'BSY ಇನ್ನೂ 2 ವರ್ಷ ಸಿಎಂ ಆಗಿರ್ತಾರೆ ಅಂತ ಹೇಳೋದಕ್ಕೆ ನಾನು ಜ್ಯೋತಿಷಿಯಲ್ಲ:ಬಿಜೆಪಿ ಶಾಸಕ

By Kannadaprabha NewsFirst Published Jun 10, 2021, 1:34 PM IST
Highlights

* ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ
* ಬಿಎಸ್‌ವೈ ಶಿಸ್ತಿನ ಕಾರ್ಯಕರ್ತ ಎಂಬುದನ್ನು ತೋರಿಸಿದ್ದಾರೆ
* ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ

ಹರಪನಹಳ್ಳಿ(ಜೂ.10): ನಾನು ಪಕ್ಷದ ಪರವಾಗಿದ್ದು ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ಹೇಳಿದರೆ ನಾನು ಸ್ಥಾನ ತ್ಯಜಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳುವ ಮೂಲಕ ಶಿಸ್ತಿನ ಕಾರ್ಯಕರ್ತ ಎಂಬುದನ್ನು ತೋರಿಸಿದ್ದಾರೆ. ನಾನು ಸಹ ಪಕ್ಷದ ಪರವಾಗಿದ್ದು ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.

ಸಹಿ ಸಂಗ್ರಹ ಪ್ರಶ್ನೆಗೆ, ಆ ವಿಚಾರ ನನಗೆ ತಿಳಿದಿಲ್ಲ. ಪರ-ವಿರೋಧಕ್ಕಾಗಿ ಸಹಿ ಪಡೆಯಲು ನನ್ನ ಬಳಿ ಯಾರು ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯಡಿಯೂರಪ್ಪನವರೇ ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬುದಕ್ಕೆ ನಾನು ಜ್ಯೋತಿಷಿಯಲ್ಲ ಎಂದು ನಗುವಿನ ಚಟಾಕಿ ಹಾರಿಸಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ : BJP ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ

ಕೊರೋನಾ ಇದ್ದರೂ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿಲ್ಲ. ಕಳೆದ ಬಾರಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 16 ಕೋಟಿ ಅಭಿವೃದ್ಧಿ ಕಾರ್ಯಕ್ಕೆ ಬಂದಿತ್ತು. ಈ ಬಾರಿ ಎಲ್ಲ ಅನುದಾನವನ್ನು ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ವರ್ಗಾಹಿಸಲಾಗಿದೆ ಎಂದು ತಿಳಿಸಿದರು.

ಹರಪನಹಳ್ಳಿ ಪಟ್ಟಣದ ದಿನ ವಹಿ ಸಂತೆ ಮಾರುಕಟ್ಟೆ ಕಟ್ಟಡ ಅಭಿವೃದ್ಧಿಗೆ 2.70 ಕೋಟಿ ಅನುಮೋದನೆ ದೊರೆತಿದ್ದು, ಶೀಘ್ರ ಟೆಂಡರ್‌ ಕರೆಯಲಾಗುವುದು. ತಾಲೂಕಿನ ಕಡತಿ, ಮಾದಾಪುರ, ಕೂಲಹಳ್ಳಿ ಗ್ರಾಮಗಳಲ್ಲಿ . 4.60 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 80 ಬೆಡ್‌ ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದ ಅವರು, ದಿನದಿಂದ ದಿನಕ್ಕೆ ಸೋಂಕು ಇಳಿಕೆಯಾಗುತ್ತಿರುವುದು ನೆಮ್ಮದಿ ತರಿಸಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ, ಮುಖಂಡರಾದ ಆರ್‌. ಲೋಕೇಶ, ರಾಘವೇಂದ್ರಶೆಟ್ಟಿ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ, ಪುರಸಭಾ ಸದಸ್ಯರಾದ ಕಿರಣ ಶಾನ್‌ಬಾಗ್‌, ಜಾವೇದ್‌, ಯು.ಪಿ. ನಾಗರಾಜ, ಎಂ. ಸಂತೋಷ, ಶಿರಗಾನಹಳ್ಳಿ ವಿಶ್ವನಾಥ, ಸಣ್ಣ ಹಾಲಪ್ಪ ಉಪಸ್ಥಿತರಿದ್ದರು.
 

click me!