
ಚಿಕ್ಕಮಗಳೂರು: ಆಹಾರ ಸುರಕ್ಷತೆ ಬಗ್ಗೆ ರಾಜ್ಯಾದ್ಯಂತ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಸ್ತೆ ಬದಿ ಹೋಟೆಲ್ಗಳು ಸೇರಿದಂತೆ ಪಂಚತಾರಾ ಹೋಟೆಲ್ಗಳ ಮೇಲೂ ಅಧಿಕಾರಿಗಲು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಶಾಕಿಂಗ್ ಅಂಶಗಳು ಕಂಡು ಬರುತ್ತಿದ್ದು, ಜನರ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಉಂಟು ಮಾಡುತ್ತದೆ ಎಂಬುವುದರ ಬಗ್ಗೆ ಆತಂಕ ಎದುರಾಗುತ್ತಿದೆ. ಇದರ ನಡುವೆಯೇ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಎರಡು ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ಅಂತರದಲ್ಲಿ ಎರಡು ಆಘಾತಕಾರಿ ಪ್ರಕರಣಗಳ ಪತ್ತೆಯಾಗಿದ್ದು, ಒಂದೆಡೆ ಕಳಸದ ಹೊಟೇಲ್ ನ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಚಿಕ್ಕಮಗಳೂರು ನಗರದ ಪ್ರತಿಷ್ಠಿತ ಬೇಕರಿಯಲ್ಲಿ ಅವಧಿ ಮೀರಿದ ಚಾಕ್ಲೇಟ್ ಸಾಸ್ ಬಳಕೆ ಆಗುತ್ತಿರುವುದು ಕಂಡು ಬಂದಿದೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕೇಕ್ ಕಾರ್ನರ್ ಬೇಕರಿ ವಿರುದ್ಧ ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ. ಕೇಕ್ ಕಹಿ ಎಂದು ಗ್ರಾಹಕ ಪರೀಕ್ಷಿಸಿದಾಗ ಅವಧಿ ಮೀರಿದ ಸಾಸ್ ಬಳಕೆ ಮಾಡುತ್ತಿರುವುದು ಬಹಿರಂಗಗೊಂಡಿದೆ. ಈ ಬಗ್ಗೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಹಕ, ಇಂತಹ ಕೇಕ್ ಮಕ್ಕಳು ತಿಂದು ಏನಾದರೂ ಹೆಚ್ಚು-ಕಮ್ಮಿ ಆಗಿ ಆಸ್ಪತ್ರೆ ಸೇರಿದರೆ ಜವಾಬ್ದಾರಿ ಯಾರೆಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ರೀತಿ ಕೊಳೆತ ಕೇಕ್ ಮಾರಿದರೆ ಜನರ ಆರೋಗ್ಯದ ಕಥೆ ಏನು? ಅವಧಿ ಮುಗಿದು ತಿಂಗಳಾಗಿದೆ ಇಂಥಾ ಸಾಸ್ ಹಾಕಿ ಏಕೆ ಕೇಕ್ ಮಾಡಿದ್ದೀರಾ? ಕೇಕ್ ಕೂಡ ಕೊಳೆತ ವಾಸನೆ ಬರುತ್ತಿದೆ, ಸಾಸ್ ಕಹಿ ಇದೆ. ಕಹಿ ಕೇಕ್ ಗೆ ಹಣ ಕೊಡಲ್ಲ, ಇದನ್ನ ಇಲ್ಲಿಗೆ ಬಿಡಲ್ಲ ಎಂದು ಗ್ರಾಹಕ ಬೇಕರಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಹಕರ ಆಕ್ರೋಶ ಬೆನ್ನಲ್ಲೇ ಸಮಾಜಾಯಿಷಿ ಮುಂದಾದ ಸಿಬ್ಬಂದಿ, ಮಿಸ್ ಆಗಿ ಬಂದಿದೆ ಅಷ್ಟೇ. ಕೇಕ್ ಹಣವನ್ನು ವಾಪಸ್ ಕೊಡ್ತೀವಿ ಎಂದು ಹಾರಿಕೆ ಉತ್ತರವನ್ನು ನೀಡಿದ್ದಾರೆ.