ರಾಜಕೀಯವಾಗಿ ಕೊರೋನಾ ಬಳಸಲು ಕಾಂಗ್ರೆಸ್‌ ಹುನ್ನಾರ: ವಿರೂಪಾಕ್ಷಪ್ಪ ಬಳ್ಳಾರಿ

By Kannadaprabha NewsFirst Published May 31, 2021, 3:29 PM IST
Highlights

* ಸೋಂಕಿತರಿಗೆ ಪೌಷ್ಟಿಕಾಂಶಯುಕ್ತ ಆಹಾರ ಅತ್ಯವಶ್ಯ
* ಸೋಂಕಿತರಿಗೆ ಕಳಪೆ ಆಹಾರದಲ್ಲಿ ನೀಡಿದ್ರೆ ಅಧಿಕಾರಿಗಳೇ ಹೊಣೆ
* ಜನರಲ್ಲಿ ಭಯದ ವಾತಾವರಣ ಸೃಷ್ಟಿಮಾಡಲು ಹೊರಟಿರುವ ಕಾಂಗ್ರೆಸ್ಸಿಗರು
 

ಬ್ಯಾಡಗಿ(ಮೇ.31):  ಕೋವಿಡ್‌ ವೈರಸ್‌ನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಹುನ್ನಾರ ನಡೆಸುತ್ತಿವೆ. ಮೊದಲು ವ್ಯಾಕ್ಸಿನ್‌ ಬಗ್ಗೆ ಅಪಸ್ವರ ಎತ್ತಿದ ಕೆಲ ನಾಯಕರು ಬಳಿಕ ಜನರನ್ನು ಅದರಿಂದ ದೂರವಿರುವಂತೆ ಮಾಡಿದರು. ಆದರೆ ತಿಂಗಳಲ್ಲೇ ಸೋಂಕಿತರ ಸಂಖ್ಯೆಯನ್ನು ಕಡಿಮೆಗೊಳಿಸುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆರೋಪ ಮಾಡುತ್ತಿರುವವರಿಗೆ ಉತ್ತರಿಸಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದ್ದಾರೆ.  

ಪಟ್ಟಣದ ಹೊರವಲಯದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಗಣದಲ್ಲಿ ಆರಂಭಿಸಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿ ಬಳಿಕ ಮಾತನಾಡಿ, ಸೋಂಕಿತರು ಸೇರಿದಂತೆ ರಾಜ್ಯದ ಜನರ ಆರೋಗ್ಯ ಸುಧಾರಣೆ ಬಗ್ಗೆ ಮಾತನಾಡುವುದನ್ನು ಕೈಬಿಟ್ಟ ಕಾಂಗ್ರೆಸ್‌ ಮುಖಂಡರು, ಆಕ್ಸಿಜನ್‌, ಬೆಡ್‌ ವೆಂಟಿಲೇಟರ್‌ ಕೊರತೆ ಎತ್ತಿ ತೋರಿಸುವ ಮೂಲಕ ಋುಣಾತ್ಮಕ ವಿಚಾರಗಳನ್ನು ಜನರ ತಲೆಯಲ್ಲಿ ತುಂಬಿದ್ದಲ್ಲದೇ, ಭಯದ ವಾತಾವರಣವನ್ನು ಸೃಷ್ಟಿಮಾಡಲು ಹೊರಟಿದ್ದಾರೆ. ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ ಹತಾಶೆಯಿಂದ ಇಂತಹ ಆರೋಪದಲ್ಲಿ ತೊಡಗಿದ್ದು, ಅವರ ಉದ್ದೇಶ ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ ಎಂದರು.

ಲಾಕ್‌ಡೌನ್‌ ಎಫೆಕ್ಟ್: ನೌಕರಿಗೆ ಗುಡ್‌ ಬೈ ಹೇಳಿ ಕೃಷಿಗೆ ಜೈ ಎಂದ ಯುವಕರು..!

ಗುಣಮಟ್ಟದ ಆಹಾರ ನೀಡಿ:

ಕೋವಿಡ್‌ ಸೋಂಕಿತರಿಗಾಗಿ ಸಿದ್ಧಪಡಿಸಲಾಗುತ್ತಿದ್ದ ಆಹಾರದ ಗುಣಮಟ್ಟ ರಿಶೀಲಿಸಿದ ಅವರು, ಸೋಂಕಿತರಿಗೆ ಪೌಷ್ಟಿಕಾಂಶಯುಕ್ತ ಆಹಾರ ಅತ್ಯವಶ್ಯ. ಈ ನಿಟ್ಟಿನಲ್ಲಿ ಕೋವಿಡ್‌ ಸೋಂಕಿತರಿಗೆ ನೀಡುವ ಆಹಾರದಲ್ಲಿ ಕಳಪೆ ಎಂದು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಘಟಕದ ಪ್ರಧಾನ ಕಾರ‍್ಯದರ್ಶಿ ಶಿವಯೋಗಿ ಶಿರೂರ, ಪುರಸಭೆ ಸದಸ್ಯ ಸುಭಾಸ ಮಾಳಗಿ ವಿಷ್ಣುಕಾಂತ ಬೆನ್ನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

click me!