ಕಾಂಗ್ರೆಸ್‌ ಮುಳುಗುವ ಹಡಗು, ಬಿಜೆಪಿ ಬೆಳಗುವ ನಕ್ಷತ್ರ: ಕಟೀಲ್

By Kannadaprabha NewsFirst Published Feb 10, 2020, 9:53 AM IST
Highlights

ರಾಹುಲ್‌ ಗಾಂಧಿಗೆ ದೇಶ ಮುನ್ನಡೆಸುವ ಛಾತಿ ಇಲ್ಲ|ನೂತನ ಅಧ್ಯಕ್ಷರ ಪದಗ್ರಹನ, ಸಿಎಎ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ನಳಿನ್‌ ಕಟೀಲ್‌ ವ್ಯಂಗ್ಯ| ಚಿತ್ರದುರ್ಗ ಜಿಲ್ಲಯ ಹೊಸದುರ್ಗದಲ್ಲಿ ಪೌರತ್ವ ಕಾಯಿದೆ ಕುರಿತು ಜನಜಾಗೃತಿ ಕಾರ್ಯಕ್ರಮ ಉದ್ಘಾಟನೆ|

ಹೊಸದುರ್ಗ(ಫೆ.10): ಅಧಿಕಾರದ ಬಾವುಟವನ್ನು ಹೆಗಲ ಮೇಲೆ ಹಾರಿಸಬೇಕೇ ಹೊರತು ತಲೆ ಮೇಲೆ ಹಾರಿಸಿದರೆ ಅದು ಅಹಂಕಾರವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದ್ದಾರೆ. 

ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹೊಸದುರ್ಗ ಮಂಡಲದ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಪೌರತ್ವ ಕಾಯಿದೆ ಕುರಿತು ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಕ್ಷದ ಹಿರಿಯರು ಆದರ್ಶ ಮತ್ತು ನಡುವಳಿಕೆಯಿಂದ ಬಿಜೆಪಿಯನ್ನು ಕಟ್ಟಿಬೆಳಸಿದ್ದಾರೆ. ಗೂಳಿಹಟ್ಟಿಜಗದೀಶ್‌ ಅವರಿಗೆ ಪಕ್ಷವನ್ನು ಬೆಳಸುವ ಮತ್ತು ಸಂಘಟಿಸುವ ಅವಕಾಶ ನೀಡಿದ್ದೇವೆ. ಅಧ್ಯಕ್ಷ ಸ್ಥಾನ ಇರೋದು ಅಧಿಕಾರ ಚಲಾಯಿಸೋದಕ್ಕಲ್ಲ, ಇದೊಂದು ಜವಾಬ್ದಾರಿ. ಇದನ್ನು ಸಮರ್ಥವಾಗಿ ನಿಭಾಯಿಸುತ್ತಾರೆಂಬ ವಿಶ್ವಾಸವಿದೆ. ಪಕ್ಷಕ್ಕೆ ಯಾವುದೇ ಕಳಂಕ ತರದ ರೀತಿಯಲ್ಲಿ ಕಾರ್ಯಕರ್ತರ ಬೆಂಬಲ ಪಡೆದು ಕೆಲಸ ಮಾಡಿ ಎಂದು ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಹುಲ್‌ ಗಾಂಧಿಗೆ ದೇಶ ಮುನ್ನಡೆಸುವ ಛಾತಿ ಇಲ್ಲ. ಕಾಂಗ್ರೆಸ್‌ ಮುಳುಗುವ ಹಡಗು, ಬಿಜೆಪಿ ಬೆಳಗುವ ನಕ್ಷತ್ರ ಇದ್ದ ಹಾಗೆ. ಹಾಗಾಗಿಯೇ ಜನರು ಬಿಎಸ್‌ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್‌ ನಡುವಿನ ತಿಕ್ಕಾಟದಿಂದ ಕಳೆದ 6 ತಿಂಗಳಿನಿಂದ ಕಾಂಗ್ರೆಸ್‌ ಹೈಕಮಾಂಡ್‌ಗೆ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ನೇಮಕ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ತೊರೆಯಲಿದ್ದಾರೆ ಎಂದು ಭವಿಷ್ಯ ನುಡಿದರು.

