
ಚಿಕ್ಕಮಗಳೂರು (ಸೆ.06): ಹಾಫ್ ಹೆಲ್ಮೆಟ್ ಹಾಕುವವರೇ ಎಚ್ಚರ.. ಎಚ್ಚರ.. ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ಹಿರೇಮಗಳೂರಿನಲ್ಲಿ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ತಾಲೂಕಿನ ಸಗಣಿಪುರ ಗ್ರಾಮದ ಪಾಂಡುರಂಗ (55) ಎಂದು ಗುರುತಿಸಲಾಗಿದೆ. ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಬಳಿಕ ಟಿಪ್ಪರ್ನ ಹಿಂಬದಿಯ ಟೈರ್ ಪಾಂಡುರಂಗ ಅವರ ತಲೆಯ ಮೇಲೆ ಹರಿದಿದೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಾಂಡುರಂಗ ಅವರು ಹಾಫ್ ಹೆಲ್ಮೆಟ್ ಧರಿಸಿದ್ದರೆನ್ನಲಾಗಿದ್ದು, ಅಪಘಾತದ ತೀವ್ರತೆಗೆ ತಲೆಗೆ ಗಂಭೀರ ಗಾಯವಾಗಿದೆ. ಫುಲ್ ಫೇಸ್ ಹೆಲ್ಮೆಟ್ ಧರಿಸಿದ್ದರೆ ಅಪಘಾತದ ಪರಿಣಾಮ ಕಡಿಮೆಯಾಗಬಹುದಿತ್ತು ಎಂಬ ಮಾತುಗಳು ಸ್ಥಳದಲ್ಲಿ ಕೇಳಿಬಂದಿವೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ. ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಸಕ ತಮ್ಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಿರೇಮಗಳೂರಿನಲ್ಲಿ ನಡೆದ ಈ ಅಪಘಾತ ಮತ್ತೊಮ್ಮೆ ದ್ವಿಚಕ್ರ ವಾಹನ ಸವಾರರು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ನೆನಪಿಸಿದೆ.