Black magic: ಬೆಟ್ಟತ್ತೂರು ಗ್ರಾಮದ ದಟ್ಟಾರಣ್ಯದ ಮಧ್ಯೆ ವಾಮಾಚಾರ ಕುರುಹು ಪತ್ತೆ

By Kannadaprabha NewsFirst Published Jan 19, 2023, 1:07 PM IST
Highlights

ಮಡಿಕೇರಿ ತಾಲೂಕಿನ ಮದೆನಾಡು ವ್ಯಾಪ್ತಿಗೆ ಒಳಪಡುವ ಬೆಟ್ಟತ್ತೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ವಾಮಾಚಾರ ನಡೆದಿದ್ದು, ಆಗಂತಕರು ರಾತ್ರಿ ವೇಳೆ ಪೂಜೆ ಮಾಡಿ ಬಳಿಕ ಮೂರು ಕೋಳಿಗಳನ್ನು ಬಲಿಕೊಟ್ಟಿರುವ ಘಟನೆ ನಡೆದಿದೆ.

ಮೋಹನ್‌ರಾಜ್‌

ಮಡಿಕೇರಿ (ಜ.19) : ಮಡಿಕೇರಿ ತಾಲೂಕಿನ ಮದೆನಾಡು ವ್ಯಾಪ್ತಿಗೆ ಒಳಪಡುವ ಬೆಟ್ಟತ್ತೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ವಾಮಾಚಾರ ನಡೆದಿದ್ದು, ಆಗಂತಕರು ರಾತ್ರಿ ವೇಳೆ ಪೂಜೆ ಮಾಡಿ ಬಳಿಕ ಮೂರು ಕೋಳಿಗಳನ್ನು ಬಲಿಕೊಟ್ಟಿರುವ ಘಟನೆ ನಡೆದಿದೆ.

ಮೂರು ವಿಭಿನ್ನ ದಿಕ್ಕುಗಳಲ್ಲಿ ಪೂಜೆ ಮಾಡಿರುವ ಕಿಡಿಗೇಡಿಗಳು ಕೋಳಿ, ಪಾಯಸ, ತೆಂಗಿನಕಾಯಿ, ಮೊಸರು, ಮದ್ಯ, ಅವಲಕ್ಕಿ ಹಾಗು ಹಿಟ್ಟಿನಲ್ಲಿ ಮಾಡಿರುವ ಉಂಡೆಯಂತ ಪದಾರ್ಥವನ್ನು ಪೂಜೆಗೆ ಬಳಸಲಾಗಿದ್ದು, ಸ್ಥಳೀಯರು ಈ ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲೂ ನಡೆಯುತ್ತೆ ಬ್ಲ್ಯಾಕ್ ಮ್ಯಾಜಿಕ್

ಘಟನೆ ನಡೆದದ್ದು ಎಲ್ಲಿ?

ಹಚ್ಚಹಸಿರಿನಿಂದ ಕೂಡಿರುವ ಬೆಟ್ಟತ್ತೂರಿನ ಬೆಟ್ಟದ ತುತ್ತತುದಿಯನ್ನು ವಾಮಾಚಾರಕ್ಕೆ ಆಯ್ಕೆ ಮಾಡಿಕೊಂಡಿರುವ ಅಪರಿಚಿತರ ತಂಡ ಭಾನುವಾರ ರಾತ್ರಿ ವಾಮಾಚಾರ ಮಾಡಿದೆ. ವಾಮಾಚಾರ ಮಾಡಲ್ಪಟ ಸ್ಥಳ ನಿರ್ಜನವಾಗಿದ್ದು, ದಿವಂಗತ ಕೂಪದಿರ ಮುತ್ತು ಎಂಬವರ ಸ್ವಾಧೀನದಲ್ಲಿರುವ ಕಾಡು ಅದಾಗಿದೆ. ಬೆಟ್ಟತ್ತೂರು ಮುಖ್ಯ ಜುಂಕ್ಷನ್‌ ಬಳಿಯಿಂದ 500 ಮೀಟರ್‌ ಕಾಡಿನ ಮೇಲ್ಭಾಗದಲ್ಲಿ ವಾಮಾಚಾರ ನಡೆಸಲಾಗಿದೆ. ವಾಮಾಚಾರ ಮಾಡಿರುವವರು ಈ ಜಾಗದ ಕುರಿತು ತಿಳಿದಿರುವವರೇ ಮಾಡಿರಬೇಕು ವಿನಃ ಹೊಸಬರಿಗೆ ಇಲ್ಲಿನ ಕಾಡಿನ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ವಾಮಾಚಾರ ನಡೆದ ಪಕ್ಕದ ಸ್ಥಳದ ಮಾಲಕ ಹೊಸಮನೆ ಪ್ರವೀಣ್‌ ಅಭಿಪ್ರಾಯಪಟ್ಟಿದ್ದಾರೆ.

