ನನ್ನನ್ನು ಸೋಲಿಸಲು ಬಿಜೆಪಿ, ಜೆಡಿಎಸ್‌ ಒಂದಾಗಿದೆ : ಮಾಜಿ ಶಾಸಕ ಕೆ. ವೆಂಕಟೇಶ್‌

Published : Mar 16, 2023, 05:14 AM IST
 ನನ್ನನ್ನು ಸೋಲಿಸಲು ಬಿಜೆಪಿ, ಜೆಡಿಎಸ್‌ ಒಂದಾಗಿದೆ :  ಮಾಜಿ ಶಾಸಕ ಕೆ. ವೆಂಕಟೇಶ್‌

ಸಾರಾಂಶ

ನನ್ನನ್ನು ಸೋಲಿಸಲು ಪಿರಿಯಾಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್‌ ಒಂದಾಗಿದೆ ಎಂದು ಮಾಜಿ ಶಾಸಕ ಕೆ. ವೆಂಕಟೇಶ್‌ ಆರೋಪಿಸಿದರು.

 ಬೆಟ್ಟದಪುರ :  ನನ್ನನ್ನು ಸೋಲಿಸಲು ಪಿರಿಯಾಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್‌ ಒಂದಾಗಿದೆ ಎಂದು ಮಾಜಿ ಶಾಸಕ ಕೆ. ವೆಂಕಟೇಶ್‌ ಆರೋಪಿಸಿದರು.

ಪಿರಿಯಾಪಟ್ಟಣ ತಾಲೂಕಿನ ಚಿಕ್ಕನೇರಳೆ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನ್ನನ್ನು ಸೋಲಿಸಬೇಕೆಂಬ ಮಹಾ ಬಯಕೆ ಹೊಂದಿದ್ದಾರೆ, ಅದು ಯಶಸ್ವಿಯಾಗುವುದಿಲ್ಲ, ಕಾಂಗ್ರೆಸ್‌ ಬಡವರ ದೀನ ದಲಿತರ ಪರವಾಗಿ ಕೆಲಸ ಮಾಡುತ್ತಿದ್ದು, ಅದರಿಂದ ಮುಂದಿನ ದಿನಗಳಲ್ಲಿ ಬಡವರು ಮತ್ತು ರೈತರು ಮತ್ತು ದೀನ ದಲಿತರಿಗೆ ಅತಿ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ಕಾಂಗ್ರೆಸ್‌ ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.

ಶಾಸಕ ಕೆ. ಮಹದೇವ್‌ ಅವರು ಮಾಟ ಮಂತ್ರ ಮತ್ತು ಪೂಜೆಯಲ್ಲಿ ತೊಡಗಿದ್ದು, ಎದುರಾಳಿಗಳನ್ನು ಸಂವರಿಸುವ ಯಜ್ಞಗಳನ್ನು ಸಹ ಮಾಡುತ್ತಿದ್ದಾರೆ. ಆದರೆ ಅವು ನಮಗೆ ಭಯ ಮತ್ತು ಹೆದರಿಕೆಯನ್ನು ಮೂಡಿಸುವುದಿಲ್ಲ, ನಾವೇನಿದ್ದರೂ ಬಸವಣ್ಣನವರ ತತ್ವವನ್ನು ಅಳವಡಿಸಿದ್ದು, ಕಾಯಕವೇ ಕೈಲಾಸ ಎಂದು ಕೆಲಸ ಮಾಡುತ್ತಿದ್ದೇವೆ, ಆದ್ದರಿಂದ ತಾಲೂಕಿನ ಜನತೆ ನನ್ನನ್ನು ಸಂಪೂರ್ಣ ಬೆಂಬಲಿಸುತ್ತಾರೆ ಎಂಬ ಭರವಸೆ ನನ್ನಲ್ಲಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ವಕ್ತಾರ ಎಂ. ಲಕ್ಷ್ಮಣ್‌, ಕುರುಬರ ಸಂಘದ ಅಧ್ಯಕ್ಷ ಎಚ್‌.ಡಿ. ಗಣೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಹಮದ್‌ ಜಾನ್‌ ಬಾಬು ಮಾತನಾಡಿದರು.

ಮುಖಂಡರಾದ ನಿತಿನ್‌ ವೆಂಕಟೇಶ್‌, ತಮ್ಮಣ್ಣ, ಶೇಖರ್‌, ಡಿ.ಟಿ. ಸ್ವಾಮಿ, ಜಿಪಂ ಮಾಜಿ ಸದಸ್ಯ ಜವರಪ್ಪ, ಬಿ.ಎಸ್‌. ರಾಮಚಂದ್ರ, ಪಿ.ಪಿ. ಮಹದೇವ್‌, ಬಸವರಾಜು, ನಂಜುಂಡಸ್ವಾಮಿ, ನಿವೃತ್ತ ಶಿಕ್ಷಕ ಸಣ್ಣ ಸ್ವಾಮಿಗೌಡ, ಜ್ಯೋತಿ ಕುಮಾರ್‌, ವೆಂಕಟೇಶ್‌, ಮೋಹನ್‌ ಇದ್ದರು.