ಜನರ ಕಣ್ಣಿರನ್ನು ವರೆಸುವ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದರೆ ಜನರ ಬಳಿ ಕಣ್ಣೀರು ಹಾಕುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಾರೆ ನಮಗೆ ಕಣ್ಣಿರು ಹಾಕುವ ಮುಖ್ಯಮಂತ್ರಿ ಬೇಡ ಜನರ ಕಣ್ಣಿರು ವರೆಸುವ ಮುಖ್ಯಮಂತ್ರಿ ಬೇಕು. ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮುಂದಿನ 3 ವರ್ಷ ಸುಭದ್ರವಾದ ಜನಪರವಾದ ಆಡಳಿತ ನೀಡಲಿದೆ ಎಂದರು.

ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಸ್‌ ಲಿಂಗಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಕಳೆದ 10 ವರ್ಷದ ಕಾಂಗ್ರೆಸ್‌ ಆಡಳಿತದಲ್ಲಿ 102 ಚಳುವಳಿಗಳನ್ನು ಮಾಡಿ ಪಕ್ಷವನ್ನು ಬಲ ಪಡಿಸಿದ್ದೇವೆ ಇಲ್ಲಿ ಗೂಳೀಹಟ್ಟಿಶೇಖರ್‌ ಹಾಗೂ ನಾನು ಇಬ್ಬರೂ ಚುನಾವಣೆಗೆ ಸ್ಪರ್ಧಿಸುತ್ತಿದ್ದರಿಂದ ಮತ ವಿಭಜನೆಯಾಗಿ ಕಾಂಗ್ರೇಸ್‌ ಅಭ್ಯರ್ಥಿ ಗೆಲ್ಲುತ್ತಿದ್ದರು. ಆದರೆ ಈ ಬಾರಿ ಇಬ್ಬರೂ ಒಂದಾಗಿ ಚುನಾವಣೆ ಮಾಡಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯನ್ನು ತಾಲೂಕಿನಲ್ಲಿ ಗೆಲ್ಲಿಸಿದ್ದೇವೆ ಎಂದು ಹೇಳಿದರು.

ನಿಕಟಪೂರ್ವ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಡಿ.ಟಿ.ವಟ್ಟಿಲಕ್ಷ್ಮಣಪ್ಪ ಮಾತನಾಡಿ, ಕಾರ್ಯಕರ್ತರ, ಮುಖಂಡರ ಸಲಹೆ, ಮಾರ್ಗದರ್ಶನ ಪಡೆದು ಕೆಲಸ ಮಾಡಿದ್ದೇನೆ. ತಾಲೂಕಿನಲ್ಲಿ 240 ಬೂತ್‌ಗಳನ್ನು ರಚಿಸಿ ಪಕ್ಷ ಸಂಘಟಿಸಲಾಗಿದೆ. ಪಕ್ಷ ವಹಿಸಿದ ಎಲ್ಲಾ ಜವಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಸ್ಥಳೀಯ ಸಮಸ್ಯೆಗಳ ವಿರುದ್ದ ಹೋರಾಟ ನಡೆಸಿ ಜನ ಜಾಗೃತಿ ಮೂಡಿಸುವಲ್ಲಿ ಎಲ್ಲರ ಶ್ರಮವಿದೆ ಎಂದು ಹೇಳಿದರು.

ನೂತನ ತಾಲೂಕು ಘಟಕದ ಅಧ್ಯಕ್ಷ ಗೂಳಿಹಟ್ಟಿಜಗದೀಶ್‌, ಶಾಸಕ ಗೂಳಿಹಟ್ಟಿಡಿ.ಶೇಖರ್‌, ಪ್ರಾಂತೀಯ ಸಂಚಾಲಕ ಸುರೇಶ್‌, ಆರ್‌.ಡಿ. ಸೀತಾರಾಂ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ್‌, ಜಿಲ್ಲಾ ಕಾರ್ಯದರ್ಶಿ ರಾಜೇಶ್‌ ಬುರುಡೇಕಟ್ಟೆ, ಜಿಪಂ ಮಾಜಿ ಸದಸ್ಯ ದೊಡ್ಡ ಘಟ್ಟಲಕ್ಷ್ಮಣಪ್ಪ ಮತ್ತಿತರಿದ್ದರು.

click me!