ತೋಟಕ್ಕೆ ತೆರಳಿದಾಗ ಬೆಳಕಿಗೆ ಬಂದ ಘಟನೆ: ವಾಮಾಚಾರ ನಡೆದ ಸ್ಥಳದ ಮೂಲಕ ತಮ್ಮ ಸ್ಥಳಕ್ಕೆ ತೆರಳುತ್ತಿದ್ದ ಹೊಸಮನೆ ಪ್ರವೀಣ್‌ ಹಾಗು ಪತ್ನಿ ಕವಿತಾ ಮೊದಲು ಮದ್ಯದ ಬಾಟಲಿ ಹಾಗು ಕೆಲವು ಬಾಳೆಲೆಯನ್ನು ಕಂಡಿದ್ದಾರೆ. ಯಾರೋ ಯುವಕರು ಮೋಜುಮಸ್ತಿ ಮಾಡಿರಬೇಕೆಂದುಕೊಂಡ ದಂಪತಿ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ತೋಟಕ್ಕೆ ತೆರಳುವ ವೇಳೆ ಮತ್ತೊಂದು ದಿಕ್ಕಿನಲ್ಲಿ ಕೋಳಿಯೊಂದರ ತಲೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಸೂಕ್ಷ ್ಮವಾಗಿ ಗಮನಿಸಿದಾಗ ಅಲ್ಲೇ ಮೂರು ಕಡೆಗಳಲ್ಲಿ ಬಾಳೆಲೆಯಲ್ಲಿ ಎಡೆಯಿಟ್ಟು ಪೂಜೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪ್ರವೀಣ್‌ ಮಾಹಿತಿ ನೀಡಿದ್ದಾರೆ

ಮೂರು ದಿಕ್ಕಿಗೆ ಮೂರು ಬಲಿ: ಭಾನುವಾರ ರಾತ್ರಿ ಪೂಜೆ ಮಾಡಿರಬಹುದೆಂದು ಸ್ಥಳೀಯರು ಅಂದಾಜಿಸಿದ್ದಾರೆ. ಮೂರು ಕಡೆಗಳನ್ನು ಗೊತ್ತುಮಾಡಿ ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ ಎಲ್ಲಾ ಮೂರು ಬಾಳಲೆಯಲ್ಲಿ ಮಣ್ಣಿನ ಸಣ್ಣ ಸಣ್ಣ ಮೂರು ಮಡಿಕೆಗಳನ್ನು ಇಡಲಾಗಿದೆ. ಜತೆಗೆ ಅಕ್ಕಿಯಿಂದ ಮಾಡಿರುವ ಉಂಡೆಯಾಕಾರದ ಹಳದಿ ಬಣ್ಣದ ಕಡುಬು, ಅವಲಕ್ಕಿ, ಲೋಟದಲ್ಲಿ ಪಾಯಸ, ಮದ್ಯವನ್ನು ಇಡಲಾಗಿದೆ. ಪೂಜೆ ಮಾಡಲಾಗಿರುವ ಸ್ಥಳದ ಎಲ್ಲಾ ವಿರುದ್ಧ ದಿಕ್ಕಿನಲ್ಲಿ ಕೋಳಿ ತಲೆ ಒಂದು ಕಡೆ ಹಾಗೂ ಅದರ ದೇಹವನ್ನು ಪೂಜಾಸ್ಥಳದ ಹಿಂಬದಿಗೆ ಎಸೆಯಲಾಗಿದೆ. ವಾಮಾಚಾರದ ಪೂಜೆಗೆ ಒಟ್ಟು ಮೂರು ಹುಂಜ ಕೋಳಿಗಳನ್ನು ಬಲಿ ನೀಡಲಾಗಿದೆ.

Black magic: ಬಂಟ್ವಾಳ ಪುರಸಭೆ ನಿರ್ಮಿಸುತ್ತಿರುವ 'ಪಿಂಕ್ ಟಾಯ್ಲೆಟ್' ನಲ್ಲಿ ವಾಮಾಚಾರ!

ನಮ್ಮ ಜಾಗದ ಬಳಿಯೇ ವಾಮಾಚಾರ ಮಾಡಲಾಗಿದೆ. ಅಪರಿಚಿತರಿಗೆ ಈ ಬೆಟ್ಟದ ಕುರಿತು ತಿಳಿದಿರಲು ಸಾಧ್ಯವಿಲ್ಲ, ಯಾರೋ ತಿಳಿದಿರುವವರು ಈ ವಾಮಾಚಾರವನ್ನು ಮಾಡಿರುವ ಶಂಕೆಯಿದೆ. ಈ ನಿರ್ಜನ ಕಾಡಿನಲ್ಲಿ ಇಂದು ಕೋಳಿ ಬಲಿ ನೀಡಿದವರು ಇನ್ನೊಂದು ದಿನ ನರಬಲಿ ಕೊಡಲಾರರು ಎಂದು ಹೇಗೆ ಹೇಳುವುದು. ಇಲ್ಲೇ ಶಾಲೆಗೇ ತೆರಳುವ ಸಣ್ಣ ಮಕ್ಕಳು ಇದ್ದಾರೆ, ಹೇಗೆ ಮಕ್ಕಳನ್ನು ಧೈರ್ಯವಾಗಿ ಶಾಲೆ ಕಳುಹಿಸುವುದು, ಈ ಬಗ್ಗೆ ಸೂಕ್ತ ತನಿಖೆಯ ಅವಶ್ಯಕತೆಯಿದೆ.

- ಹೊಸಮನೆ ಪ್ರವೀಣ್‌, ವಾಮಾಚಾರ ನಡೆದ ಸ್ಥಳವನ್ನು ನೋಡಿದ ಸ್ಥಳೀಯ ನಿವಾಸಿ.

click me!