
ಬೆಂಗಳೂರು (ಜೂ.12): ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Bengaluru KadugodiPolice Station) ವಕೀಲೆ ತಾಯಿ ಪ್ರಿಯಾಂಕ (Advocate Priyanka) ಹಾಗೂ ಆಕೆಯ ಪ್ರಿಯಕರ ಉದ್ಯಮಿ ಮೋಹನ್(Businessman Mohan) ಅವರಿಂದ ನಡೆದ 6 ವರ್ಷದ ಬಾಲಕಿ ವೆನ್ನೆಲಾ ಕೊಲೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು (Bengaluru Police suspended) ಅಮಾನತುಗೊಳಿಸಲಾಗಿದೆ. ಆರಂಭದಲ್ಲಿ ಈ ಸಾವನ್ನು ಸಾಮಾನ್ಯ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಪೊಲೀಸರ ನಡೆಯಿಂದ ಸ್ಥಳೀಯ ಜನರಿಂದಲೇ ಆಕ್ರೋಶ ವ್ಯಕ್ತವಾಗಿತ್ತು.
ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಶುಕ್ರವಾರ ಈ ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡವರಲ್ಲಿ ಅಂದಿನ ಕಾಡುಗೋಡಿ ಇನ್ಸ್ಪೆಕ್ಟರ್ ರಂಗಸ್ವಾಮಿ ಹೆಚ್.ಎಂ., ಪಿಎಸ್ಐ ನಿಂಗರಾಜು ಅಣ್ಣಿನವರ್ ಮತ್ತು ಕಾನ್ಸ್ಟೇಬಲ್ ಹಾಲೇಶ್ ನಾಯಕ್ ಸೇರಿದ್ದಾರೆ. ಇವರು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಪ್ರಾಥಮಿಕ ವರದಿಯ ಆಧಾರದ ಮೇಲೆ ಈ ಶಿಸ್ತು ಕ್ರಮ ಜರುಗಿಸಲಾಗಿದೆ.
ಮಾರ್ಚ್ 25 ರಂದು ಸೀಗೆಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ 6 ವರ್ಷದ ವೆನ್ನೆಲಾ ಶವವಾಗಿ ಪತ್ತೆಯಾಗಿದ್ದಳು. ಬಾಲಕಿ ತನ್ನ ತಾಯಿ, ವಕೀಲೆ ಪ್ರಿಯಾಂಕಾ ಮತ್ತು ಆಕೆಯ ಲಿವ್-ಇನ್ ಪಾಲುದಾರ ರಿಯಲ್ ಎಸ್ಟೇಟ್ ಉದ್ಯಮಿ ಜಿ.ಎಂ. ಮೋಹನ್ ಜೊತೆ ವಾಸವಿದ್ದಳು. ಆರಂಭದಲ್ಲಿ ಇದು ವಿಷ ಆಹಾರ ಸೇವನೆ ಅಥವಾ 'ಫುಡ್ ಪಾಯ್ಸನಿಂಗ್'ನಿಂದ ಸಂಭವಿಸಿದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ, ಬಾಲಕಿಯ ತಂದೆ ಪ್ರವೀಣ್ ಬಸಪ್ಪ ಇದು ಕೊಲೆ ಎಂದು ಗಂಭೀರ ಆರೋಪ ಮಾಡಿದ್ದರು.
ಪ್ರಿಯಾಂಕಾ ತನ್ನ ಮಗಳ ಸಾವಿನ ಬಗ್ಗೆ ನೀಡಿದ್ದ ಹೇಳಿಕೆಗಳು ಅನುಮಾನಾಸ್ಪದವಾಗಿದ್ದವು. ಬಾಲಕಿಗೆ ಬಿರಿಯಾನಿ ಮತ್ತು ಐಸ್ ಕ್ರೀಮ್ ಕೊಡಿಸಿ ಎಸಿ ಕಾರಿನಲ್ಲೇ ಮಲಗಿಸಿ ಹೋಗಿದ್ದಾಗಿ ಆಕೆ ಹೇಳಿದ್ದಳು. ಪ್ರವೀಣ್ ಅವರ ಸಹೋದರಿ (ಯುನೈಟೆಡ್ ಕಿಂಗ್ಡಮ್ನಲ್ಲಿ ಮಕ್ಕಳ ತಜ್ಞೆ) ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿದಾಗ, ಮಗುವಿನ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರವೀಣ್ ಅವರು ಪೊಲೀಸರ ಮೇಲೆ ಒತ್ತಡ ಹೇರಿದಾಗ ಪ್ರಕರಣ ಕೊಲೆ ಕೇಸ್ ಆಗಿ ಬದಲಾಯಿತು.
ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಸುಳಿವುಗಳಿದ್ದರೂ ಕಾಡುಗೋಡಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಅಥವಾ ತನಿಖೆಯಲ್ಲಿ ಮಂದಗತಿ ತೋರಿದ ಕಾರಣಕ್ಕಾಗಿ ಈಗ ಆಯುಕ್ತರು ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಆರೋಪಿಗಳಾದ ಪ್ರಿಯಾಂಕಾ ಮತ್ತು ಮೋಹನ್ ಇಬ್ಬರನ್ನೂ ಬಂಧಿಸಲಾಗಿದೆ.
ಈಗ ಪ್ರಕರಣದ ತನಿಖೆಯನ್ನು ಮತ್ತೊಬ್ಬ ಎಸಿಪಿ ದರ್ಜೆಯ ಅಧಿಕಾರಿಗೆ ವಹಿಸಲಾಗಿದೆ. ಪೊಲೀಸರು ಆರೋಪಿಗಳ ಜೊತೆ ಶಾಮೀಲಾಗಿದ್ದಾರೆಯೇ ಅಥವಾ ತನಿಖೆಯಲ್ಲಿ ಉದ್ದೇಶಪೂರ್ವಕ ವೈಫಲ್ಯ ಕಂಡಿದ್ದಾರೆಯೇ ಎಂಬ ಬಗ್ಗೆ ಇಲಾಖಾ ವಿಚಾರಣೆ ಮುಂದುವರಿದಿದೆ.