'ಯಡಿಯೂರಪ್ಪ ಸಿಎಂ ಸ್ಥಾನ ಬಿಟ್ಟರೆ, ನಾನು ಮುಖ್ಯಮಂತ್ರಿ ಆಗ್ತೇನೆ'

By Kannadaprabha NewsFirst Published Apr 19, 2021, 2:29 PM IST
Highlights

ಮುಂಬರುವ ದಿನಗಳಲ್ಲಿ ಸಿಎಂ ಬದಲಾವಣೆಯಾಗುವುದು ಖಂಡಿತ| ಯಡಿಯೂರಪ್ಪನವರ ಅಕ್ಕ-ಪಕ್ಕದಲ್ಲಿ ಇರುವವರು ಅವರಿಗೆ ಸರಿಯಾಗಿ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ| ನಮ್ಮ ಸರ್ಕಾರದಲ್ಲಿ ಕೆಲವು ಡುಬ್ಲಿಕೇಟ್‌ ಸಚಿವರಿದ್ದು, ಸಮಾಜವನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ| ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿಗೆ ಟಾಂಗ್‌ ನೀಡಿದ ಯತ್ನಾಳ್‌| 
 

ಬಾಗಲಕೋಟೆ(ಏ.19): ಮುಂಬರುವ ದಿನಗಳಲ್ಲಿ ಸಿಎಂ ಬದಲಾವಣೆಯಾಗುವುದು ಖಂಡಿತ. ನಾನು ಕೂಡ ಸಿಎಂ ಲಿಸ್ಟ್‌ನಲ್ಲಿ ಇದ್ದೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದಾರೆ.

ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ಶನಿವಾರ ರಾತ್ರಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಪಂಚಲಕ್ಷ ಪಾದಯಾತ್ರೆಗೆ ಸಹಕರಿಸಿದ ಪಂಚಮಸಾಲಿ ಸಮಾಜದ ಬಂಧುಗಳಿಗೆ ಶರಣು ಶರಣಾರ್ಥಿ ಕಾರ್ಯಕ್ರಮದ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯಡಿಯೂರಪ್ಪನವರ ಅಕ್ಕ-ಪಕ್ಕದಲ್ಲಿ ಇರುವವರು ಅವರಿಗೆ ಸರಿಯಾಗಿ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ. ಯಡಿಯೂರಪ್ಪನವರು ಸಿಎಂ ಸ್ಥಾನ ಬಿಟ್ಟರೆ, ನಾವು ಕೂಡ ಸಿಎಂ ಆಗಬಹುದು. ಸಿಎಂ ಆಗುವವರ ಲಿಸ್ಟ್‌ನಲ್ಲಿ ತಾವು ಕೂಡ ಇದ್ದೇವೆ. ನಮ್ಮ ಸರ್ಕಾರದಲ್ಲಿ ಕೆಲವು ಡುಬ್ಲಿಕೇಟ್‌ ಸಚಿವರಿದ್ದು, ಸಮಾಜವನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಸಮಾಜ ತಕ್ಕ ಪಾಠ ಕಲಿಸುತ್ತದೆ. ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದರೂ ಬಿಲ್‌ ಕೊಡುವ ಯೋಗ್ಯತೆ ಇಲ್ಲ. ಸುಮ್ಮನೆ ಸಮಾಜದ ದಾರಿ ತಪ್ಪಿಸುವ ಕುತಂತ್ರಕ್ಕೆ ಕೈ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿಗೆ ಟಾಂಗ್‌ ನೀಡಿದ್ದಾರೆ.

