ಸಾಮಾಜಿಕ ಸಮಾನತೆಗೆ ಜಾತಿ, ಜನಗಣತಿ ಅಗತ್ಯ: ಬಿ.ಕೆ.ಹರಿಪ್ರಸಾದ್

By Kannadaprabha NewsFirst Published Oct 30, 2023, 10:23 PM IST
Highlights

ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ದೊರಕಿಸಲು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾನತೆ ಸೌಲಭ್ಯಗಳನ್ನು ಕಲ್ಪಿಸಲು ಜಾತಿ ಮತ್ತು ಜನಗಣತಿ ಸಮೀಕ್ಷೆ ಅತ್ಯಾವಶ್ಯಕ ಎಂದು ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಆಭಿಪ್ರಾಯಪಟ್ಟರು. 

ಕೋಲಾರ (ಅ.30): ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ದೊರಕಿಸಲು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾನತೆ ಸೌಲಭ್ಯಗಳನ್ನು ಕಲ್ಪಿಸಲು ಜಾತಿ ಮತ್ತು ಜನಗಣತಿ ಸಮೀಕ್ಷೆ ಅತ್ಯಾವಶ್ಯಕ ಎಂದು ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಆಭಿಪ್ರಾಯಪಟ್ಟರು. ನಗರದ ಸಾಯಿಧಾಮ ಹೋಟೆಲ್ ಸಭಾಂಗಣದಲ್ಲಿ ಅತಿ ಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ಎಲ್ಲಾ ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ಸಮುದಾಯದ ವ್ಯಕ್ತಿಗೂ ತಲುಪಬೇಕೆಂಬುವುದು ಸಂವಿಧಾನದ ಆಶಯವಾಗಿರುವುದನ್ನು ಸಮರ್ಪವಾಗಿ ಜಾರಿಗೊಳಿಸಲು ಸಮಾಜವನ್ನು ಜಾಗೃತಗೊಳಿಸುವುದು ಅನಿವಾರ್ಯ ಎಂದರು.

100 ಜಾತಿಯಲ್ಲಿ 3 ಜಾತಿಗಷ್ಟೇ ಸೌಲಭ್ಯ: ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದರೂ ಸಹ 2-3 ಜಾತಿಗಳಿಗೆ ಮಾತ್ರ ಸೌಲಭ್ಯಗಳ ಅವಕಾಶಗಳು ಸಿಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಶೂದ್ರವರ್ಗ, ಕಾಯಕವರ್ಗ, ಶ್ರಮಿಕ ವರ್ಗ ನಾನಾ ರೀತಿಯಲ್ಲಿ ಗುರುತಿಸಲಾಗಿದೆ, ಆದರೆ ಕೆಲವೇ ವರ್ಗಗಳಿಗೆ ಮಾತ್ರ ಅವಕಾಶ ದೊರೆತು ಇತರೆ ವರ್ಗಗಳು ವಂಚಿತವಾಗುತ್ತಿವೆ. ಎಲ್ಲ ವರ್ಗಗಳಿಗೂ ಅವಕಾಶಗಳು ಸಿಗದಿದ್ದರೂ ಕನಿಷ್ಠ ಹತ್ತಿರದ ವರ್ಗಗಳಿಗೆ ಅವಕಾಶ ಸಿಗುವಂತಾಗಬೇಕು ಎಂದರು. ಜಿಎಸ್‌ಟಿ ಜಾರಿಯಾದ ನಂತರ ತಳಸಮುದಾಯದವರಿಂದ ಶೇ.64ರಷ್ಟು ತೆರಿಗೆ ಪಾವತಿಯಾಗುತ್ತಿದ್ದರೆ, ಮೇಲ್ವರ್ಗದವರಿಂದ ಶೇ.4 ರಷ್ಟು ಮಾತ್ರ ತೆರಿಗೆ ಪಾವತಿಯಾಗುತ್ತಿದೆ, ಆದರೆ ಸೌಲಭ್ಯಗಳು ಮಾತ್ರ ಮೇಲ್ವರ್ಗದವರಿಗೆ ಸಿಂಹಪಾಲು ಆಗುತ್ತಿರುವುದು ವಂಚನೆಯಾಗುತ್ತಿದೆ, ಇದು ಎಲ್ಲ ಶ್ರಮಿಕರ ಸಂಪನ್ಮೂಲವಾಗಿದೆ ಎಂದು ಹೇಳಿದರು.

