ಸಂಸದ ಪ್ರಜ್ವಲ್‌ ಕಾರ‍್ಯಕ್ರಮಕ್ಕೆ ಬಿಜೆಪಿ ಅಡ್ಡಿ: ಶಾಮಿಯಾನ ಕಿತ್ತೆಸೆದರು

By Kannadaprabha NewsFirst Published Oct 11, 2021, 7:37 AM IST
Highlights
  • ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ವಿಚಾರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ
  • ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ನಗರದ ಹೊರವಲಯದ ಉದ್ದೂರು ಗ್ರಾಮದಲ್ಲಾಗಿದೆ

  ಹಾಸನ (ಅ.11):  ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ವಿಚಾರದಲ್ಲಿ ಜೆಡಿಎಸ್‌ (JDS) ಹಾಗೂ ಬಿಜೆಪಿ (BJP) ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಪ್ರಕರಣ ಪೊಲೀಸ್‌ (Police) ಠಾಣೆ ಮೆಟ್ಟಿಲೇರಿರುವ ಘಟನೆ ನಗರದ ಹೊರವಲಯದ ಉದ್ದೂರು ಗ್ರಾಮದಲ್ಲಿ ಭಾನುವಾರ ನಡೆದಿದೆ. 

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ (PMGSY) ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಜೆಡಿಎಸ್‌ ಕಾರ್ಯಕರ್ತರು ಅದ್ಧೂರಿಯಾಗಿ ಪ್ರಜ್ವಲ್‌ರನ್ನು ಬರಮಾಡಿಕೊಂಡರು. ರಿಂಗ್‌ ರಸ್ತೆಯಲ್ಲೇ ಹಾಕಲಾಗಿದ್ದ ವೇದಿಕೆಗೆ ಪ್ರಜ್ವಲ್‌ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. 

ಈ ಸಮಯದಲ್ಲಿ ಎರಡೂ ಪಕ್ಷದ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಆಗಮಿಸಿ, ಕೈಯಲ್ಲಿದ್ದ ಕುಡುಗೋಲಿನಿಂದ ಸಮಾರಂಭಕ್ಕೆ ಹಾಕಿದ್ದ ಶಾಮಿಯಾನ ನೆಲಕ್ಕೆ ಉರುಳಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದ ವೇಳೆ ವಿಷಯ ತಿಳಿದ ಪೆನ್‌ಷನ್‌ ಮೊಹಲ್ಲಾ (Pension mohalla) ಠಾಣೆಯ ಅ​ಧಿಕಾರಿಗಳು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಶಾಂತಿಗೊಳಿಸಲು ಮುಂದಾದರು. ವಾಗ್ವಾದಕ್ಕೆ ಕಾರಣರಾದವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದರು.

ಗಾಂಧಿಯನ್ನೇ ಬಿಟ್ಟಿಲ್ಲ ನಿಮ್ಮನ್ನು ಬಿಡುತ್ತಾ ಬಿಜೆಪಿ?: ಪ್ರಜ್ವಲ್‌ ರೇವಣ್ಣ

ಇಷ್ಟುವರ್ಷದ ಗ್ರಾಮದ ಕಡೆ ತಿರುಗಿ ನೋಡದ ಜೆಡಿಎಸ್‌ (JDS) ಮುಖಂಡರು ಇದೀಗ ಬಿಜೆಪಿ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾಗ ಗ್ರಾಮದತ್ತ ಮುಖ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

25 ವರ್ಷ ಈ ರಸ್ತೆ ಏಕೆ ಕಾಣಲಿಲ್ಲ?

ಕಳೆದ 25 ವರ್ಷಗಳಿಂದಲೂ ಗ್ರಾಮದ ಯಾವ ರಸ್ತೆ (Road) ಕೆಲಸ ಆಗಿರಲಿಲ್ಲ, ಆಗ ಬರದ ನೀವು ಈಗ ಯಾಕೆ ಬಂದಿದ್ದೀರಿ ರೇವಣ್ಣನವರು (Revanna) ಸಚಿವರಾಗಿದ್ದಾಗ ಉದ್ದೂರು ಕಾಣಿಸಲಿಲ್ಲ. ಈಗ ತಾನೆ ಬಂದಿರುವ ಶಾಸಕ ಪ್ರೀತಮ್‌ ಜೆ. ಗೌಡ (Preetham gowda) ಉತ್ತಮವಾದ ರಸ್ತೆ ಮಾಡಿಸುತ್ತಿದ್ದಾರೆ. ಈಗ ಈ ರಸ್ತೆ ನಿಮಗೆ ಕಾಣಿಸಿದೆಯಾ ಎಂದು ಗ್ರಾಮದ ಕೆಲವರು ಸಂಸದರನ್ನು ಪ್ರಶ್ನೆ ಮಾಡಿದರು.

ಹೀಗೆ ಪ್ರಶ್ನಿಸಿದವರ ಮೇಲೆ ಜೆಡಿಎಸ್‌ ಕಾರ್ಯಕರ್ತರು ಹಲ್ಲೆ ಯತ್ನ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಘಟನೆ ಸಂಬಂಧ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ. ಜೆಡಿಎಸ್‌ನಿಂದಲೂ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರತಿದೂರು ಕೊಡಲಾಗಿದೆ.

click me!