ಬೆಂಗಳೂರು: ಲಿವಿಂಗ್ ಇನ್‌ ಟುಗೆದರ್‌, ಮೋಜಿನ ಜೀವನ, ಬೀಗ ಹಾಕಿದ ಮನೆಯೇ ಟಾರ್ಗೆಟ್‌ ಮಂಡ್ಯ ರ್‍ಯಾಪಿಡೋ ಚಾಲಕನ ಕಳ್ಳತನ!

Published : Apr 18, 2026, 04:51 PM IST
 Rapido

ಸಾರಾಂಶ

ಬೆಂಗಳೂರಿನಲ್ಲಿ ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ರ್‍ಯಾಪಿಡೋ ಚಾಲಕ ನಾಗರಾಜ್‌ನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ಪ್ರೇಯಸಿಯೊಂದಿಗಿನ ಮೋಜಿನ ಜೀವನಕ್ಕಾಗಿ ಈ ಕೃತ್ಯ ಎಸಗುತ್ತಿದ್ದು, ಆತನಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು: ನಗರದಲ್ಲಿ ಹಗಲು ಹೊತ್ತಿನಲ್ಲೇ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ರ್‍ಯಾಪಿಡೋ ಕ್ಯಾಬ್ ಚಾಲಕನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ರಾಮಮೂರ್ತಿ ನಗರದ ನಿವಾಸಿ ನಾಗರಾಜ್ ಎಂದು ಗುರುತಿಸಲಾಗಿದ್ದು, ಆತನಿಂದ ಸುಮಾರು 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಒಂದು ಬೈಕ್ ಸೇರಿದಂತೆ ಒಟ್ಟು 35 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಲ ದಿನಗಳ ಹಿಂದೆ ಜಯನಗರದ ಟಿ ಬ್ಲಾಕ್ ಪ್ರದೇಶದಲ್ಲಿ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ವಿಶ್ವನಾಥ್ ನೇತೃತ್ವದ ಪೊಲೀಸ್ ತಂಡ ತಾಂತ್ರಿಕ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ಮಂಡ್ಯ ಮೂಲದವನಿಗೆ ಕ್ರಿಮಿನಲ್ ಹಿನ್ನೆಲೆ

ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾಮದ ಮೂಲದ ನಾಗರಾಜ್‌ಗೆ ಕ್ರಿಮಿನಲ್ ಹಿನ್ನೆಲೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ರ್‍ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆತ, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕಳ್ಳತನದ ದಾರಿಗೆ ತಿರುಗಿದ್ದಾನೆ. ರಾಮಮೂರ್ತಿ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ.

ನಾಗರಾಜ್‌ ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡುವುದರಲ್ಲಿ ಪರಿಣತನಾಗಿದ್ದನು. ಮನೆಯವರು ಹೊರಗೆ ತೆರಳುವ ವೇಳೆ ಗೇಟ್ ಮತ್ತು ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡಿರುವ ಮನೆಗಳನ್ನು ಗುರುತಿಸಿ, ಅವುಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಈ ರೀತಿಯಾಗಿ ಮನೆಗಳಲ್ಲಿ ಯಾರೂ ಇಲ್ಲದ ಸಮಯವನ್ನು ಸದುಪಯೋಗಪಡಿಸಿಕೊಂಡು ಆತನಿಂದ ಹಲವಾರು ಕೃತ್ಯಗಳು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಕಳೆದ ತಿಂಗಳು ಜಯನಗರದ 4ನೇ ಹಂತದಲ್ಲಿ ವಾಸವಾಗಿರುವ ಕುಟುಂಬವೊಂದು ಮನೆ ಬಾಗಿಲಿಗೆ ಚೀಲ ಹಾಕಿ, ಗೇಟ್ ಲಾಕ್ ಮಾಡಿಕೊಂಡು ದಿನಸಿ ಖರೀದಿಗೆ ತೆರಳಿತ್ತು. ಈ ವೇಳೆ ಮನೆಯೊಳಗೆ ನುಗ್ಗಿದ ನಾಗರಾಜ್ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ನಂತರ ಮನೆಮಂದಿ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಲಿವಿಂಗ್ ಇನ್‌ ಟುಗೆದರ್‌, ಮೋಜಿನ ಜೀವನಕ್ಕೆ ಕಳ್ಳತನ!

ಇನ್ನು ವೈಯಕ್ತಿಕ ಜೀವನದಲ್ಲಿ, ನಾಗರಾಜ್ ತನ್ನ ಪ್ರೇಯಸಿಯೊಂದಿಗೆ ಸಹಜೀವನ (ಲಿವಿಂಗ್ ಇನ್‌ ಟುಗೆದರ್‌) ನಡೆಸುತ್ತಿದ್ದನು. ಕಳ್ಳತನದ ಮೂಲಕ ಗಳಿಸಿದ ಹಣವನ್ನು ವೈಭವಯುತ ಜೀವನಕ್ಕೆ ಹಾಗೂ ಮೋಜು-ಮಸ್ತಿಗೆ ಬಳಸುತ್ತಿದ್ದನೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ, ನಗರದಲ್ಲಿ ಹೆಚ್ಚುತ್ತಿರುವ ಮನೆಕಳ್ಳತನ ಪ್ರಕರಣಗಳ ನಡುವೆಯೇ ತಿಲಕನಗರ ಪೊಲೀಸರ ಈ ಕಾರ್ಯಾಚರಣೆ ಪ್ರಮುಖವಾಗಿದ್ದು, ಆರೋಪಿಯನ್ನು ಬಂಧಿಸುವ ಮೂಲಕ ಇನ್ನಷ್ಟು ಕೃತ್ಯಗಳನ್ನು ತಡೆಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

Shivamogga: ನಾನ್‌ವೆಜ್ ತಿನ್ನೋವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಪ್ರಾಣಬಿಟ್ಟ 21 ವರ್ಷದ ಯುವಕ
ಬಿಸಿಲಿಗೆ ಇಬ್ಬರು ಭಕ್ತರ ಸಾವು ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಅಂಜನಾದ್ರಿ ಬೆಟ್ಟಕ್ಕೆ ಪ್ರವೇಶಕ್ಕಿಲ್ಲ ಅವಕಾಶ!