'ಮತ್ತೆ ನಕಲಿ ಮತದಾರರ ಹಾವಳಿ : ಬಿಜೆಪಿ ಎದುರಾಗಿದೆ ಟೆನ್ಶನ್'

By Suvarna NewsFirst Published Oct 26, 2020, 8:54 AM IST
Highlights

ಮತ್ತೆ ನಕಲಿ ಮತದಾರರ ವಿಚಾರ ಸದ್ದಾಗುತ್ತಿದೆ. ಚುನಾವಣೆ ಅಬ್ಬರ ಜೋರಾಗುತ್ತಿದ್ದಂತೆ ರಾಜಕೀಯ ರಣಾಂಗಣ ಗರಿಗೆದರಿದೆ. 

 ದೊಡ್ಡಬಳ್ಳಾಪುರ (ಅ.26):  ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ ಮತದಾರರ ಪಟ್ಟಿಯಲ್ಲಿದ್ದ ನಕಲಿ ಮತದಾರರನ್ನು ಪತ್ತೆ ಹಚ್ಚಿ ಪಟ್ಟಿಯಿಂದ ಕೈಬಿಟ್ಟಹಿನ್ನೆಲೆಯಲ್ಲಿ ಸೋಲಿನ ಭಯ ಮತ್ತು ಹತಾಶೆಯಿಂದ ಬಿಜೆಪಿ ಮುಖಂಡರು ಜೆಡಿಎಸ್‌ ಕಾರ‍್ಯಕರ್ತರ ಮೇಲೆ ಕ್ಷುಲ್ಲಕ ಆರೋಪ ಮಾಡುತ್ತಿದ್ದಾರೆ ಎಂದು ಜೆಡಿಎಸ್‌ ಬೆಂ.ಗ್ರಾ.ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಆಂಜನ ಗೌಡ ಹೇಳಿದರು.

ಬಿಜೆಪಿ ಕಾನೂನು ಪ್ರಕೋಷ್ಠ ಮಾಡಿದ್ದ ಆರೋಪಕ್ಕೆ ಪ್ರತಿಯಾಗಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಆ ಪಕ್ಷದ ಕಾನೂನು ಪ್ರಕೋಷ್ಠ ಅಧ್ಯಕ್ಷರು ತಮ್ಮ ಬಾಲಿಶತನ ಪ್ರದರ್ಶಿಸಿದ್ದಾರೆ ಎಂದರು.

'ಆರ್‌ ಆರ್‌ ನಗರದಲ್ಲಿ ಮುನಿರತ್ನ ರಿಸಲ್ಟ್ ಹಿಂಗೇ ಇರುತ್ತೆ'

8 ಸಾವಿರ ನಕಲಿ ಮತದಾರರು :  ಶಿಕ್ಷಕರ ಮತ ಕ್ಷೇತ್ರದಲ್ಲಿ ಸುಮಾರು 8 ಸಾವಿರ ನಕಲಿ ಮತದಾರರನ್ನು ಗುರ್ತಿಸಿ, ಮತದಾರರ ಪಟ್ಟಿಯಿಂದ ಕೈಬಿಡುವಂತೆ ಮಾಡುವಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಎ.ಪಿ.ರಂಗನಾಥ್‌ ಅವರ ಪಾತ್ರ ಹಿರಿದು. ಈ ಹಿಂದೆ 3 ಬಾರಿ ಈ ಕ್ಷೇತ್ರದಿಂದ ಚುನಾಯಿತರಾಗಿದ್ದ ಪ್ರತಿನಿಧಿಯೇ ಈ ನಕಲಿ ಮತದಾರರ ಸೃಷ್ಟಿಕರ್ತರು. ಅವರ ಬೆಂಬಲದಿಂದಲೇ ಕಳೆದ 3 ಬಾರಿ ಆಯ್ಕೆಯಾಗಿದ್ದ ಅವರಿಗೆ ಈ ಬಾರಿ ಅಸಲಿ ಮತದಾರರು ಮಾತ್ರ ಪಟ್ಟಿಯಲ್ಲಿ ಉಳಿಸುಕೊಂಡಿರುವ ಪರಿಣಾಮ ಸೋಲಿನ ಭಯ ಕಾಡುತ್ತಿದೆ ಎಂದರು.

ಒಂದು ವೇಳೆ ನಕಲಿ ಮತದಾರರ ಬಗ್ಗೆ ಜೆಡಿಎಸ್‌ ಎತ್ತಿರುವ ಪ್ರಶ್ನೆ ಅಸಾಂವಿಧಾನಿಕ ಅಥವಾ ಪಕ್ಷದ ಕಾರ‍್ಯಕರ್ತರು ಧಮಕಿ ಹಾಕಿರುವ ಆರೋಪ ಸಾಬೀತು ಮಾಡಿದರೆ ತಾವು ಸಾರ್ವಜನಿಕ ಬದುಕಿನಿಂದಲೇ ನಿವೃತ್ತಿ ಹೊಂದುವುದಾಗಿ ಹೇಳಿದರು.

ವಕೀಲ ಮುನಿರುದ್ರಯ್ಯ ಮಾತನಾಡಿ, ಈ ಬಾರಿ ಮತದಾರರು 18 ವರ್ಷಗಳಲ್ಲಿ ಶಿಕ್ಷಕರಿಗಾಗಿ ಏನನ್ನೂ ಮಾಡದ ವ್ಯಕ್ತಿಯ ಸೋಲಿಗೆ ಪಣ ತೊಟ್ಟಿದ್ದಾರೆ. ಪ್ರಚಾರಪ್ರಿಯತೆಯಿಂದ ಮಾಡುವ ಆರೋಪಗಳಿಗೆ ಜನರೇ ಉತ್ತರ ಕೊಡುತ್ತಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾನೂನು ಘಟಕದ ಮುಖಂಡರಾದ ಕನಕರಾಜು, ಜಗನ್ನಾಥ್‌, ಕೃಷ್ಣಮೂರ್ತಿ, ಹರೀಶ್‌ ಮತ್ತಿತರರು ಹಾಜರಿದ್ದರು.

click me!