ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾದಲ್ಲಿ ಬಿಬಿಎಂಪಿ ಸಹಾಯವಾಣಿ 1533ಗೆ ಕರೆ ಮಾಡಿ ಎಂದು ಆಯುಕ್ತರು ತಿಳಿಸಿದ್ದಾರೆ. ಯಲಹಂಕದಲ್ಲಿ ಹೆಚ್ಚು ಮಳೆಯಾಗಿದ್ದು, ಮರ ಬಿದ್ದು ಮಗು ಸಾವನ್ನಪ್ಪಿದೆ. ತಕ್ಷಣವೇ ದೂರುಗಳನ್ನು ಸ್ವೀಕರಿಸಲು ಸೂಚನೆ ನೀಡಲಾಗಿದೆ.
ಬೆಂಗಳೂರು (ಮಾ.23): ರಸ್ತೆ ಮೂಲಭೂತ ಸೌಕರ್ಯ ಮತ್ತು ಬೃಹತ್ ನೀರುಗಾಲುವೆ ವಿಭಾಗದ ಇಂಜಿನಿಯರ್ ಗಳು ಹಾಗೂ ಅರಣ್ಯ ವಿಭಾಗದ ಸಿಬ್ಬಂದಿಗಳು, ತಕ್ಷಣವೇ ಪರಿಶೀಲನೆ ನಡೆಸಬೇಕು. ಸಾರ್ವಜನಿಕರು ಮಳೆಯಿಂದ ಹಾನಿಗೊಳಗಾದಲ್ಲಿ ಬಿಬಿಂಪಿ ಸಹಾಯವಾಣಿ 1533ಗೆ ಕರೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬೆಂಗಳೂರಿನ ವಾರ್ಡ್ ರಸ್ತೆಗಳು ಮತ್ತು ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛವಾಗಿಡಬೇಕು. ಮಳೆಯಿಂದ ಸಮಸ್ಯೆಯಾಗಿರುವ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಇರುವ ಸಮಸ್ಯೆಯನ್ನು ಬಗೆಹರಿಸಬೇಕು. ಪಾಲಿಕೆಯ ಎಲ್ಲಾ 8 ವಲಯಗಳ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಾಗರಿಕರಿಂದ ಬರುವ ದೂರುಗಳಿಗೆ ಕೂಡಲೆ ಸ್ಪಂದಿಸಬೇಕು. ರಸ್ತೆಯಲ್ಲಿ ನಿಂತಿರುವ ನೀರು, ಧರೆಗುರುಳಿದ ಮರಗಳು, ರೆಂಬೆ ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಪಾಲಿಕೆಯ ಅಧಿಕಾರಿ/ಸಿಬ್ಬಂದಿಗಳು ಸ್ಥಳದಲ್ಲಿದ್ದು ಸಮಸ್ಯೆಗಳನ್ನು ಬಗೆಹರಿಸುವಂತೆ ತಿಳಿಸಿದ್ದಾರೆ.
ಯಲಹಂಕ ವಲಯದಲ್ಲಿ ಹೆಚ್ಚು ಮಳೆ:
ಯಲಹಂಕ ವಲಯದ ಜಕ್ಕೂರು ವ್ಯಾಪ್ತಿಯಲ್ಲಿ 46 ಎಂ.ಎಂ ಮಳೆಯಾಗಿದ್ದು, ಕೋಗಿಲು ಜಂಕ್ಷನ್ ನಲ್ಲಿ ಜಲಾವೃತವಾಗಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಈ ಸಂಬಂಧ ವಲಯ ಆಯುಕ್ತರಾದ ಕರೀಗೌಡ, ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್ ರವರು ನಿಯಂತ್ರಣ ಕೊಠಡಿಗೆ ತೆರಳಿ ಮೇಲ್ವಿಚಾರಣೆ ಮಾಡದ್ದಾರೆ. ಜೊತೆಗೆ ಸಮಸ್ಯೆಯಾಗಿರುವ ಸ್ಥಳಗಳಾದ ಕೋಗಿಲು ಜಂಕ್ಷನ್ ಹಾಗು ಇನ್ನಿತರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋಗಿಲು ಜಂಕ್ಷನ್ ನಲ್ಲಾಗಿದ್ದ ಸಮಸ್ಯೆಯನ್ನು ಕೂಡಲೆ ಬಗೆಹರಿಸಲಾಗಿದೆ. ಯಲಹಂಕದ ಕ್ಯಾಲಿಫೋರ್ನಿಯಾದ ರಮಣಶ್ರೀಗೆ ಭೇಟಿ ನೀಡಿ, ಸ್ಥಳದಲ್ಲಿ ನಾಲ್ಕು ಪಂಪ್ ಗಳನ್ನು ಅಳವಡಿಸಿ ನೀರನ್ನು ತೆರವುಗೊಳಿಸಲಾಗುತ್ತಿದೆ.
ಇದನ್ನೂ ಓದಿ: Karnataka News Live 23rd March: ಕರ್ನಾಟಕದಲ್ಲಿ ಭಾರೀ ಮಳೆ; ಬೆಂಗಳೂರಿನ ಮಳೆಗೆ ಮಗು ಸಾವು; 5 ದಿನ ಮಳೆ
ಮರ ಬಿದ್ದು ಮಗು ಸಾವು: ಪೂರ್ವ ವಲಯದ ಜೀವನ್ ಭೀಮಾ ನಗರ ವ್ಯಾಪ್ತಿಯಲ್ಲಿ ಮಳೆಯಲ್ಲಿ ಸತ್ಯ ಎಂಬುವವರು ರಕ್ಷ ಎಂಬ 3 ವರ್ಷದ ಮಗುವಿನ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಮರ ಬಿದ್ದಿರುತ್ತದೆ. ಈ ಸಂಬಂಧ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಾಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸತ್ಯ ರವರಿಗೆ ಸಣ್ಣ-ಪುಟ್ಟ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಪೂರ್ವ ವಲಯ ಜಂಟಿ ಆಯುಕ್ತರಾದ ಸರೋಜ, ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಿ.ಎಲ್.ಜಿ ಸ್ವಾಮಿ ಹಾಗೂ ಅರಣ್ಯ ವಿಭಾಗ ಅಧಿಕಾರಿಗಳು ಸ್ಥಳದಲ್ಲಿದ್ದು, ಖುದ್ದು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಗರದಲ್ಲಿ 30 ಮರ ಹಾಗೂ 42 ರೆಂಬೆ/ಕೊಂಬೆಗಳು ಧರೆಗುರುಳಿದ್ದು, ಅರಣ್ಯ ವಿಭಾಗದ ಸಿಬ್ಬಂದಿಗಳು ತೆರವು ಕಾರ್ಯಾಚರಣೆಯನ್ನು ಸಕ್ರಿಯವಾಗಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಂತೂ ಇಂತೂ ಮಳೆ ಕಂಡ ಬೆಂಗಳೂರಿಗರು, ವರುಣನ ಆರ್ಭಟಕ್ಕೆ ಅವಾಂತರವೋ ಅವಾಂತರ!
1533 ಗೆ ಕರೆ ಮಾಡಿ: ನಗರದಲ್ಲಿ ಮಳೆಯಿಂದ ಏನಾದರು ಸಮಸ್ಯೆಯಾಗಿದ್ದರೆ ಕೂಡಲೆ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಗೆ ಕರೆ ಮಾಡಿ ದೂರು ನೀಡಬಹುದು. ಇದರ ಜೊತೆಗೆ ಪಾಲಿಕೆ 8 ವಲಯಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದಾಗಿದೆ.