ಮೋದಿ ಜನಪರ ಯೋಜನೆಗಳು ಭಾರತೀಯರಿಗೆ ಶ್ರೀರಕ್ಷೆ: ಚಕ್ರವರ್ತಿ ಸೂಲಿಬೆಲೆ

By Kannadaprabha NewsFirst Published Oct 14, 2023, 9:43 PM IST
Highlights

ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಯೋಜನೆಗಳು ಭಾರತೀಯರಿಗೆ ಶ್ರೀರಕ್ಷೆಯಾಗಿವೆ ಎಂದು ರಾಜ್ಯದ ನಮೋ ಬ್ರಿಗೇಡ್ ಸಂಸ್ಥೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. 

ಚಳ್ಳಕೆರೆ (ಅ.14): ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಯೋಜನೆಗಳು ಭಾರತೀಯರಿಗೆ ಶ್ರೀರಕ್ಷೆಯಾಗಿವೆ ಎಂದು ರಾಜ್ಯದ ನಮೋ ಬ್ರಿಗೇಡ್ ಸಂಸ್ಥೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ಅವರು, ದಾವಣಗೆರೆ, ಚಿತ್ರದುರ್ಗ ಕಾರ್ಯಕ್ರಮಗಳನ್ನು ಮುಗಿಸಿ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ತಮ್ಮ ಮೋಟಾರ್ ಬೈಕ್ ಸಹಿತ ರ‍್ಯಾಲಿಯಲ್ಲಿ ಚಳ್ಳಕೆರೆಗೆ ಆಗಮಿಸಿದಾಗ ಇಲ್ಲಿ ಎಚ್‌ಪಿಪಿಸಿ ಕಾಲೇಜು ಮುಂಭಾಗದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಮೋ ಬ್ರಿಗೇಡ್ ಮಾಡುತ್ತಿದೆ. ಈಗಾಗಲೇ ಉತ್ತರ ಪ್ರದೇಶದಿಂದ ಹಿಡಿದು ರಾಜದಾನಿ ಬೆಂಗಳೂರು ತನಕ ಬೈಕ್ ರ‍್ಯಾಲಿಗಳ ಮೂಲಕ ಜನರಿಗೆ ಮೋದಿಯವರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಈ ಹಿಂದೆ ಭಾರತಕ್ಕೆ ವಿಶ್ವಸಂಸ್ಥೆಯ ಸದಸ್ಯತ್ವವನ್ನೇ ನೀಡಲು ನಿರಾಕರಿಸಿದವರು ಇಂದು ಮೋದಿಯನ್ನು ಕರೆದು ಅವರನ್ನು ಆಲಂಗಿಸಿ ಮೋದಿಯವರ ದೂರದೃಷ್ಠಿ ವಿಶ್ವಕ್ಕೆ ಮಾದರಿ ಎಂದು ಹಾರೈಸಿ ಅವರಿಗೆ ವಿಶ್ವಸಂಸ್ಥೆಯಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. 

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬುರುಡೆ ರಾಜ: ಶಾಸಕ ಎಚ್.ಸಿ.ಬಾಲಕೃಷ್ಣ

ಅಮೆರಿಕ, ಬ್ರಿಟನ್, ಕೆನಡಾ, ಚೀನಾ, ಪ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಅರ್ಜೆಂಟೈನಾ ಮುಂತಾದ ದೇಶಗಳು ಭಾಗವಹಿಸಿದ ಜಿ-೨೦ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯ ಯೋಜನೆ, ಅನುಷ್ಠಾನ ಹಾಗೂ ಮುಂದಾಲೋಚನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಎಂದರು. ನಮೋ ಬ್ರಿಗೇಡ್ ನರೇಂದ್ರಮೋದಿಯವರ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದಿದೆ. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲೂ ಸಹ ಮತ್ತೊಮ್ಮೆ ಮೋದಿಯವರ ಆಡಳಿತವನ್ನು ಈ ದೇಶದ ಜನ ಬಯಸುತ್ತಾರೆ. ಚುನಾವಣೆಯ ವಿಶ್ಲೇಷಣೆಗಳೂ ಸಹ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂಬುವುದನ್ನು ಒತ್ತಿ ಹೇಳಿವೆ. 

