ಸಚಿವ ಆರ್‌.ಅಶೋಕ್‌ ಹೆಗಲಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ?

By Kannadaprabha NewsFirst Published Aug 23, 2019, 9:49 AM IST
Highlights

ಒಕ್ಕಲಿಗರ ಕೋಟೆ ಭೇದಿಸಲು ಬಿಜೆಪಿಯಿಂದ ಒಕ್ಕಲಿಗ ಅಸ್ತ್ರ ಪ್ರಯೋಗ ಮಾಡುವುದು ಮೊದಲ ತಂತ್ರ. ಅಲ್ಲದೇ ವಿಧಾನ ಸಭೆಯಲ್ಲಿ ಬಿಜೆಪಿ ಖಾತೆ ತೆರೆಯದ ಮಂಡ್ಯದಲ್ಲಿ ಕಮಲ ಅರಳಿಸುವ ಗೇಮ್ ಪ್ಲಾನ್‌ ಬಿಜೆಪಿ ಬತ್ತಳಕೆಯಲ್ಲಿದೆ ಎಂದು ಹೇಳಲಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್‌.ಅಶೋಕ್‌ ಅವರನ್ನು ನೇಮಕ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎಂದು ಗೊತ್ತಾಗಿದೆ.

ಮಂಡ್ಯ (ಆ.23): ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್‌.ಅಶೋಕ್‌ ಅವರನ್ನು ನೇಮಕ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎಂದು ಗೊತ್ತಾಗಿದೆ. ಈ ಕುರಿತಂತೆ ಇನ್ನೂ ಯಾವುದೇ ನಿರ್ಧಾರ ವಾಗಿಲ್ಲ. ಆದರೆ ಸ್ಥಳೀಯವಾಗಿ ಬಿಜೆಪಿ ನಾಯಕರು ಅಶೋಕ್‌ ಅವರನ್ನು ಜಿಲ್ಲಾ ಮಂತ್ರಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆಂದು ತಿಳಿದು ಬಂದಿದೆ.

ಒಕ್ಕಲಿಗರ ಕೋಟೆ ಭೇದಿಸಲು ಬಿಜೆಪಿಯಿಂದ ಒಕ್ಕಲಿಗ ಅಸ್ತ್ರ ಪ್ರಯೋಗ ಮಾಡುವುದು ಮೊದಲ ತಂತ್ರ. ಅಲ್ಲದೇ ವಿಧಾನ ಸಭೆಯಲ್ಲಿ ಬಿಜೆಪಿ ಖಾತೆ ತೆರೆಯದ ಮಂಡ್ಯದಲ್ಲಿ ಕಮಲ ಅರಳಿಸುವ ಗೇಮ್ ಪ್ಲಾನ್‌ ಬಿಜೆಪಿ ಬತ್ತಳಕೆಯಲ್ಲಿದೆ ಎಂದು ಹೇಳಲಾಗಿದೆ.

ಬಿಜೆಪಿ ಮಾಸ್ಟರ್ ಪ್ಲಾನ್ ಏನು..?

ಮಂಡ್ಯ ಹೊರತು ಪಡಿಸಿ ರಾಜ್ಯದ ಎಲ್ಲಾ ಭಾಗದಲ್ಲೂ ಬಿಜೆಪಿ ಕಮಲ ಬಾವುಟ ಹಾರಿಸಿದೆ. ಇದೀಗ ಮಂಡ್ಯ ಜಿಲ್ಲೆಯ ಮೇಲೆ ಬಿಜೆಪಿ ದೃಷ್ಟಿನಿಟ್ಟಿದೆ. ಒಕ್ಕಗಲಿಗರ ಕೋಟೆ ಭೇದಿಸಲು ಮಾಸ್ಟರ್‌ ಪ್ಲಾನ್‌ ಮಾಡಿರುವ ಬಿಜೆಪಿ ಒಕ್ಕಲಿಗನ ಹೆಗಲಿಗೆ ಮಂಡ್ಯ ಉಸ್ತುವಾರಿ ವಹಿಸಲು ಸಿದ್ಧವಾಗಿದೆ ಎನ್ನಲಾಗಿದೆ. ಸಚಿವ ಆರ್‌.ಅಶೋಕ್‌ ಅವರನ್ನೇ ಮಂಡ್ಯ ಜಿಲ್ಲಾ ಉಸ್ತುವಾರಿ ಮಾಡುವುದರ ಮೂಲಕ ಒಕ್ಕಲಿಗರನ್ನು ಸೆಳೆಯಲು ಅನುಕೂಲವಾಗುತ್ತದೆ. ಅಲ್ಲದೇ ಮುಂಬರುವ ಕೆ.ಆರ್‌.ಪೇಟೆ ಪೇಟೆ ಉಪಚುನಾವಣೆಯಲ್ಲೂ ಬಿಜೆಪಿಗೆ ಪ್ರಯೋಗದ ಮೂಲಕ ಅಭ್ಯರ್ಥಿ ಗೆಲ್ಲಿಸುವ ಹೊಣೆ ಆರ್‌.ಅಶೋಕ್‌ ಹೆಗಲಿಗೆ ಹೊರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.

ಮಂಡ್ಯ: ಜಿಲ್ಲೆಯಾದ್ಯಂತ ಭಾರೀ ಮಳೆ, ಹಲವು ಪ್ರದೇಶ ಜಲಾವೃತ

ಆದರೆ ಈ ಹಿಂದೆಯೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್‌.ಅಶೋಕ್‌ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆ ದಿನಗಳಲ್ಲಿ ಮಂಡ್ಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಅಲ್ಲದೇ ಬಿಜೆಪಿ ಸಂಘಟನೆಯೂ ಕೂಡ ಜಿಲ್ಲೆಯಲ್ಲಿ ಯಾವುದೇ ಫಲಕೊಡಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಎಷ್ಟರ ಮಟ್ಟಿಗೆ ಮಾನ್ಯತೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು.

KRS ಜಲಾಶಯದ ಸುತ್ತ ಮುತ್ತ ನಿಷೇಧಾಜ್ಞೆ ಜಾರಿ

click me!