ಈ ವಿಚಾರದಲ್ಲಿ ನನ್ನ ಯಾವ ಕೈವಾಡವಿಲ್ಲ : ಬಿಜೆಪಿ ಶಾಸಕ ಹಾಲಪ್ಪ

By Kannadaprabha NewsFirst Published Nov 23, 2020, 12:37 PM IST
Highlights

ಈ ವಿಚಾರದಲ್ಲಿ ನನ್ನದು ಯಾವ ಕೈವಾಡವೂ ಇಲ್ಲ ಎಂದು ಬಜೆಪಿ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ. 

ಹೊಸನಗರ (ನ.23):  ಪುರಾಣ ಪ್ರಸಿದ್ಧ ಸಿಗಂದೂರು ದೇವಸ್ಥಾನದಲ್ಲಿ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ತಮ್ಮ ಕೈವಾಡವಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಸ್ಪಷ್ಟಪಡಿಸಿದರು.

ಪಟ್ಟಣದ ಆರ‍್ಯ ಈಡಿಗರ ಸಮುದಾಯ ಭವನ ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿದ ಅವರು, ದೇವಸ್ಥಾನ ಆಡಳಿತದ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನಡುವೆ ನಡೆದ ವಾಗ್ವಾದದ ಪರಿಣಾಮ ದೇವಸ್ಥಾನದಲ್ಲಿ ಪಾರದರ್ಶಕತೆ ಕಾಪಾಡಲು ಸರ್ಕಾರ ಸಮಿತಿ ರಚಿಸಿದೆ ಎಂದು ಪುನರುಚ್ಚಿಸಿದರು.

ಸಿಗಂದೂರು ದೇವಸ್ಥಾನದ ವಿಚಾರದಲ್ಲಿ ಕೆಲವು ಕೈಗಳು ಕೆಲಸ ಮಾಡಿವೆ. ಸಲ್ಲದ ಅಪಪ್ರಚಾರ ಮಾಡಿವೆ. ಈ ಪ್ರಕರಣವನ್ನು ಸುಖಾಂತ್ಯಗೊಳಿಸಲು ಸಾಕಷ್ಟುಶ್ರಮಿಸಲಾಗಿದೆ. ಅದು ಹೇಗೋ ಪರಿಸ್ಥಿತಿ ಕೈಮೀರುವ ಹಂತ ತಲುಪಿದ್ದು, ತಮಗೆ ಹಾಗೂ ಭಕ್ತರಿಗೆ ನೋವು ತರಿಸಿದೆ ಎಂದರು.

ಜೇನಿಗೆ ಕಲ್ಲು ಹೊಡೆಯೋ ಕೆಲಸ ಬೇಡ : ಮಧು ಬಂಗಾರಪ್ಪ

ಉನ್ನತ ಮಟ್ಟದ ರಾಜಿಸಂಧಾನಗಳು ನಡೆದವು. ಆದರೂ, ಪ್ರಕರಣ ಸುಸೂತ್ರವಾಗಿ ನಡೆಯದ ಕಾರಣ ಕೊನೆಯ ಹಂತವಾಗಿ ಸರ್ಕಾರ ವರದಿ ತರಿಸಿಕೊಂಡು ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿದೆ. ಮುಖ್ಯಮಂತ್ರಿಗಳು ಅಭಯ ನೀಡಿದಂತೆ ಯಾವುದೇ ಕಾರಣಕ್ಕೂ ದೇವಸ್ಥಾನವನ್ನು ಮುಜರಾಯಿಗೆ ವಹಿಸುವ ಮಾತೇ ಇಲ್ಲ. ಇಲ್ಲಿ ಯಾರ ಪರ ಮತ್ತು ವಿರೋಧವಾಗಿ ಸರ್ಕಾರವಿಲ್ಲ. ಭಕ್ತರಿಗೆ ನ್ಯಾಯಯುತವಾಗಿ ನಡೆದುಕೊಳ್ಳಬೇಕಾದ ಸರ್ಕಾರ ಅದಕ್ಕೆ ಪೂರಕವಾಗಿ ನಡೆದುಕೊಂಡಿದೆ. ಇದರಿಂದ ಯಾರಿಗೂ ಹಾನಿ ಆಗಲಿ, ಲಾಭವಾಗಲಿ ಆಗಿಲ್ಲ ಎಂದು ಹೇಳಿದರು.

ನಮ್ಮಲ್ಲಿ ಸಾಕ್ಷ್ಯಾಧಾರವಿದೆ:  ಈ ಹಿಂದೆ ದೇವಸ್ಥಾನ ವಿಚಾರದಲ್ಲಿ ಕಾಗೋಡು ತಿಮ್ಮಪ್ಪ ಅವರು ದೇವಸ್ಥಾನವನ್ನು ಮುಜರಾಯಿಗೆ ವಹಿಸಿಕೊಳ್ಳಬೇಕು ಎಂದು ಸಾಕಷ್ಟುಬಾರಿ ಮನವಿ ಮಾಡಿದ್ದರು. ಈ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರವಿದೆ. ಸುಮ್ಮನೆ ನಮ್ಮ ಹೆಸರನ್ನು ತರುವ ಕೆಲಸ ಬಿಟ್ಟು ಸಮಸ್ಯೆಯನ್ನು ಬಗೆಹರಿಸುವ ದಿಕ್ಕಿನಲ್ಲಿ ಸಮುದಾಯ ಗಮನಹರಿಸಿಬೇಕಾಗಿದೆ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲಗೋಡು ರತ್ನಾಕರ್‌, ಸುರೇಶ್‌ ಸ್ವಾಮಿರಾವ್‌, ಶ್ವೇತಾ ಬಂಡಿ, ಆರ‍್ಯ ಈಡಿಗರ ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರಪ್ಪ, ಉಪಾಧ್ಯಕ್ಷ ಎರಗಿ ಉಮೇಶ್‌, ತಾಪಂ ಅಧ್ಯಕ್ಷ ಆಲವಳ್ಳಿ ವೀರೇಶ್‌, ಪಪಂ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ ಮತ್ತಿತರರಿದ್ದರು. ಸಂಘದ ಕಾರ‍್ಯದರ್ಶಿ ಲೇಖನ ಮೂರ್ತಿ ಸಭಾ ಕಾರ್ಯಕ್ರಮ ನಿರ್ವಹಿಸಿದರು.

click me!