ರಸ್ತೆ ಅಭಿವೃದ್ಧಿ ಮೂಲಕ ಭಾರತ ಜೋಡಿಸುವ ಕೆಲಸ: ನಳಿನ್‌ ಕುಮಾರ್‌ ಕಟೀಲ್‌

By Kannadaprabha NewsFirst Published Nov 4, 2022, 11:15 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದು, ಕಳೆದ 8 ವರ್ಷಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆಗಳು ನಡೆದಿವೆ. 

ಪುತ್ತೂರು (ನ.04): ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದು, ಕಳೆದ 8 ವರ್ಷಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆಗಳು ನಡೆದಿವೆ. ಎಲ್ಲಾ ರಾಷ್ಟ್ರೀಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಭಾರತವನ್ನು ಜೋಡಿಸುವ ಕೆಲಸವಾಗುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ- 275 ರಲ್ಲಿ 8 ಕಿರು ಸೇತುವೆಗಳ ಪುನರ್‌ ನಿರ್ಮಾಣ ಕಾಮಗಾರಿಗೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. 

ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತವನ್ನು ಜೋಡಿಸಿದ್ದು ಮಾಜಿ ಪ್ರಧಾನಿ ವಾಜಪೇಯಿ ಅವರು. ಈಗ ಕೆಲವರು ಭಾರತವನ್ನು ಜೋಡಿಸುವುದಾಗಿ ಹೇಳುತ್ತಾ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದೇಶಾದ್ಯಂತ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ರಸ್ತೆಗಳ ಅಭಿವೃದ್ಧಿ ಮಾಡುವ ಮೂಲಕ ಮಾಜಿ ಪ್ರಧಾನಿ ವಾಜಪೇಯಿ ಭಾರತವನ್ನು ಜೋಡಿಸುವ ಕೆಲಸವನ್ನು ಮಾಡಿದ್ದರು ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲ್ಲುವ ಅವಕಾಶ: ನಳಿನ್‌ ಕುಮಾರ್‌ ಕಟೀಲ್‌

ಮೋದಿ ಶಕೆ: ದೇಶದಲ್ಲಿ ದಿನವೊಂದಕ್ಕೆ 27 ಕಿ.ಮೀ. ರಸ್ತೆಗಳು ಅಭಿವೃದ್ಧಿಯಾಗುತ್ತಿದೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಮೋದಿ ಶಕೆ ಆರಂಭವಾಗಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಕ್ರಿಸ್ತ ಶಕ - ಕ್ರಿಸ್ತಪೂರ್ವದ ಬದಲು ಭಾರತದಲ್ಲಿ ಮೋದಿ ಶಕೆ- ಮೋದಿ ಪೂರ್ವ ಶಕೆ ಎಂಬ ಇತಿಹಾಸ ನಿರ್ಮಾಣವಾಗಲಿದೆ ಎಂದು ಹೇಳಿದರು.

ಸಂಪಾಜೆ-ಮಾಣಿಗೆ ಚತುಷ್ಪಥ: ಮಡಿಕೇರಿಯಿಂದ ಸಂಪಾಜೆ ತನಕ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಪರಿವರ್ತನೆಯಾಗಿದ್ದು ಮುಂದಿನ ಎರಡು ವರ್ಷದಲ್ಲಿ ಸಂಪಾಜೆಯಿಂದ ಮಾಣಿ ತನಕ ಚತುಷ್ಪಥ ರಸ್ತೆಯಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು, ಒಳನಾಡು ಮೀನುಗಾರಿಕೆ ಹಾಗೂ ಬಂದರು ಸಚಿವ ಎಸ್‌. ಅಂಗಾರ ಮಾತನಾಡಿದರು. 

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ತಾ.ಪಂ. ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷ ರತನ್‌ ರೈ ಕುಂಬ್ರ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿತೀರ್ಥರಾಮ, ಮೊಗೆರೋಡಿ ಕನ್‌ಸ್ಟ್ರಕ್ಷನ್‌ ಮಾಲಕ ಸುಧಾಕರ ಶೆಟ್ಟಿಮತ್ತಿತರರು ಉಪಸ್ಥಿತರಿದ್ದರು. ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸ್ವಾಗತಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್‌ಕುಮಾರ್‌ ಶಾಂತಿವನ ವಂದಿಸಿದರು.

ಸೋನಿಯಾ ಕಾಲಿಗೆ ಬಿದ್ದು ಸಿಎಂ ಆದ ಸಿದ್ದು: ನಳಿನ್‌ ಕುಮಾರ್‌ ಕಟೀಲ್‌

ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿನ ಮುಕ್ರಂಪಾಡಿ, ಸಂಪ್ಯ, ಕುಂಬ್ರ, ಶೇಕಮಲೆ, ಕೌಡಿಚ್ಚಾರ್‌, ಸಂಟ್ಯಾರ್‌, ಪೈಚಾರ್‌ ಮತ್ತು ಕಡಪಾಲ ಈ 8 ಸೇತುವೆಗೆ ಒಟ್ಟು 51.96 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಸೇತುವೆ ನಿರ್ಮಾಣಕ್ಕೆ ಒಟ್ಟು 2.8 ಕಿ.ಮೀ. ಭೂ ಸ್ವಾಧೀನ ಪ್ರಕ್ರಿಯೆಯೂ ನಡೆದಿದೆ.
-ಸಂಜೀವ ಮಠಂದೂರು, ಶಾಸಕರು

click me!