ನಂಜನಗೂಡಿನ ಕಾಂಗ್ರೆಸ್‌ಗೆ ದರ್ಶನ್‌ ಧ್ರುವ ಅನಿವಾರ್ಯ

ನಂಜನಗೂಡು : ಆರ್‌. ಧ್ರುವನಾರಾಯಣ ಅವರ ಪುತ್ರ ದರ್ಶನ್‌ಧ್ರುವ ಅವರಿಗೆ ರಾಜಕೀಯ ಅನಿವಾರ್ಯವಲ್ಲ, ಆದರೆ ನಂಜನಗೂಡಿನ ಕಾಂಗ್ರೆಸ್‌ಗೆ ದರ್ಶನ್‌ ಧ್ರುವ ಅನಿವಾರ್ಯವಾಗಿದ್ದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಕಂಠು ಭಾವುಕವಾಗಿ ನುಡಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸದ್ಯ ಅವರ ಬಳಿ ಈ ಬಗ್ಗೆ ಕೂಲಂಕುಶವಾಗಿ ಮಾತನಾಡುವ ಪರಿಸ್ಥಿತಿಯಲ್ಲಿ ಅವರಿಲ್ಲ. ಶೀಘ್ರವೇ ಅವರಿಗೆ ನಿಮ್ಮೆಲ್ಲರ ಅಭಿಪ್ರಾಯವನ್ನು ಮನವರಿಕೆ ಮಾಡಿ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದರು.

ನಿರಂತರ ಪ್ರವಾಸ:

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ 9 ಜಿಲ್ಲೆಗಳಲ್ಲಿ ನಿರಂತರವಾಗಿ ಪ್ರವಾಸ ಮಾಡಿ, ಪಕ್ಷ ಸಂಘಟನೆಯಲ್ಲಿ ತೊಡಗಿ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ನೀಡಬೇಕೆಂದು ಶಿಫಾರಸ್ಸು ಮಾಡುವ ಅಧಿಕಾರ ಹೊಂದಿದ್ದ ಆರ್‌. ಧ್ರುವನಾರಾಯಣ ಅವರು, ಕತ್ತೆಯಂತೆ ಪಕ್ಷಕ್ಕೆ ದುಡಿಯುತ್ತಿದ್ದರು. ಅವರು ಸ್ಪರ್ಧಿಸಲು ಬಯಸಿದ್ದ ನಂಜನಗೂಡು ಕ್ಷೇತ್ರಕ್ಕೆ ಧ್ರುವನಾರಾಯಣ ಅವರ ಒಬ್ಬರ ಹೆಸರನ್ನು ಸ್ಕ್ರೀನಿಂಗ್‌ ಕಮಿಟಿಗೆ ಕಳುಹಿಸಲು ನಮ್ಮ ಪಕ್ಷಕ್ಕೆ ಸಾಧ್ಯವಾಗಲಿಲ್ಲ ಎಂಬ ಬೇಸರ ನನಗೂ ಇದೆ. ಲಕ್ಷ್ಮಣ ರೇಖೆ ಮೀರಿದ ವರ್ತನೆಗಳು ಹಾಗೂ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದರಿಂದ ಒತ್ತಡಕ್ಕೆ ಸಿಲುಕಿದ್ದರು. ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಹೊರಗೆ ಹಾಕದೇ ನಗುಮುಖದಲ್ಲೇ ಎಲ್ಲರೊಂದಿಗೂ ಮಾತನಾಡುತ್ತಿದ್ದರು. ಇದರಿಂದ ಗುಣಮುಖ ಆಗಿದ್ದ ಕಾಯಿಲೆಗಳು ಉಲ್ಬಣಗೊಂಡು ನಮ್ಮಿಂದ ದೂರ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅವರನ್ನು ನಂಬಿರುವ ನಂಜನಗೂಡು ಕ್ಷೇತ್ರದ ಕಾರ್ಯಕರ್ತರಿಗೆ ಅವರ ಪ್ರತಿರೂಪವಾಗಿ ಅವರ ಪುತ್ರ ದರ್ಶನ್‌ ಧ್ರುವ ಕಾಂಗ್ರೆಸ್‌ಗೆ ಅನಿವಾರ್ಯವಾಗಿದ್ದಾರೆಯೇ ಹೊರತು, ದರ್ಶನ್‌ಗೆ ರಾಜಕೀಯ ಅನಿವಾರ್ಯವಲ್ಲ. ಏಕೆಂದರೆ ಅವರು ವಿದೇಶದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದಲ್ಲದೆ, ಕೃಷಿಯಲ್ಲೂ ಸಕ್ರಿಯರಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವಿನ ಅಘಾತದಿಂದ ಹೊರ ಬಂದ ಬಳಿಕ ದರ್ಶನ್‌ ಧ್ರುವ ಅವರೊಂದಿಗೆ ಸಮಾಲೋಚಿಸಿ ತಂದೆಯ ಸ್ಥಾನವನ್ನು ತುಂಬುವಂತೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

PREV
Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!