'ಕೋಡಿಹಳ್ಳಿ ಹಸಿರು ಟವೆಲ್‌ ಹಾಕಿಕೊಂಡು ದಂಧೆ: ಹೇಗಿದೆ ಅವರ ಬಂಗಲೆ, ಕಾರು '

By Kannadaprabha NewsFirst Published Dec 16, 2020, 7:23 AM IST
Highlights

ರೈತ ಮುಖಂಡ ಎಂದು ಹೇಳಿಕೊಂಡು ವಿವಿಧ ಹೋರಾಟ ಮಾಡುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್  ದಂಧೆಗೆ ಇಳಿದಿದ್ದಾರೆ. ದಲ್ಲಾಳಿಗಳಿಂದ  ವಸೂಲಿ ಮಾಡುತ್ತಾರೆ ಎನ್ನಲಾಗಿದೆ. 

ಚಾಮರಾಜನಗರ (ಡಿ.16):  ಕೋಡಿಹಳ್ಳಿ ಚಂದ್ರಶೇಖರ್‌ ರೈತ ನಾಯಕನೆಂದು ಹೇಳಿಕೊಂಡು, ಹಸಿರು ಟವೆಲ್‌ ಹಾಕಿಕೊಂಡು ಅದನ್ನು ಮಾರಾಟಕ್ಕಿಟ್ಟು, ಅದಕ್ಕೆ ಅವಮಾನ ಮಾಡಿ ದಂಧೆಗೆ ಇಳಿದಿದ್ದಾರೆ ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್‌ ಆರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪ್ರತಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹೋರಾಟದಲ್ಲಿ ಮುಗ್ಧ ರೈತರಿಂದ, ಎಪಿಎಂಸಿ ಕಾಯ್ದೆ ಹೋರಾಟದಲ್ಲಿ ದಲ್ಲಾಳಿಗಳಿಂದ, ಈಗ ಕೆಎಸ್‌ಆರ್‌ಟಿಸಿ ನೌಕರರ ಹೋರಾಟದಲ್ಲಿ ಭಾಗವಹಿಸಿ ಹಫ್ತಾ ವಸೂಲಿಗಿಳಿದಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ 88 ನಿಗಮಗಳಿದ್ದು, ಅವುಗಳದ್ದೇ ಆದ ರೂಪುರೇಷೆಗಳಿವೆ, ಸರ್ಕಾರಿ ನೌಕರರಿಗೆ ಅವರದೇ ಧ್ಯೇಯೋದ್ದೇಶಗಳಿವೆ. ಇಂತಹ ಪರಿಜ್ಞಾನವು ಚಂದ್ರಶೇಖರ್‌ಗೆ ಇಲ್ಲ. ಹಸಿರು ಟವೆಲ್‌ ಹಾಕಿಕೊಂಡು ಅದಕ್ಕಿರುವ ಘನತೆ ಗೌರವವನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈತನ ವಿರುದ್ಧ ಹಸಿರು ಟವೆಲ್‌ ತೆಗೆಸುವ ಚಳವಳಿ ಹಮ್ಮಿಕೊಳ್ಳಲಾಗುವುದು. ಈ ಭಾಗದ ಪ್ರಾಮಾಣಿಕ ರೈತರು ಚಂದ್ರಶೇಖರ್‌ ನಗರಕ್ಕೆ ಬಂದರೆ ಹಸಿರು ಟವೆಲ್‌ ತೆಗೆಸುವ ಚಳವಳಿ ನಡೆಸಿ ನಗರಕ್ಕೆ ಕಾಲಿಡದಂತೆ ಮಾಡಬೇಕು ಎಂದು ತಿಳಿಸಿದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಹೋರಾಟಕ್ಕೆ ದಿಢೀರ್ ಹೋರಾಟಕ್ಕೆ ಧುಮುಕಿದ್ದೇಕೆ? ..

ಈತ 2008 ಮತ್ತು 2013ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದಾಗ ಘೋಷಿಸಿಕೊಂಡ ಆಸ್ತಿ 2 ಎಕರೆ 5 ಗುಂಟೆ ಜಮೀನು. ಪ್ರಸ್ತುತ ಈತ ಬೆಂಗಳೂರಿನಲ್ಲಿ ಐಷಾರಾಮಿ ಮನೆ, ಐಷಾರಾಮಿ ಕಾರು ಹೊಂದಿದ್ದಾನೆ. ಪತ್ನಿ ಹಾಗೂ ಮಕ್ಕಳು ಸಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಐಷಾರಾಮಿ ಜೀವನ ನಡೆಸುತ್ತ ಅಪಾರ ಆಸ್ತಿಗಳಿಸಿರುವ ಇವರು ಯಾವ ರೀತಿ ಸಂಪಾದನೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಅಧಿಕಾರಿಗಳಿಗೆ ಇವರ ವಿರುದ್ಧ ದೂರು ನೀಡಲಾಗುವುದು ಎಂದರು.

ಹಾಸನ, ಅರಸೀಕೆರೆಗಳಲ್ಲಿ ಈತನನ್ನು ಜನರೇ ಸೇರಿಸುವುದಿಲ್ಲ. ಸಾರಿಗೆ ನೌಕರರ ಹೋರಾಟದಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡಿರುವುದರಿಂದ ಸರ್ಕಾರ ಈತನ ಮೇಲೆ ಮೊಕದ್ದಮೆ ಹೂಡಬೇಕೆಂದು ಒತ್ತಾಯಿಸಿದರು.

ಮೊಕದ್ದಮೆಗಳನ್ನು ಹಾಕಿದಾಗ ಅವುಗಳನ್ನು ತೆಗೆಸುವ ಚಾಣಾಕ್ಷತೆಯನ್ನು ಕರಗತ ಮಾಡಿಕೊಂಡಿರುವ ಇವರು ಸೋಮವಾರ ಕೂಡ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಾಗ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಆವರಿಗೆ ದೂರವಾಣಿ ಕರೆ ಮಾಡಿ ಯಾವುದೇ ಮೊಕದ್ದಮೆ ಹೂಡದಂತೆ ಮನವಿ ಮಾಡಿದ್ದಾರೆ ಎಂದರು.

click me!