
ಬೆಂಗಳೂರು (ಏ.09): ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಆಟವಾಡುತ್ತಿದ್ದ 11 ವರ್ಷದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾ*ಚಾರ ಎಸಗಿರುವ ಘೋರ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂತರ, 150 ರೂ. ಕೊಟ್ಟು ಕಳುಹಿಸಿದ ಘಟನೆ ನಡೆದಿದೆ.
ಬಿಹಾರ ಮೂಲದ ಮೊಹಮ್ಮದ್ ಮುನ್ನ (28) ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಮೊಹಮ್ಮದ್ ಮುನ್ನ ಎಂಬಾತ ಬೆಂಗಳೂರಿನ ಜ್ಞಾನಭಾರತಿ ವ್ಯಾಪ್ತಿಯಲ್ಲಿ ವಾಸವಾಗಿದ್ದ. ನಿನ್ನೆ ಸಂಜೆ ವೇಳೆ ಬಾಲಕಿ ತನ್ನ ಮನೆಯ ಸಮೀಪ ಆಟವಾಡುತ್ತಿದ್ದಳು. ಈ ವೇಳೆ ಬಾಲಕಿಯನ್ನು ಪುಸಲಾಯಿಸಿದ ಆರೋಪಿ, ಸಮೀಪದಲ್ಲೇ ಇದ್ದ ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕಿಯ ಮೇಲೆ ಅಮಾನವೀಯವಾಗಿ ಅತ್ಯಾ*ಚಾರ ಎಸಗಿದ್ದಾನೆ. ಇಷ್ಟೇ ಅಲ್ಲದೆ, ತನ್ನ ಕಾಮದ ಹಸಿವು ತೀರಿಸಿಕೊಂಡ ಬಳಿಕ ಬಾಲಕಿಯ ಕೈಗೆ 150 ರೂಪಾಯಿ ಹಣವನ್ನು ನೀಡಿ ಅಲ್ಲಿಂದ ಕಳುಹಿಸಿದ್ದಾನೆ.
ಕೆಲ ಹೊತ್ತಿನಿಂದ ಮಗಳು ಕಾಣದಿದ್ದಾಗ ಆತಂಕಗೊಂಡ ಪೋಷಕರು ಆಕೆಯನ್ನು ಹುಡುಕಲು ಆರಂಭಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಬಾಲಕಿ ಮನೆಗೆ ವಾಪಸ್ ಬಂದಿದ್ದಾಳೆ. ಆಗ ಬಾಲಕಿಯ ಕೈಯಲ್ಲಿದ್ದ ಹಣವನ್ನು ನೋಡಿ ಪೋಷಕರು ಅನುಮಾನಗೊಂಡು ಪ್ರಶ್ನಿಸಿದ್ದಾರೆ. ಪೋಷಕರು ಹಣ ಎಲ್ಲಿಂದ ಬಂತು ಎಂದು ಕೇಳಿದಾಗ, ಬಾಲಕಿಯು ನಡೆದ ಘಟನೆಯ ಬಗ್ಗೆ ತನಗೆ ಏನೂ ಅರಿವಿಲ್ಲ ಎಂಬಂತೆ ಎಲ್ಲ ಮಾಹಿತಿಯನ್ನೂ ಬಿಚ್ಚಿಟ್ಟಿದ್ದಾಳೆ.
ಮಗಳ ಮೇಲಾದ ಈ ದೌರ್ಜನ್ಯದಿಂದ ಗಾಬರಿಗೊಂಡು ತಕ್ಷಣವೇ ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ಮೊಹಮ್ಮದ್ ಮುನ್ನಾ ಎಂಬಾತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ನಗರದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.