
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿಪಿಎಲ್ (BPL) ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಈಗ ಸರ್ಕಾರದ ಹೊಸ ಆದೇಶ ಮತ್ತು ಆಹಾರ ಇಲಾಖೆಯ ಕ್ರಮಗಳು ನಡುಕ ಹುಟ್ಟಿಸಿವೆ. ಅರ್ಹತೆಯಿಲ್ಲದವರ ಕಾರ್ಡ್ಗಳನ್ನು ಪತ್ತೆ ಹಚ್ಚುವ ಹೆಸರಿನಲ್ಲಿ ಆಹಾರ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಯಿಂದಾಗಿ ಕಳೆದ ಆರು ತಿಂಗಳಲ್ಲೇ 5 ಸಾವಿರಕ್ಕೂ ಅಧಿಕ ಕಾರ್ಡ್ಗಳು ರದ್ದಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಸರ್ಕಾರದ ನಿರ್ದೇಶನದಂತೆ ಮಾರ್ಚ್ 31ರವರೆಗೆ ವಿಶೇಷ ಪರಿಶೀಲನಾ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದ ವೇಳೆ ಆಹಾರ ಇಲಾಖೆಯ ಅಧಿಕಾರಿಗಳು ಒಟ್ಟು 11,300 ಬಿಪಿಎಲ್ ಕಾರ್ಡ್ಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ್ದರು. ಈ ಪೈಕಿ ಬರೋಬ್ಬರಿ 5,300 ಕಾರ್ಡ್ಗಳನ್ನು ನಿಯಮ ಬಾಹಿರ ಎಂದು ಗುರುತಿಸಿ ರದ್ದುಪಡಿಸಲಾಗಿದೆ. ಇಷ್ಟಕ್ಕೇ ಈ ಪ್ರಕ್ರಿಯೆ ನಿಂತಿಲ್ಲ, ಇನ್ನೂ 3,352 ಕಾರ್ಡ್ಗಳ ವಿಚಾರಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಆಹಾರ ಇಲಾಖೆಯ ಅಧಿಕಾರಿಗಳ ಪ್ರಕಾರ, ಅನೇಕರು ವಾಸ್ತವ ಆದಾಯವನ್ನು ಮರೆಮಾಚಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಮುಖ್ಯವಾಗಿ:
ಸರ್ಕಾರದ ಈ ಕ್ರಮವು ಜಿಲ್ಲೆಯ ಜನಸಾಮಾನ್ಯರನ್ನು ಕೆರಳಿಸಿದೆ. ಒಂದೆಡೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಕೈಯಲ್ಲಿದ್ದ ಬಿಪಿಎಲ್ ಕಾರ್ಡ್ ರದ್ದಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. "ಅಧಿಕಾರಿಗಳು ಕೇವಲ ಅಂಕಿಅಂಶಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಇದರಿಂದ ನಿಜವಾದ ಅರ್ಹ ಬಡ ಕುಟುಂಬಗಳಿಗೂ ಅನ್ಯಾಯವಾಗುತ್ತಿದೆ. ಸರಿಯಾದ ಪರಿಶೀಲನೆ ಇಲ್ಲದೆ ಕಾರ್ಡ್ ರದ್ದು ಮಾಡುತ್ತಿರುವುದರಿಂದ ದೈನಂದಿನ ರೇಷನ್ ಮತ್ತು ಇತರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ" ಎಂಬ ಅಳಲು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಬಿಪಿಎಲ್ ಕಾರ್ಡ್ ರದ್ದತಿ ವಿಚಾರವು ಈಗ ಜಿಲ್ಲೆಯಲ್ಲಿ ರಾಜಕೀಯ ಬಣ್ಣ ಪಡೆದುಕೊಂಡಿದೆ. ಜಿಲ್ಲಾ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಎಂದು ಟೀಕಿಸಿದ್ದಾರೆ. 'ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಸರ್ಕಾರ ಹಣ ಉಳಿಸಲು ಬಡವರ ಕಾರ್ಡ್ಗಳನ್ನು ಕಡಿತಗೊಳಿಸುತ್ತಿದೆ' ಎಂದು ಆರೋಪಿಸಿದ್ದಾರೆ. ಸರ್ಕಾರವು ತಕ್ಷಣವೇ ಪಾರದರ್ಶಕವಾಗಿ ತನಿಖೆ ನಡೆಸಿ, ಯಾವುದೇ ಅರ್ಹ ಕುಟುಂಬಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಒಟ್ಟಾರೆಯಾಗಿ, ಆಹಾರ ಇಲಾಖೆಯ ಈ 'ಶುದ್ಧೀಕರಣ' ಪ್ರಕ್ರಿಯೆಯು ಕಾಫಿನಾಡಿನಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕಾರ್ಡ್ ಕಳೆದುಕೊಂಡ ಕುಟುಂಬಗಳು ಮುಂದಿನ ದಾರಿಯಿಲ್ಲದೆ ಕಂಗಾಲಾಗಿವೆ.