ಕಾಫಿನಾಡಲ್ಲಿ ಇಂದಿನಿಂದ ದತ್ತಮಾಲಾ ಅಭಿಯಾನ: ಶ್ರೀರಾಮಸೇನೆ ಕಾರ್ಯಕರ್ತರಿಂದ ಮಾಲಾಧಾರಣೆ

ಎಲ್ಲರಿಗೂ ಸಾಮಾಜಿಕ ನ್ಯಾಯ: ಸಾಮಾಜಿಕ ನ್ಯಾಯ ಎಂಬುವುದು ಯಾವುದೇ ಧರ್ಮಕ್ಕೆ ಸಮುದಾಯಕ್ಕೆ ಸೀಮಿತವಾಗಿಲ್ಲ, ಎಲ್ಲರಿಗೂ ಜಾತಿ, ಜನಗಣತಿಗೆ ಆಧಾರವಾಗಿ ಅವಕಾಶಗಳು ಲಭ್ಯವಾಗಬೇಕು, ಈಗ ಮೇಲ್ವರ್ಗದವರಿಗೂ ಶೇ.10 ಮೀಸಲಾತಿ ನೀಡಲಾಗಿದೆ. ಮೀಸಲಾತಿ ಶೇ.50ರಷ್ಟು ಇರಬೇಕು ಎಂಬ ಕಾನೂನು ಇಲ್ಲ. ತಮಿಳುನಾಡು ಶೇ.69ರಷ್ಟು, ಕೇರಳ ಶೇ.49ರಷ್ಟು, ಕರ್ನಾಟಕ ಶೇ.39ರಷ್ಟು, ಮಧ್ಯ ಪ್ರದೇಶ ಶೇ.17ರಷ್ಟು ಮೀಸಲಾತಿ ನಿಗದಿಪಡಿಸಿದೆ ಎಂದರು. ಆದರೆ ಮೀಸಲಾತಿ ಕಡಿಮೆ ಇರುವ ರಾಜ್ಯಗಳು ರೋಗಗ್ರಸ್ಥಗಳಾಗಿದೆ, ಮೀಸಲಾತಿ ಹೆಚ್ಚಾಗಿರುವಂತ ರಾಜ್ಯಗಳು ಸುಭಿಕ್ಷೆಯಾಗಿವೆ, ಆದರೆ ಮೀಸಲಾತಿ ಕಡಿಮೆ ಇರುವಂತ ರಾಜ್ಯಗಳು ಬಡತನ ಹೆಚ್ಚಾಗಿರುವುದನ್ನು ಕಾಣಬಹುದಾಗಿದೆ, ಹಾಗಾಗಿ ಸಾರ್ವಜನಿಕರು ಮೀಸಲಾತಿ ಹೆಚ್ಚಳದಿಂದ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದರು.

ಕೊಟ್ಟ ಮಾತಿನಂತೆ ನಡೆದುಕೊಂಡಾಗ ಮಾತ್ರ ಜಿಲ್ಲೆ ಅಭಿವೃದ್ಧಿ: ಶಾಸಕ ಶಿವಲಿಂಗೇಗೌಡ

ಜನಜಾಗೃತಿ ಮೂಡಿಸಲು ಪ್ರವಾಸ: ಮುಂದಿನ ಪೀಳಿಗೆಗಳು ಸೌಲಭ್ಯಗಳಿಂದ ವಂಚಿತರಾಗದಂತೆ ಜಾಗೃತಿಗೊಳಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿರುವುದು ನಮ್ಮಗಳ ಜವಾಬ್ದಾರಿ, ಸಂವಿಧಾನದ ಆಶಯಗಳನ್ನು ಪರಿಪೂರ್ಣವಾಗಿ ಜಾರಿಗೆ ತರಲು ಜನ ಜಾಗೃತರಾಗ ಬೇಕಾಗಿರುವುದು ಅತ್ಯವಶ್ಯಕವಾಗಿದೆ, ರಾಜ್ಯದಲ್ಲಿ ಅತಿ ಹಿಂದುಳಿದ ಸಮುದಾಯಗಳ ಪೂರ್ವಭಾವಿ ಸಭೆಗಳ ಜಾಗೃತಿ ಮೂಡಿಸಲು ರಾಜ್ಯ ಪ್ರವಾಸ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸಭೆಯಲ್ಲಿ ಮಾಲೂರು ಮಾಜಿ ಶಾಸಕ ಎ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಓ.ಬಿ.ಸಿ. ವಿಭಾಗದ ಮಾಜಿ ಅಧ್ಯಕ್ಷ ಅಶೋಕ್, ಅಲ್ಪಸಂಖ್ಯಾತ ವಿಭಾಗದ ಮುಖಂಡ ಎಕ್ಬಾಲ್ ಅಹ್ಮದ್, ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಷ್ ಪಾಷ, ನಗರಸಭೆ ಮಾಜಿ ಸದಸ್ಯರಾದ ಸಿ.ಸೋಮಶೇಖರ್, ಲಾಲ್ ಬಹುದ್ದೂರ್ ಶಾಸ್ತ್ರಿ, ಮುಖಂಡರಾದ ರಾಮಮೂರ್ತಿ ನಾಯ್ಡು, ತಾ.ಪಂ ಮಾಜಿ ಸದಸ್ಯ ಯುವರಾಜ್, ಮುನಿರಾಜು, ದಿವಾಕರ್, ಶ್ರೀಕೃಷ್ಟ ಇದ್ದರು.

click me!