ರಾಜ್ಯ ಬಿಜೆಪಿಗೆ ಹೆಚ್ಚಿನ ಆಯುಷ್ಯ ಇಲ್ಲ. ಇದು ಒತ್ತಾಯದಿಂದ ನಿರ್ಮಾಣವಾದ ಸರ್ಕಾರ. ಆದ್ದರಿಂದ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆ [ಆ.27]: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಸ್ವಯಂಕೃತ ಅಪರಾಧದಿಂದಲೇ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಬಜೆಪಿ ಸರ್ಕಾರ ಉರುಳಿಸಲು ಪ್ರಯತ್ನ ಮಾಡುವುದಿಲ್ಲ ಎಂದರು.
ಇನ್ನು ಬಿಜೆಪಿ ಬಿಜೆಪಿ ಸರ್ಕಾರ ಏನು ಮಾಡುತ್ತಾರೋ ಅದಕ್ಕೆ ಹಸ್ತಕ್ಷೇಪ ಮಾಡುವುದು ನನಗೆ ಇಷ್ಟವಿಲ್ಲ. ಈಗಾಗಲೇ ಇವರ ಸರ್ಕಾರದಲ್ಲಿ ಖಾತೆ ಹಂಚಿಕೆಯಲ್ಲಿ ಹಿರಿತನಕ್ಕೆ ಬೆಲೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಶೋಕ್, ಈಶ್ವರಪ್ಪ ಡಿಸಿಎಂ ಆಗಿದ್ದವರು. ಅವರನ್ನು ಈ ಬಾರಿ ಡಿಸಿಎಂ ಮಾಡಿಲ್ಲ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದವರು ಅವರನ್ನು ಡಿಸಿಎಂ ಮಾಡಿಲ್ಲ. ಆದರೆ ಶಾಸಕನೂ ಅಲ್ಲದ ವ್ಯಕ್ತಿಯನ್ನು ಡಿಸಿಎಂ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾರಜೋಳ ಜನತಾದಳದಿಂದ ಹೋಗಿದ್ದವನು, ಅವರೇನು RSSನವರಲ್ಲ, ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಹಲವರಲ್ಲಿ ಅಸಮಾಧಾನ ಹುಟ್ಟುವುದು ಸಹಜ ಎಂದು ಸಿದ್ದರಾಮಯ್ಯ ಹೇಳಿದರು.
ಉಪಮುಖ್ಯಮಂತ್ರಿ ಹುದ್ದೆ ಎನ್ನುವುದು ಸಂವಿಧಾನಿಕವಾದುದಲ್ಲ. ಈ ರೀತಿ ಯಾರ ಕಾಲದಲ್ಲಿಯೂ ಇರಲಿಲ್ಲ. ಎಲ್ಲರನ್ನೂ ಸಮಾಧಾನ ಮಾಡುವ ಸಲುವಾಗಿ ಮೂರು ಡಿಸಿಎಂ ಹುದ್ದೆ ನೀಡಿದ್ದಾರೆ.
ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಈ ರೀತಿ ಮಾಡಿದ್ದಾರೆ ಎನ್ನಿಸುತ್ತಿದೆ. ಇದೆಲ್ಲವೂ ಕೂಡ ರಾಜ್ಯ ಹೈ ಕಮಾಂಡ್ ನಿರ್ಧಾರವಾಗಿದೆ. ಆದರೆ ಇದು ಯಡಿಯೂರಪ್ಪ ಅವರಿಗೆ ಇಷ್ಟವಿಲ್ಲ. ಒತ್ತಡ ಹಾಕಿ ಡಿಸಿಎಂ ಮಾಡಿಸಲಾಗಿದೆ ಎಂದರು.
ಬಿಜೆಪಿಯವರಿಗೆ ಮತ್ತೆ ಚುನಾವಣೆ ನಡೆಸುವ ಉದ್ದೇಶವಿತ್ತು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಇಷ್ಟವಿರಲಿಲ್ಲ. ಆದರೆ ಯಡಿಯೂರಪ್ಪ ಗೋಗರೆದು ಸಿಎಂ ಆಗಿದ್ದಾರೆ. ಇಂತಹ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.