ಮೊಟ್ಟಮೊದಲ ಹ್ಯಾಟ್ರಿಕ್ ಪ್ರಧಾನ ಮಂತ್ರಿಯಾಗಿ ನರೇಂದ್ರಮೋದಿಯವರು ಅಧಿಕಾರ ಪಡೆಯುವ ದಿನಗಳು ಹತ್ತಿರ ಇವೆ. 9 ವರ್ಷಗಳ ಅವರ ಆಡಳಿತದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ, ಕೇಂದ್ರ ಸರ್ಕಾರದ ಪ್ರತಿಯೊಬ್ಬ ಮಂತ್ರಿಯೂ ಸಹ ಜನಸೇವೆಯಲ್ಲಿ ತೊಡಗಿದ್ದು, ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ. ಎಲ್ಲಿಯೂ ಸಹ ಲಂಚದ ಆರೋಪವಿಲ್ಲ, ಆದರೆ ಇಂತಹ ಅಪರೂಪದ ಪಾರದರ್ಶಕದ, ಪ್ರಾಮಾಣಿಕತೆಯ, ನಂಬಿಕೆಯ, ವಿಶ್ವಾಸದ, ದೇಶದ ಬಗ್ಗೆ ಚಿಂತನೆಯ ಆಡಳಿತವನ್ನು ಊಹಿಸಿಕೊಳ್ಳುವುದು ಕಷ್ಟ. ಆದರೆ, ಅದು ಭಾರತೀಯರ ಪಾಲಿಗೆ ಇಂದು ನಿಜವಾಗಿದೆ ಎಂದರು.

ಕಳೆದ 2020ರಲ್ಲಿ ಚಂದ್ರಯಾನ ವಿಫಲವಾದಾಗ ವಿಜ್ಞಾನಿಗಳಿದ್ದ ಕೇಂದ್ರಕ್ಕೆ ಹೋಗಿ ಅವರಿಗೆ ದೈರ್ಯ ಹೇಳಿ, ಹಣವನ್ನು ಮತ್ತೆ ಬಿಡುಗಡೆಗೊಳಿಸಿ ಚಂದ್ರಯಾನ-3 ಕಾರ್ಯ ನೆರವೇರಬೇಕು ಎಂದು ಆತ್ಮವಿಶ್ವಾಸ ತುಂಬಿದ ಪ್ರಧಾನಮಂತ್ರಿ ಎಲ್ಲಾ ವಿಜ್ಞಾನಿಗಳಿಗೆ ಮಾದರಿಯಾಗಿದ್ದಾರೆ. ಕಳೆದ ಆ.23ರಂದು ಯಶಸ್ವಿ ಚಂದ್ರಯಾನ ಆದಾಗ ಇಡೀ ವಿಶ್ವವೇ ಭಾರತದ ಸಾಧನೆಗೆ ಬೆರಗಾಯಿತು. ಇದರ ಕೀರ್ತಿ ನರೇಂದ್ರಮೋದಿಯವರಿಗೆ ಸಲ್ಲುತ್ತದೆ ಎಂದರು.

ವೋಟ್ ಹಾಕಿದ್ರೆ ಅಭಿವೃದ್ದಿ, ಇಲ್ಲಂದ್ರೆ ನೋ ಅಭಿವೃದ್ಧಿ: ಶಾಸಕ ಬಾಲಕೃಷ್ಣ

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಪಾಲಮ್ಮ, ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ, ಕಾರ್ಯದರ್ಶಿ ಕೆ.ಎಂ.ಯತೀಶ್, ಸಂಚಾಲಕರಾದ ಬಾಳೆಮಂಡಿ ರಾಮದಾಸ್, ಜಯಪಾಲಯ್ಯ, ಟಿ.ಮಂಜುನಾಥ, ಲಕ್ಷ್ಮೀ ಶ್ರೀವತ್ಸ, ಮಧುಮತಿ, ಇಂಧುಮತಿ, ಉಮೇಶ್, ಮಹಂತೇಶ್, ಹೊಸಮನೆ ಮನೋಜ್, ಭಾಸ್ಕರ್, ಅನಂತರಾಮ್ ಗೌತಮ್, ಎಂ.ಸತ್ಯನಾರಾಯಣ ಮುಂತಾದವರು ಉಪಸ್ಥಿತರಿದ್ದರು.

click me!