ಸಿಎಂ ಬದಲಾವಣೆ ಕಾದು ನೋಡೋಣ: ಬಸನಗೌಡ ಪಾಟೀಲ ಯತ್ನಾಳ್‌

ಹೋರಾಟದ ಕಾವು ಹೆಚ್ಚಳ:

ಮೀಸಲಾತಿಯು ಸಮಾಜದ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಹಾಗೂ ಸಮಾಜದ ಕಟ್ಟಕಡೆಯ ಬಡ ಕುಟುಂಬಗಳಿಗೆ 2ಎ ಮೀಸಲಾತಿಯ ಸಾಮಾಜಿಕ ನ್ಯಾಯ ದೊರೆಕಿಸಿ ಕೊಡಿಸುವುದೇ ನಮ್ಮ ಹೋರಾಟದ ಗುರಿ. ನಾನು ಯಾವುದೇ ಅಧಿಕಾರಕ್ಕಾಗಿ ಆಸೆ ಪಟ್ಟವ್ಯಕ್ತಿ ಅಲ್ಲ. ಯಾರ ಮನೆಯ ಬಾಗಿಲಿಗೂ ಹೋಗಿ ಕೈಚಾಚಿ ನಿಲ್ಲುವ ಮನುಷ್ಯ ಅಲ್ಲ. ನಾನು ಒಬ್ಬ ರಾಜ್ಯದ ಹಿರಿಯ ನಾಯಕನಾಗಿದ್ದೇನೆ. ಯಾರಿಗೂ ಅಂಜುವ ಮಗ ನಾನಲ್ಲ. ಸದನದಲ್ಲಿ ಸರಕಾರ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಮೀಸಲಾತಿ ನೀಡದೇ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಕಾವು ಹೆಚ್ಚಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ, ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಯ ಹೋರಾಟಕ್ಕೆ ಮಣಿದ ಸರಕಾರ 6 ತಿಂಗಳೊಳಗೆ 2ಎ ಮೀಸಲಾತಿ ನೀಡಲಾಗುವುದೆಂದು ಭರವಸೆ ನೀಡಿದೆ. ಬೇಡಿಕೆ ಈಡೇರದಿದ್ದರೆ ಹೋರಾಟ ನಿಲ್ಲುವುದಿಲ್ಲ ಎಂದರು.

ಸಿದ್ದರಾಮಯ್ಯ ಸ್ಥಿಮಿತ ಕಳೆದುಕೊಂಡಿದ್ದಾರೆ: ಕಟೀಲ್‌

ಇದೇ ಸಂದರ್ಭದಲ್ಲಿ ಆಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟಾ್ರಧ್ಯಕ್ಷ ಡಾ. ವಿಜಯಾನಂದ ಕಾಶಪ್ಪನವರ ಮಾತನಾಡಿ, ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ನಿಟ್ಟಿನಲ್ಲಿ ನ್ಯಾಯಯುತವಾದ ಹೋರಾಟ ಮಾಡುತ್ತಿದ್ದೇವೆ. ಅವಶ್ಯಕತೆ ಬಿದ್ದರೆ ಸಮಾಜಕ್ಕಾಗಿ ನಮ್ಮ ರಾಜಕೀಯ ಜೀವನವನ್ನೇ ತ್ಯಾಗ ಮಾಡಲು ಸಿದ್ಧ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರುದ್ರಾಕ್ಷಿಮಠ ನಾಗನೂರ-ಬೆಳಗಾವಿ ಹಾಗೂ ಶಿವಲಿಂಗೇಶ್ವರ ವಿರಕ್ತಮಠದ ಪೀಠಾಧಿಪತಿ ಡಾ. ಅಲ್ಲಮಫ್ರಭು ಶ್ರೀ ಮಾತನಾಡಿದರು. ಇದೇ ಸಂಧರ್ಭದಲ್ಲಿ ಗ್ರಾಮದ ಹಿರಿಯರಾದ ಬಿ ಎಸ್‌ ಸಿಂಧೂರ, ಸುರೇಶಗೌಡ ಪಾಟೀಲ, ಡಾ.ಎಸ್‌ ಆರ್‌ ಬಾಲಪ್ಪನವರ, ಡಾ. ಬಿ ಎಸ್‌ ಪಾಟೀಲ (ನಾಗರಾಳ ಹುಲಿ) ಮಾತನಾಡಿದರು. ಅಣ್ಣಪ್ಪ ಕರಬಸನವರ ಸ್ವಾಗತಿಸಿದರು. ಆನಂದ ದುಪದಾಳ ನಿರೂಪಿಸಿದರು. ಲಕ್ಷ್ಮಣ ಕಿತ್ತೂರ ವಂದಿಸಿದರು.
 

click me!