
ಚಾಮರಾಜನಗರ: ಗ್ರಾಮ ಉದಯವಾದಾಗಿನಿಂದ ಇದುವರೆಗೂ ನಮ್ಮ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ಇರಲಿಲ್ಲ. ಇದೀಗ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರ ಮನವಿ ಮೇರೆಗೆ ಬಸ್ ಸಂಚಾರ ಪ್ರಾರಂಭ ಮಾಡಿರುವುದಕ್ಕೆ ಕಿಸಾನ್ ಸಂಘದ ಕೊಪ್ಪ ಗ್ರಾಮ ಘಟಕದ ಅಧ್ಯಕ್ಷ ನಾಗರಾಜು ಅವರು ಕೆಎಸ್ಆರ್ಟಿಸಿ ನಿಗಮದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 80 ವರ್ಷ ಪೂರ್ಣಗೊಳ್ಳುತ್ತಿದೆ. ಆದರೆ ಮಿಣ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಪ್ಪ ಗ್ರಾಮಕ್ಕೆ ಇದುವರೆಗೂ ಕೆಎಸ್ಆರ್ಟಿಸಿ ಬಸ್ ಸಂಚಾರ ಇರಲಿಲ್ಲ. ಬರುವ ಬಸ್ಗಳು ಮುಖ್ಯರಸ್ತೆಯಲ್ಲಿಯೇ ಹೋಗುತ್ತಿದ್ದವು. ಇದರಿಂದ ನಮ್ಮ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ನಡೆದುಕೊಂಡೇ ಗ್ರಾಮಕ್ಕೆ ವಾಪಸ್ ಬರಬೇಕಾಗಿತ್ತು.
ಈ ಸಂಬಂಧ ಕೆಎಸ್ಆರ್ಟಿಸಿ ಕೊಳ್ಳೇಗಾಲ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅವರು ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಬರುತ್ತಿರುವುದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ಕಷ್ಟ ತಪ್ಪಿದೆ. ನಿಗದಿತ ಸಮಯಕ್ಕೆ ಶಾಲಾ-ಕಾಲೇಜಿಗೆ ಹೋಗಲು ಅನುಕೂಲವಾಗಿದೆ. ಇದರಿಂದ ಸಮಯವೂ ಸಹ ಉಳಿತಾಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Udupi: ಕಾರ್ಕಳ ತಾಲೂಕಿ ಪುಟ್ಟ ಗ್ರಾಮದಲ್ಲಿ ಪತ್ತೆಯಾಯ್ತು 400 ವರ್ಷಗಳ ಹಿಂದಿನ ರಹಸ್ಯ
ಕೊಪ್ಪ ಗ್ರಾಮದಿಂದ ನೂತನ ಬಸ್ ಸಂಚಾರ ಪ್ರಾರಂಭವಾದ್ದರಿಂದ ಗ್ರಾಮಸ್ಥರು ಕೆಎಸ್ಆರ್ಟಿಸಿ ಬಸ್ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ವೇಳೆ ಕಿಸಾನ್ ಸಂಘದ ಗ್ರಾಮ ಘಟಕದ ಕಾರ್ಯದರ್ಶಿ ನಾಗೇಶ್, ಸದಸ್ಯರಾದ ನಾಗರಾಜು, ಮುರುಗೇಶ್, ಮುನಿಯಪ್ಪ, ಸಣ್ಣಸಿದ್ದ, ಮಾದೇವ, ಭದ್ರ, ವೆಂಕಟೇಶ್, ಬಸವರಾಜು, ಮಾದೇಶ್, ಮಾರೇಗೌಡ ಹಾಜರಿದ್ದರು.
ಇದನ್ನೂ ಓದಿ: ಬೆಂಗಳೂರಿನ ಎರಡು ಪ್ರಮುಖ ರಸ್ತೆಯಲ್ಲಿ ಮೊದಲ ಬಾರಿಗೆ 'ಫೈರ್ ಹೈಡ್ರೆಂಟ್’ ವ್ಯವಸ್ಥೆ