
ಕಲಬುರಗಿ(ಜ.30): ಕುಂಭಮೇಳದ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರ ವ್ಯಂಗ್ಯ ಭರಿತ ಹೇಳಿಕೆ ಖರ್ಗೆಯವರ ಮನಸ್ಥಿತಿ ತೋರಿಸುತ್ತದೆ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಟೀಕಿಸಿದರು.
ಸೇಡಂ ಸಮೀಪ ಇಂದಿನಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆಯವರ ಹೇಳಿಕೆ ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ ಎಂದರು.
ಮುಸ್ಲಿಮರು ಮೆಕ್ಕಾ ಯಾತ್ರ ಮಾಡುತ್ತಾರೆ. ಕ್ರಿಶ್ಚಿಯನ್ನರು ಇಟಲಿಗೆ ಹೋಗಿ ಪೋಪ್ ಭೇಟಿ ಮಾಡಿ ದರ್ಶನ ಪಡೆದು ಬರುತ್ತಾರೆ. ಅದನ್ನು ಖರ್ಗೆಯವರು ಏಕೆ ಪ್ರಶ್ನಿಸುವುದಿಲ್ಲ ಎಂದು ಮರುಪ್ರಶ್ನೆ ಹಾಕಿದರು. ಒಂದುವೇಳೆ ಹೀಗೇನಾದರೂ ಪ್ರಶ್ನೆ ಮಾಡಿದರೆ ಖರ್ಗೆ ಅಸ್ತಿತ್ವವೇ ಉಳಿಯುವುದಿಲ್ಲ ಎಂದು ನುಡಿದರು.
ಆಡಳಿತದ ಮೇಲೆ ಹಿಡಿತ ಕಳೆದುಕೊಂಡ ಸಿಎಂ: ಜಗದೀಶ ಶೆಟ್ಟರ್
ಖರ್ಗೆ ಸೇರಿದಂತೆ ಕಾಂಗ್ರೆಸ್ಸಿವರು ಮುಸ್ಲಿಂ ತುಷ್ಟೀಕರಣ ಮಾಡುತ್ತಾರೆ ಎಂದು ಶೆಟ್ಟರ್ ನೇರ ಆರೋಪ ಮಾಡಿದರು. ರಾಜ್ಯದ ಭಾರತೀಯ ಜನತಾ ಪಕ್ಷದಲ್ಲಿ ಮೂಡಿರುವ ಗೊಂದಲಕ್ಕೆ ಪಕ್ಷದ ವರಿಷ್ಠರು ಆದಷ್ಟು ಬೇಗ ತೆರೆ ಎಳೆಯಲಿದ್ದಾರೆ. ರಾಜ್ಯದ ಬೆಳವಣಿಗೆ ಬಗ್ಗೆ ವರಿಷ್ಠರ ಗಮನಕ್ಕಿದೆ ಎಂದರು.
ಪ್ರಿಯಾಂಕ್ ಖರ್ಗೆ ದುರಂಹಕಾರ ಮಾತಿನಲ್ಲೇ ಗೊತ್ತಾಗುತ್ತದೆ: ಜಗದೀಶ್ ಶೆಟ್ಟರ್
ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧೆಗೆ ಸಿದ್ದ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಕೆಲವೊಬ್ಬರ ವೈಯಕ್ತಿಕ ಹೇಳಿಕೆಗಳ ಕುರಿತು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಡಾ ಪ್ರಕರಣ ಪ್ರಸ್ತಾಪಿಸಿದ ಅವರು, ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂಬುದು ನಮ್ಮ ಒತ್ತಾಯ ಎಂದ ಅವರು, ಈ ನಿಟ್ಟಿನಲ್ಲಿ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಹೀಗಾಗಿ ಏನು ತೀರ್ಪು ಬರುತ್ತದೋ ಎಂಬುದನ್ನು ನೋಡೋಣ ಎಂದರು.
ಕಾಂಗ್ರೆಸ್ ಪಕ್ಷದವರಿಗೆ ಮೊದಲಿನಿಂದಲೂ ಸಿಬಿಐ ಅಂದರೆ ಹೆದರಿಕೆ ಎಂದು ಲೇವಡಿ ಮಾಡಿದ ಅವರು, ಹಗರಣ ಹೊರಗೆ ಬರುತ್ತದೆ ಎಂಬ ಹೆದರಿಕೆ ಅವರನ್ನು ಕಾಡುತ್ತಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಹಗರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಅವರಿಗೆ ಭೀತಿ ಕಾಡುತ್ತಿದೆ ಎಂದರು.