ಸರ್ಕಾರ ವಜಾಗೊಳಿಸಿ ರಾಜೀನಾಮೆ ನೀಡಲು ಒತ್ತಾಯ

By Kannadaprabha NewsFirst Published Oct 6, 2019, 12:48 PM IST
Highlights

ರಾಜ್ಯ ಸರ್ಕಾರ ವಿಸ್ತರಣೆ ಮಾಡಿ ಎಲ್ಲಾ ಸಂಸದರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. 

ಚಿತ್ರದುರ್ಗ (ಅ.06):  ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಲು ಅಸಮರ್ಥರಾಗಿರುವ ಸಂಸದರು ಸಾಮೂಹಿಕ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸದ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರನ್ನು ಆಗ್ರಹಿಸಿದರು.

ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಹಿಂದೆಂದೂ ಕಂಡರಿಯದಂತ ಪ್ರವಾಹ ಉಂಟಾಗಿರುವುದರಿಂದ ಸರ್ವಸ್ವವನ್ನು ಕಳೆದುಕೊಂಡ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. 87 ಸಾವು ಸಂಭವಿಸಿದ್ದು, 1.79 ಲಕ್ಷ ಮನೆಗಳು ಸಂಪೂರ್ಣವಾಗಿ ಕುಸಿದಿವೆ. 7.82 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದೆ. 35 ಸಾವಿರ ಕಿಮೀ ರಸ್ತೆ ಹಾಳಾಗಿದೆ. 2828 ಸೇತುವೆಗಳು ಕೊಚ್ಚಿ ಹೋಗಿವೆ. ಲೆಕ್ಕವಿಲ್ಲದಷ್ಟುಜಾನುವಾರುಗಳು ಕಾಣೆಯಾಗಿವೆ. 58 ಸಾವಿರ ವಿದ್ಯುತ್‌ ಕಂಬಳು ಮುರಿದು ಬಿದ್ದಿರುವುದರಿಂದ ಗ್ರಾಮಗಳು ಕತ್ತಲೆಯ ಕೂಪವಾಗಿವೆ. ಶಾಲೆ, ಆಸ್ಪತ್ರೆಗಳು ಸೇರಿದಂತೆ ಅನೇಕ ಸಂಪನ್ಮೂಲಗಳು ಪ್ರವಾಹಕ್ಕೆ ಬಲಿಯಾಗಿವೆ. ಇಷ್ಟೆಲ್ಲಾ ಅನಾಹುತವಾಗಿದ್ದರೂ ರಾಜ್ಯದ ಸಂಸದರು ನಮಗೆ ಸಂಬಂಧವಿಲ್ಲವೇನೋ ಎನ್ನುವಂತೆ ವರ್ತಿಸುತ್ತಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನೆರೆ ಸಂತ್ರಸ್ತರ ಬಳಿ ತೆರಳಿ ಪರಿಸ್ಥಿತಿ ಕಣ್ಣಾರೆ ಕಂಡಿದ್ದಾರೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ಬಂದು ಹೋಗಿದೆಯಾದರೂ ಇನ್ನು ನೆರೆ ಸಂತ್ರಸ್ತರಿಗೆ ಪರಿಹಾರ ಬರದಿರುವುದು ದುರಂತ. ಆದ್ದರಿಂದ ರಾಜ್ಯದ ಸಂಸದರು ರಾಜೀನಾಮೆ ನೀಡಿ ಹೊರ ಬರಲಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಎಸ್‌.ವೆಂಕಟೇಶ್‌ ಐಹೊಳೆ, ಜಿಲ್ಲಾ ಸಂಯೋಜಕರುಗಳಾದ ಬಿ.ಮಹಂತೇಶ್‌ ಕೂನಬೇವು, ಕೆ.ಎನ್‌.ದೊಡ್ಡೆಟ್ಟಪ್ಪ, ರಾಜ್ಯ ಕಾರ್ಯದರ್ಶಿ ಎನ್‌.ಪ್ರಕಾಶ್‌, ಉಪಾಧ್ಯಕ್ಷ ಕೆ.ತಿಮ್ಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಗಿರೀಶ್‌, ಡಿ.ವಿ.ಎಸ್‌.ಫಯಾಜ್‌, ಬಿ.ಟಿ.ಶಿವಕುಮಾರ್‌, ಹೆಚ್‌.ಇ.ರಾಜಣ್ಣ, ಎನ್‌.ಶಿವಕುಮಾರ್‌, ಟಿ.ರುದ್ರಮುನಿ, ಜಗದೀಶ್‌, ಡಿ.ರಂಗಸ್ವಾಮಿ, ಶಂಕರಪ್ಪ ಹೆಗ್ಗೆರೆ, ಎಚ್‌.ಆರ್‌. ಶ್ರಿನಿವಾಸ್‌ ಪಾಲ್ಗೊಂಡಿದ್ದರು.

click me!