ಕೂಲಿ ಕೆಲಸ ಅರಸಿ ಬೆಂಗಳೂರಿಗೆ ಬಂದ ಎರಡೇ ದಿನಕ್ಕೆ ಯುವಕನ ದುರಂತ ಅಂತ್ಯ! ಆತನ ಬಾಳಲ್ಲಿ ಅಂತದ್ದೇನಾಯ್ತು?

Published : Apr 21, 2026, 02:30 PM IST
Bengaluru Tragedy Migrant Worker  self death

ಸಾರಾಂಶ

ಕೂಲಿ ಕೆಲಸಕ್ಕಾಗಿ ಜಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಿದ್ದ ರಾಜು ಪಹರಿಯಾ ಎಂಬ ಯುವಕ, ಕೇವಲ ಎರಡು ದಿನಗಳಲ್ಲಿ ಟಿಪ್ಪರ್ ಲಾರಿಯ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈಯಕ್ತಿಕ ಸಮಸ್ಯೆಯಿಂದ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಬೆಂಗಳೂರು: ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದ ಯುವಕನು ಕೇವಲ ಎರಡು ದಿನಗಳಲ್ಲೇ ಆತ್ಮ*ಹತ್ಯೆಗೆ ಶರಣಾದ ದಾರುಣ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಆತ್ಮ*ಹತ್ಯೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯ ಕ್ರೂರತೆಯನ್ನು ಬಯಲಿಗೆಳೆದಿದೆ.

ಮೃತನನ್ನು ಜಾರ್ಖಂಡ್ ರಾಜ್ಯದ ಚಾನೋ ಗ್ರಾಮದ ನಿವಾಸಿ ರಾಜು ಪಹರಿಯಾ ಎಂದು ಗುರುತಿಸಲಾಗಿದೆ. ರಾಜು ಏಪ್ರಿಲ್ 11ರಂದು ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಿ, ಕೆಂಗೇರಿಯ ದೊಡ್ಡಬೆಲೆ ರಸ್ತೆಯಲ್ಲಿರುವ ಪ್ರಾವಿಡೆಂಟ್ ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.

ಟಿಪ್ಪರ್ ಲಾರಿಯತ್ತ ಓಡಿ ಹೋಗಿ ನೆಗೆದ

ಪೊಲೀಸರ ಮಾಹಿತಿ ಪ್ರಕಾರ, ಏಪ್ರಿಲ್ 13ರಂದು ಮಧ್ಯಾಹ್ನ ಸುಮಾರು 1:30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಘಟನೆಗೆ ಮೊದಲು ರಾಜು ರಸ್ತೆ ಪಕ್ಕದ ಅಂಗಡಿ ಬಳಿ ಕುಳಿತಿದ್ದನು. ಬಳಿಕ ಏಕಾಏಕಿ ಎದ್ದು, ರಸ್ತೆಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯತ್ತ ಓಡಿ ಹೋಗಿ, ಅದರ ಕೆಳಗೆ ನೆಗೆದಿದ್ದಾನೆ.

ಕೆ.ಎ-51-ಎ.ಎಂ-6579 ಸಂಖ್ಯೆಯ ಟಿಪ್ಪರ್ ಲಾರಿಯ ಚಕ್ರಗಳು ರಾಜು ಮೇಲೆ ಹರಿದ ಪರಿಣಾಮ, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭಯಾನಕ ಘಟನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ದೃಶ್ಯಗಳು ಮನಕಲುಕುವಂತಿವೆ.

ವೈಯಕ್ತಿಕ ಸಮಸ್ಯೆ

ವೈಯಕ್ತಿಕ ಸಮಸ್ಯೆಯಿಂದ ಮನನೊಂದು ರಾಜು ಈ ದಾರುಣ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕೂಲಿ ಕೆಲಸಕ್ಕಾಗಿ ದೊಡ್ಡ ನಿರೀಕ್ಷೆಗಳೊಂದಿಗೆ ನಗರಕ್ಕೆ ಬಂದಿದ್ದ ಆತ, ಅಲ್ಪ ಸಮಯದಲ್ಲೇ ಬದುಕಿಗೆ ತೆರೆ ಎಳೆದಿರುವುದು ದುಃಖಕರ ಸಂಗತಿಯಾಗಿದೆ.

ಈ ಸಂಬಂಧ ಮೃತನ ಸಂಬಂಧಿ ಪರಮೇಶ್ವರ್ ನೀಡಿದ ದೂರಿನ ಮೇರೆಗೆ ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಒಟ್ಟಿನಲ್ಲಿ, ಬದುಕಿನ ಸಂಕಷ್ಟಗಳನ್ನು ಎದುರಿಸಲು ಸಾಧ್ಯವಾಗದೆ ಯುವಕನು ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಸಮಾಜಕ್ಕೆ ಎಚ್ಚರಿಕೆಯ ಸಂಕೇತವಾಗಿದ್ದು, ಮಾನಸಿಕ ಆರೋಗ್ಯದ ಮಹತ್ವವನ್ನು ಮತ್ತೊಮ್ಮೆ ನೆನಪಿಸುತ್ತದೆ.

PREV
Read more Articles on
click me!

Recommended Stories

'ಇನ್ಮುಂದೆ ಕಾಂಗ್ರೆಸ್‌ ಸ್ಮಶಾನಕ್ಕೆ ಹೋದ ಹೆಣದಂತೆ' ಗುಂಡ್ಲುಪೇಟೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಗುಡುಗು
ತಂಗಿಯನ್ನು ಚುಡಾಯಿಸಿದಕ್ಕೆ ಯುವಕನ ಎತ್ತಾಕೊಂಡೋಗಿ ಸರಿಯಾಗಿ ಬಾರಿಸಿದ ಅಕ್ಕ