ಬೆಂಗಳೂರು: ಬೈಕ್ ವ್ಲೀಲಿಂಗ್ ಮಾಡಿ ವೈರಲ್ ಆದ ಹೀರೋ, ಪೊಲೀಸರು ಅರೆಸ್ಟ್ ಮಾಡಿ ಕಳಿಸಿದರು ಜೀರೋ!

Published : Feb 12, 2026, 04:11 PM IST
Bengaluru bike wheeling arrest

ಸಾರಾಂಶ

ಬೆಂಗಳೂರಿನಲ್ಲಿ ಬೈಕ್ ವ್ಹೀಲಿಂಗ್ ಮಾಡಿ, ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲು ಯತ್ನಿಸಿದ ಯುವಕನನ್ನು ರಾಜಾಜಿನಗರ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಸ್ಥಳೀಯರು ಸನ್ಮಾನಿಸಿದ್ದರು, ಆದರೆ ವಿಡಿಯೋ ಆಧರಿಸಿ ಪೊಲೀಸರು ಆತನನ್ನು ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು (ಫೆ.12): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೈಕ್ ವ್ಹೀಲಿಂಗ್ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಪ್ರಾಣದ ಹಂಗು ತೊರೆದು ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಇಂತಹದ್ದೇ ಒಂದು ಘಟನೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಮಾಡಲು ಹೋಗಿ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಸನ್ಮಾನದ ಹಿಂದೆ ಅಡಗಿತ್ತು ವಿಪರ್ಯಾಸ:

ವಿಷಯ ಏನೆಂದರೆ, ವ್ಹೀಲಿಂಗ್ ಮಾಡಿದ ಈ ಯುವಕನ ಶೌರ್ಯದ (?) ಕಥೆಯನ್ನು ಕಂಡು ಸ್ಥಳೀಯವಾಗಿ ಕೆಲವರು ಆತನನ್ನು ಸನ್ಮಾನಿಸಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಕಾನೂನುಬಾಹಿರವಾಗಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ಕೃತ್ಯಗಳಿಗೆ ಸನ್ಮಾನ ಮಾಡಿದ ಬೆನ್ನಲ್ಲೇ, ರಾಜಾಜಿನಗರ ಸಂಚಾರ ಪೊಲೀಸರು ಎಂಟ್ರಿ ಕೊಟ್ಟು ಆರೋಪಿಯ ಮರ್ಯಾದೆ ಹರಾಜು ಹಾಕಿದ್ದಾರೆ.

ಖಾಲಿ ರಸ್ತೆ ಕಂಡರೆ ಸಾಕು ಕಸರತ್ತು:

ಬಂಧಿತ ಯುವಕ ಖಾಲಿ ರಸ್ತೆ ಕಂಡರೆ ಸಾಕು, ತನ್ನ ಬೈಕ್‌ನಲ್ಲಿ ಮುಂಗಾಲಿ ಎತ್ತಿ ವ್ಹೀಲಿಂಗ್ ನಡೆಸುತ್ತಿದ್ದ. ಕೇವಲ ಸ್ಟಂಟ್ ಮಾಡುವುದು ಅಷ್ಟೇ ಅಲ್ಲದೆ, ಅದನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ. ಸೋಷಿಯಲ್ ಮೀಡಿಯಾದಲ್ಲಿ 'ಲೈಕ್ಸ್' ಮತ್ತು 'ಶೇರ್'ಗಳ ಮೂಲಕ ವೈರಲ್ ಆಗಬೇಕೆಂಬ ಹಂಬಲವೇ ಈತನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿತ್ತು. ಪದೇ ಪದೇ ಇಂತಹ ಕೃತ್ಯಗಳನ್ನು ಎಸಗುತ್ತಿದ್ದ ಈತನ ವಿರುದ್ಧ ದೂರುಗಳು ಬಂದಿದ್ದವು.

ಪೊಲೀಸರ ಬಲೆಯಲ್ಲಿ ವೈರಲ್ ಹೀರೊ:

ಯುವಕ ಪೋಸ್ಟ್ ಮಾಡಿದ್ದ ವಿಡಿಯೋಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ರಾಜಾಜಿನಗರ ಸಂಚಾರ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಯುವಕನನ್ನು ಬಂಧಿಸಲಾಗಿದ್ದು, ಆತನ ಬೈಕ್ ವಶಪಡಿಸಿಕೊಳ್ಳಲಾಗಿದೆ. 'ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ಸಹಿಸುವುದಿಲ್ಲ' ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ವ್ಹೀಲಿಂಗ್ ಹಾವಳಿಯನ್ನು ತಡೆಗಟ್ಟಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೂ ಕೂಡ ಯುವ ಸಮುದಾಯ ಈ ಅಪಾಯಕಾರಿ ಹಾದಿಯನ್ನು ಹಿಡಿಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಪೋಷಕರು ತಮ್ಮ ಮಕ್ಕಳ ಮೇಲೆ ಗಮನ ಹರಿಸಬೇಕು ಮತ್ತು ಇಂತಹ ಹುಚ್ಚಾಟಗಳಿಗೆ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಮೆಟ್ರೋ ಹಂತ 3 ಎ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನಿರಾಕರಣೆ: ಬಿಎಂಆರ್‌ಸಿಎಲ್ ಪ್ರತಿಕ್ರಿಯೆ
ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ತಡೆ, ಪ್ರಧಾನಿಗೆ ಸ್ವತಃ ನಾನೇ ತೋರಿಸಿದ್ದೇನೆ, ಅವರಿಗೆಲ್ಲಾ ಗೊತ್ತಿದೆ: ಡಿಕೆಶಿ