವರು ಮತ್ತೆ ರೊಚ್ಚಿಗೆದ್ದಿದ್ದಾರೆ, ರಾತ್ರೋ ರಾತ್ರಿ ಭಟ್ಕಳ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಮೂರಿನ್ ಕಟ್ಟೆ ಧ್ವಂಸ ಮಾಡಿರುವ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಮೂರಿನ ಕಟ್ಟೆ ಧ್ವಂಸ ಸಂದರ್ಭದಲ್ಲಿ ಪೊಲೀಸರ ಮೇಲೆ ಹಾಗೂ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆನಡೆದಿದೆ. ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರ ದೂರು ದಾಖಲಿಸುವಲ್ಲಿ ಪೊಲೀಸರು ಮೀನಾಮೆಷ ಎಣಿಸಿದ್ದಾರೆ ಎಂದು ಆರೋಪಿಸಿದರು. ಇನ್ನೂ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವಿನ ಚರ್ಚೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ರಾತ್ರೋ ರಾತ್ರಿ ಮೂರಿನ ಕಟ್ಟೆ ಪುನರ್ ನಿರ್ಮಾಣಕ್ಕೆ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಹಿಂದುಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಇನ್ನೂ ಭಟ್ಕಳ ಕೋಮು ಸೂಕ್ಷ್ಮ ಪ್ರದೇಶವಾದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಟ್ಕಳ ನಗರ ಹಾಗೂ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಮತ್ತು ಮದ್ಯ ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಭಟ್ಕಳ ಮಾಜಿ ಶಾಸಕ ಸುನೀಲ ನಾಯ್ಕ ಪ್ರತಿಭಟನೆ ಎನ್ನುವುದು ಎಲ್ಲರ ಹಕ್ಕು, ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿಮಾಡುವ ಮೂಲಕ ನಮ್ಮ ಹೋರಾಟದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ಅಧಿಕಾರಿಗಳಿಂದ ನಡೆದಿದೆ.
ಈ ಎಲ್ಲಾ ವಿದ್ಯಮಾನಗಳ ಮಾಹಿತಿ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಇನ್ನೆರಡು ದಿನಗಳಲ್ಲಿ ಭಟ್ಕಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗಮಿಸಲಿದ್ದು ಬೃಹತ್ ಪ್ರತಿಭಟನೆ ನಡೆಸಲಾಗುವುದು. ಮತ್ತು ಮುಸ್ಲಿಮರಿಂದ ದ್ವಂಸ ಗೊಂಡ ಸ್ಥದಲ್ಲಿಯೇ ಮೂರಿನ ಕಟ್ಟೆ ಪುನರ್ ನಿರ್ಮಾಣ ಮಾಡಲಾಗುವುದು ಎಂದರು. ಒಟ್ಟಾರೆ ಭಟ್ಕಳ ಈಗ ಮತ್ತೆ ಹಿಂದು ಮುಸ್ಲಿಂ ಗಲಾಟೆ ಗದ್ದಲದಿಂದ ಸದ್ದು ಮಾಡಿದೆ. ಇದು ಎಲ್ಲಿಯ ತನಕ ಮುಂದುವರಿಯುತ್ತದೆ ಎನ್ನೋದು ಕಾದು ನೋಡಬೇಕಾಗಿದೆ.